ಚೀನಾ-ಭಾರತ ವಿವಾದ: 'ಮಾತುಕತೆ ಸಕಾರಾತ್ಮಕ' ಎಂದ ರಾಜನಾಥ್ ಸಿಂಗ್
ದೆಹಲಿ, ಜೂನ್ 8: ಚೀನಾ ಮತ್ತು ಭಾರತ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ಉಭಯ ದೇಶಗಳ ನಡುವೆ ಮಾತುಕತೆ ಸಕರಾತ್ಮಕವಾಗಿದ್ದು, ಉತ್ತಮ ಫಲಿತಾಂಶ ಸಿಗುವ ಸಾಧ್ಯತೆ ಇದೆ ಎಂಬ ಮುನ್ಸೂಚನೆ ಸಿಕ್ಕಿದೆ.
''ಚೀನಾದೊಂದಿಗೆ ಭಾರತದ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆ ಸಕಾರಾತ್ಮಕವಾಗಿದ್ದು, ಮುಂದುವರಿಯಲಿದೆ'' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಹೇಳಿದ್ದಾರೆ.
ಸೇನಾ ಚಟುವಟಿಕೆ ನಿಲ್ಲಿಸುತ್ತಿರೋ ಇಲ್ವೋ; ಚೀನಾಗೆ ಭಾರತದ ಎಚ್ಚರಿಕೆ!
ಮಹಾರಾಷ್ಟ್ರ ಬಿಜೆಪಿಯ ಜನ-ಸಂವಾದ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್ ''ಇಂಡೋ-ಚೀನಾ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ಭಾರತದ ಸ್ವಾಭಿಮಾನದ ಮೇಲೆ ಯಾವುದೇ ಪರಿಣಾಮ ಬೀರದಂತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೋಡಿಕೊಳ್ಳಲಿದೆ'' ಎಂದಿದ್ದಾರೆ.
''ಜೂನ್ 6ರ ಮಾತುಕತೆ ಬಹಳ ಸಕಾರಾತ್ಮಕವಾಗಿತ್ತು ಮತ್ತು ಪ್ರಸ್ತುತ ಬೆಳವಣಿಗೆಗಳನ್ನು ಬಗೆಹರಿಸಲು ಮಾತುಕತೆ ಮುಂದುವರಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ'' ಎಂದು ವಿದೇಶಾಂಗ ಸಚಿವ ಮಾಹಿತಿ ನೀಡಿದ್ದಾರೆ.
"ದೇಶವೂ ಬಲವಾದ ನಾಯಕತ್ವ ಹೊಂದಿದೆ. ಭಾರತದ ಹೆಮ್ಮೆ ಮತ್ತು ಸ್ವಾಭಿಮಾನದ ಬಗ್ಗೆ ನಾವು ಎಲ್ಲೂ ರಾಜಿ ಮಾಡಿಕೊಳ್ಳುವುದಿಲ್ಲ. ದೇಶದ ರಕ್ಷಣಾ ಸಚಿವರಾಗಿ ನಾನು ಏನು ಹೇಳಬೇಕು ಅದನ್ನು ನಾನು ಸಂಸತ್ತಿನೊಳಗೆ ಹೇಳುತ್ತೇನೆ, ನಾನು ಜನರನ್ನು ದಾರಿ ತಪ್ಪಿಸುವುದಿಲ್ಲ" ಎಂದು ಸಚಿವರು ಹೇಳಿದರು.
ಮತ್ತೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷದ ಕೆಲವು ನಾಯಕರು ಚೀನಾ ಮತ್ತು ಭಾರತದ ಗಡಿ ವಿವಾದದ ಕುರಿತು ಸ್ಪಷ್ಟೀಕರಣ ಕೋರಿದ್ದಾರೆ.