ಪಾಕಿಸ್ತಾನಕ್ಕೆ ತಕ್ಕ ಉತ್ತರ, 3 ಉಗ್ರನೆಲೆ ಧ್ವಂಸ: ರಾವತ್ ಹೇಳಿದ್ದೇನು?
ನವದೆಹಲಿ, ಅಕ್ಟೋಬರ್ 21: ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದ ಸುಮಾರು 10 ಕ್ಕೂ ಹೆಚ್ಚು ಪಾಕ್ ಸೈನಿಕರನ್ನು ಭಾರತ ಹತ್ಯೆಗೈದಿದ್ದು, ಅಷ್ಟೇ ಸಂಖ್ಯೆಯ ಉಗ್ರರನ್ನೂ ಮೂರು ಉಗ್ರನೆಲೆಯನ್ನೂ ಧ್ವಂಸಗೊಳಿಸಲಾಗಿದೆ ಎಂದು ಭಾನುವಾರ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಖಚಿತ ಪಡಿಸಿದ್ದರು.
ಜಮ್ಮು ಮತ್ತು ಕಾಶ್ಮೀರದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿದ ರಾವತ್, ಕೆಲವರು ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.
ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂಥ ಎದುರೇಟು; ಖಾತ್ರಿ ಪಡಿಸಿದ ಸೇನಾ ಮುಖ್ಯಸ್ಥರು
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ಆಗಸ್ಟ್ 5 ರಂದು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಕಾಶ್ಮೀರದಲ್ಲಿ ಶಾಂತಿ ಕದಡಲು ಹಲವರು ಪ್ರಯತ್ನಿಸುತ್ತಿದ್ದಾರೆ. ಅದರಲ್ಲಿ ಕೆಲವರು ಪಾಕಿಸ್ತಾನದ ಒಳಗಿನವರಾದರೆ, ಮತ್ತೆ ಕೆಲವರು ಪಾಕಿಸ್ತಾನದ ಹೊರಗಿನವರು ಕಣಿವೆ ರಾಜ್ಯದಲ್ಲಿ ಶಾಂತಿ ಕದಡುವ ಯತ್ನ ನಡೆಸುತ್ತಿದ್ದಾರೆ ಎಂದು ರಾವತ್ ಹೇಳಿದರು.
ಭಾರತದಿಂದ ಪಿಒಕೆ ಉಗ್ರ ನೆಲೆಗಳು ಧ್ವಂಸ; ಪಾಕ್ ನ ಐವರು ಯೋಧರ ಹತ್ಯೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಸದ್ಯಕ್ಕೆ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ. ಈ ಸಂದರ್ಭದಲ್ಲಿ ಶಾಂತಿ ಕದಡುವ ಯತ್ನ ಸಾಕಷ್ಟು ನಡೆಯುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರು ನುಸುಳಿದ್ದು ಮತ್ತು ಪಾಕ್ ಸೈನಿಕರು ನಮ್ಮ ಮೇಲೆ ದಾಳಿ ನಡೆಸಲು ಯತ್ನಿಸಿದ್ದು ಅದೇ ಕಾರಣಕ್ಕೆ. ಆದರೆ ಭಾರತೀಯ ಸೇನೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದ್ದು, 6 ರಿಂದ 10 ಪಾಕ್ ಸೈನಿಕರು ಮತ್ತು ಅಷ್ಟೇ ಸಂಖ್ಯೆಯ ಉಗ್ರರನ್ನು ಕೊಮದು ಹಾಕಿದೆ. ಮಾತ್ರವಲ್ಲ ಮೂರು ಉಗ್ರ ನೆಲೆಯನ್ನೂ ಅದು ಧ್ವಂಸಗೊಳಿಸಿದೆ ಎಂದು ರಾವತ್ ಹೇಳಿದರು.