ಭಾರತ ನಮ್ಮ ವಿರುದ್ಧ ಈಗಾಗಲೇ 'ಜಲಯುದ್ಧ' ಆರಂಭಿಸಿದೆ: ಪಾಕಿಸ್ತಾನ
ನವದೆಹಲಿ, ಆಗಸ್ಟ್ 20: ಗಡಿಯಲ್ಲಿರುವ ಆಣೆಕಟ್ಟೊಂದರ ನೀರನ್ನು ಏಕಾಏಕಿ ಬಿಡುಗಡೆ ಮಾಡಿ ಪಾಕಿಸ್ತಾನದಲ್ಲಿ ಪ್ರವಾಹ ಉಂಟು ಮಾಡಲು ಭಾರತ ಹವಣಿಸುತ್ತಿದೆ. ಈ ಮೂಲಕ ಹೊಸ ಆಯುಧವನ್ನು ಬಳಸಿ ಭಾರತ ನಮ್ಮ ವಿರುದ್ಧ ಯುದ್ಧ ಮಾಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಭಾರತ, "ಉಭಯ ದೇಶಗಳ ನಡುವೆ ಇರುವ ಜಲ ಒಪ್ಪಂದದ ಪ್ರಕಾರ ತಾನು ನೀರು ಬಿಡುಗಡೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದೆ" ಎಂದು ಸಮಜಾಯಿಷಿ ನೀಡಿದೆ. ಭಾರತದಿಂದ ಪಾಕಿಸ್ತಾನದ ಕಡೆಗೆ ಹರಿಯುವ ಸಟ್ಲೇಜ್ ನದಿಗೆ ಕಟ್ಟಿರುವ ಆಣೆಕಟ್ಟಿನಿಂದ ಭಾರತ ಮೊದಲೇ ಮಾಹಿತಿ ನೀಡದೆ ನೀರನ್ನು ಬಿಡುಗಡೆ ಮಾಡಿದೆ ಎಂದು ಪಾಕಿಸ್ತಾನ ಆರೋಪಿಸಿದೆ.
ಉದ್ವಿಗ್ನತೆ ಶಮನಗೊಳಿಸಿ: ಮೋದಿ, ಇಮ್ರಾನ್ಗೆ ಟ್ರಂಪ್ ಕರೆ
"ನಮ್ಮನ್ನು ಭಾರತ ರಾಜತಾಂತ್ರಿಕವಾಗಿ, ಆರ್ಥಿಕವಾಗಿ.. ಹೀಗೆ ಎಲ್ಲ ರೀತಿಯಲ್ಲೂ ಸೋಲಿಸಲು ನೋಡುತ್ತಿದೆ. ಏಕಾಏಕಿಯಾಗಿ ನೀರನ್ನು ಬಿಡುಗಡೆ ಮಾಡುವುದರಿಂದ ಜೀವಕ್ಕೆ, ಬೆಳೆಗೆ ಹಾನಿಯಾಗುತ್ತದೆ, ಇದರಿಂದ ಆರ್ಥಿಕತೆಗೂ ನಷ್ಟವಾಗುತ್ತದೆ ಎಂಬುದು ಭಾರತದ ಯೋಚನೆ" ಎಂದು ಪಾಕಿಸ್ತಾನದ ಜಲ ಮತ್ತು ಇಂಧನ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಮುಝಾಮಿಲ್ ಹುಸೇನ್ ಆರೋಪಿಸಿದ್ದಾರೆ.
"ಸೋಮವಾರ ಸಂಜೆ ಸುಮಾರು 7 ಗಂಟೆಯ ಸಮಯದಲ್ಲಿ ಸಟ್ಲೇಜ್ ನದಿಗೆ ಕಟ್ಟಲಾಗಿದ್ದ ಆಣೆಕಟ್ಟಿನ ನೀರು ತನ್ನ ಗರಿಷ್ಠ ಮಟ್ಟವನ್ನು ತಲುಪಿತ್ತು. ಈ ಬಗ್ಗೆ ಭಾರತ ಪಾಕಿಸ್ತಾನಕ್ಕೆ ಸಂದೇಶವನ್ನೂ ನೀಡಿತ್ತು. ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವ ಮುನ್ನ ಮಾಹಿತಿ ನೀಡಬೇಕು ಎಂಬ ಒಪ್ಪಂದಕ್ಕೆ ತಾನು ಬದ್ಧವಾಗಿದ್ದು, ಆಣೆಕಟ್ಟಿನಲ್ಲಿನ ನೀರಿನ ಮಟ್ಟ ಗರಿಷ್ಠ ಮಟ್ಟ ತಲುಪುತ್ತಿದ್ದು, ಯಾವುದೇ ಕ್ಷಣದಲ್ಲಿ ನೀರನ್ನು ಬಿಡುಗಡೆ ಮಾಡುವುದಾಗಿ ನಾವು ಮೊದಲೇ ಮಾಹಿತಿ ನೀಡಿದ್ದೆವು" ಎಂದು ಭಾರತದ ಜಲ ಸಂಪನ್ಮೂಲ ಇಲಾಖೆ ಸಚಿವಾಲಯ ಸ್ಪಷ್ಟಪಡಿಸಿದೆ.
ಮೋದಿ ಸರಕಾರದ ಹಿಡಿತದಲ್ಲಿ ಅಣ್ವಸ್ತ್ರ ಇರುವುದೇ ನಮ್ಮ ಆತಂಕ: ಇಮ್ರಾನ್ ಖಾನ್
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೆಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಭಾರತ ಸರ್ಕಾರದ ಕ್ರಮವನ್ನು ಖಂಡಿಸಿರುವ ಪಾಕಿಸ್ತಾನ, ಇದೀಗ ಭಾರತದ ವಿರುದ್ಧ ಒಂದಿಲ್ಲೊಂದು ಆರೋಪ ಮಾಡುತ್ತಲೇ ಬಂದಿದೆ.