ಗಡಿಯಿಂದ ಹಿಂದೆ ಸರಿದ ಚೀನಾ: ಇಂದು ಮತ್ತೊಂದು ಸುತ್ತಿನ ಚರ್ಚೆ!
ದೆಹಲಿ, ಜುಲೈ 10: ಗಾಲ್ವಾನ್ ಕಣಿವೆಯ ಘರ್ಷಣೆ ಬಳಿಕ ಚೀನಾ ಮತ್ತು ಭಾರತದ ಗಡಿಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಇದೀಗ, ಅಂತಿಮವಾಗಿ ಚೀನಾ ಮತ್ತು ಭಾರತ ಸೇನೆಯೂ ಪರಸ್ಪರ ಒಪ್ಪಂದದ ಬಳಿಕ ಪಾಂಗೊಂಗ್ ಸರೋವರ ಪ್ರದೇಶದಿಂದ ಹಿಂದೆ ಸರಿದಿದ್ದಾರೆ.
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ)ಗುರುವಾರ ತನ್ನ ಸೈನ್ಯವನ್ನು ಪೂರ್ವ ಲಡಾಕ್ನ ಗೊಗ್ರಾ ಮತ್ತು ಹಾಟ್ ಸ್ಪ್ರಿಂಗ್ಸ್ನ ಎರಡು ಸ್ಥಳಗಳಿಂದ ಹಿಂದಕ್ಕೆ ತೆಗೆದುಕೊಳ್ಳುವ ಕಾರ್ಯವನ್ನು ಪೂರ್ಣಗೊಳಿಸಿದೆ.
Breaking: ಗಲ್ವಾನ್ ಕಣಿವೆಯಿಂದ ಹಿಂದಕ್ಕೆ ಸರಿದ ಭಾರತ-ಚೀನಾ ಪಡೆ
ಭಾನುವಾರ ನಡೆದ ಮಾತುಕತೆಯಲ್ಲಿ, ಗಾಲ್ವಾನ್ ವ್ಯಾಲಿ ಪ್ರದೇಶವನ್ನು ಒಳಗೊಂಡಂತೆ ವಾಸ್ತವಿಕ ನಿಯಂತ್ರಣ ರೇಖೆಯ(ಎಲ್ಎಸಿ) ಉದ್ದಕ್ಕೂ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಭಾರತದ ನಿಲುವಿನ ಕುರಿತು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದರು.
ಇದರ ಮುಂದುವರೆದ ಭಾಗ ಎನ್ನುವಂತೆ ಶುಕ್ರವಾರ ಚೀನಾ ಮತ್ತು ಭಾರತದ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಶುಕ್ರವಾರ ಸಹ ಚೀನಾದೊಂದಿಗೆ ಚರ್ಚೆ ನಡೆಸಲಿದ್ದಾರೆ.
ಅಜಿತ್ ಡೋವಲ್ ಮತ್ತು ವಾಂಗ್ ಅವರು ಭಾನುವಾರ ದೂರವಾಣಿ ಸಂಭಾಷಣೆ ನಡೆಸಿದ್ದರು. ಅದರ ನಂತರ ಉಭಯ ದೇಶಗಳ ಸೈನ್ಯಗಳು ಪೂರ್ವ ಲಡಾಕ್ನ ಘರ್ಷಣೆಯ ಸ್ಥಳಗಳಿಂದ ಸೈನ್ಯವನ್ನು ಹಿಂದಕ್ಕೆ ಪಡೆಯುವ ಕಾರ್ಯ ಆರಂಭಿಸಿದ್ದವು.
ಈ ಮಧ್ಯೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಮಧ್ಯಾಹ್ನ 12: 30ಕ್ಕೆ ಮೂವರು ಸೇವಾ ಮುಖ್ಯಸ್ಥರು ಮತ್ತು ಸಿಡಿಎಸ್ ಬಿಪಿನ್ ರಾವತ್ ಅವರೊಂದಿಗೆ ಚೀನಾ ಗಡಿಯ ನೆಲದ ಶೂನ್ಯ ವರದಿಯನ್ನು ಪರಿಶೀಲಿಸಲಿದ್ದಾರೆ ಎಂಬ ಮಾಹಿತಿ ಇದೆ.