ಭಾರತದಿಂದ ವಿದೇಶಗಳಿಗೆ ಈರುಳ್ಳಿ ರಫ್ತು ಮಾಡುವುದಕ್ಕೆ ಸರ್ಕಾರದ ಅನುಮತಿ
ನವದೆಹಲಿ, ಸಪ್ಟೆಂಬರ್.18: ಭಾರತದಿಂದ ಬಾಂಗ್ಲಾದೇಶ ಸೇರಿದಂತೆ ಎಲ್ಲ ರಾಷ್ಟ್ರಗಳಿಗೂ ಈರುಳ್ಳಿ ರಫ್ತು ಮಾಡುವುದಕ್ಕೆ ಕೇಂದ್ರ ಸರ್ಕಾರವು ಅನುಮತಿ ನೀಡಿದೆ. ದೇಶದ ಬಂದರಿನಲ್ಲಿ ಸಂಗ್ರಹಿಸಿದ ಈರುಳ್ಳಿ ರಫ್ತಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಯಾವುದೇ ದೇಶಕ್ಕೂ ಈರುಳ್ಳಿ ರಫ್ತು ಮಾಡದಂತೆ ಕೇಂದ್ರ ಸರ್ಕಾರವು ಆದೇಶ ಹೊರಡಿಸಿತ್ತು. ಭಾರತದಲ್ಲಿ ಈರುಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬಂದಿರುವ ಹಿನ್ನೆಲೆ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಎಲ್ಲ ಬಗೆಯ ಈರುಳ್ಳಿ ರಫ್ತಿಗೆ ಕಡಿವಾಣ ಹಾಕಲಾಗಿತ್ತು.
ಚಿತ್ರದುರ್ಗ; ಮಳೆ ನೀರಿನಲ್ಲಿ ಕೊಚ್ಚಿ ಹೋದ ಈರುಳ್ಳಿ ಬೆಳೆ
ಮಹಾರಾಷ್ಟ್ರದಲ್ಲಿ ಈ ಬಾರಿ ಸುರಿದ ಮಳೆಯು ಭಾರಿ ಅನಾಹುತಗಳನ್ನೇ ಸೃಷ್ಟಿಸಿದೆ. ರಾಜ್ಯದ ನಾಸಿಕ್ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಈ ಬಾರಿ ಬೆಳೆದ ಈರುಳ್ಳಿ ಬೆಳೆಯಲ್ಲ ನಾಶವಾಗಿದೆ. ಇದರಿಂದಾಗಿ ಪೂರೈಕೆ ಪ್ರಮಾಣ ತಗ್ಗಿರುವ ಹಿನ್ನೆಲೆ ಈರುಳ್ಳಿ ಬೆಲೆಯಲ್ಲಿ ಭಾರಿ ಏರಿಕೆಯಾಗಲಿದೆ ಎಂದು ಚಿಲ್ಲರೇ ವ್ಯಾಪಾರಿಗಳು ಹೇಳಿದ್ದರು.
ಈರುಳ್ಳಿ ಮತ್ತು ಈರುಳ್ಳಿ ಪೌಡರ್ ರಫ್ತಿಗೂ ನಿರ್ಬಂಧ:
ಭಾರತದ ದೇಶೀಯ ಚಿಲ್ಲರೇ ವ್ಯಾಪಾರದ ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆಯೇ ಇಲ್ಲದಂತಾಗಿದೆ. ಈ ಹಿನ್ನೆಲೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ವಿದೇಶಗಳಿಗೆ ಈರುಳ್ಳಿ ರಫ್ತು ಮಾಡುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ.
ಭಾರತದಿಂದ ಎಲ್ಲ ಬಗೆಯ ಈರುಳ್ಳಿ ಮತ್ತು ಕತ್ತರಿಸಿದ ಈರುಳ್ಳಿ ಹಾಗೂ ಈರುಳ್ಳಿ ಪೌಡರ್ ರಫ್ತು ಮಾಡುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಈಗಾಗಲೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಒಂದು ಕೆಜಿ ಈರುಳ್ಳಿ ಬೆಲೆಯು 40 ರೂಪಾಯಿ ಗಡಿ ದಾಟಿದೆ. ಮುಂದಿನ ದಿನಗಳಲ್ಲಿ ಒಂದು ಕೆಜಿ ಈರುಳ್ಳಿ ಬೆಲೆಯು 60ಕ್ಕಿಂತ ಹೆಚ್ಚಾಗುವ ಸಾಧ್ಯತೆಗಳಿದೆ ಎಂದು ಅಂದಾಜಿಸಲಾಗಿದೆ.