ಇದು ಕನಸಿನ ರೀತಿಯಲ್ಲಿದೆ: ನೆನಪು ಮೆಲುಕು ಹಾಕಿದ ಸುಮಲತಾ ಅಂಬರೀಷ್
Recommended Video
ನವದೆಹಲಿ, ಜೂನ್ 17: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸತ್ಗೆ ಆಯ್ಕೆಯಾಗಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್, ಮೊದಲ ಬಾರಿಗೆ ಸಂಸದೆಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
ಸುಮಲತಾ ಗೆಲುವು: ಹರಕೆ ತೀರಿಸಲು ಪಾದಯಾತ್ರೆ ಹೊರಟ ಅಭಿಮಾನಿಗಳು
ರಾಜ್ಯದ ಇತರೆ ಸಂಸದರಂತೆಯೇ ಸುಮಲತಾ ಅವರು ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸುವ ಮೂಲಕ ಗಮನ ಸೆಳೆದರು. ಮೊದಲ ದಿನದ ಅಧಿವೇಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಕನಸಿನ ರೀತಿ ಅನಿಸುತ್ತಿದೆ ಎಂದರು.
ಅಂಬರೀಷ್ ಅವರು ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಅವರು ಪ್ರಮಾಣ ವಚನ ಸ್ವೀಕಾರ ಮಾಡುವಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಅದನ್ನು ವೀಕ್ಷಿಸಿದ ನೆನಪನ್ನು ಅವರು ಮೆಲುಕು ಹಾಕಿದರು.
'ಅಂಬರೀಷ್ ಅವರು ಸಚಿವರಾಗಿದ್ದಾಗ ಪ್ರಮಾಣ ವಚನ ಸ್ವೀಕರಿಸುವಾಗ ಗ್ಯಾಲರಿಯಲ್ಲಿ ಕುಳಿತಿದ್ದೆ. ಇಂದು ಸಂಸದೆಯಾಗಿ ನಾನೇ ಪ್ರಮಾಣವಚನ ಸ್ವೀಕರಿಸಿದ್ದೇನೆ. ಇದೊಂದು ಕನಸಿನ ರೀತಿಯಲ್ಲಿದೆ. ಮೊದಲ ಬಾರಿಗೆ ಶಾಲೆಗೆ ಹೋದಂತಿದೆ. ಎಲ್ಲವೂ ಹೊಸತು' ಎಂದು ಸುಮಲತಾ ಹೇಳಿದರು.
ಸಂಸದೆಯಾಗಿ ನನ್ನ ಕರ್ತವ್ಯಗಳು, ಹೊಣೆಗಾರಿಕೆ ಹಾಗೂ ಅಧಿಕಾರಗಳ ಕುರಿತು ಕಲಿಯುವುದು ಸಾಕಷ್ಟಿದೆ. ಮೊದಲ ಸಲ ಸಂಸದೆಯಾಗಿರುವುದರಿಂದ ಸಂಸತ್ ಕಲಾಪಗಳ ಕುರಿತು ತಿಳಿಯಬೇಕಿದೆ. ಇವುಗಳನ್ನು ಕಲಿತುಕೊಂಡು ಕಾರ್ಯನಿರ್ವಹಣೆ ಮಾಡುತ್ತೇನೆ ಎಂದರು.
ಮಂಡ್ಯದಲ್ಲೀಗ ಸಂಸದೆ ಸುಮಲತಾದ್ದೇ ಹವಾ...!
ನನಗೆ ಬಿಜೆಪಿ ಸಕಾರಾತ್ಮಕವಾಗಿ ಬೆಂಬಲಿಸುತ್ತಿದೆ. ಮಂಡ್ಯದ ಅಭಿವೃದ್ಧಿಗೆ ಅದು ಸಹಕರಿಸಲಿದೆ ಎಂಬ ಭರವಸೆ ಇದೆ. ಇಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದೇನೆ. ಮಂಡ್ಯ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿನ ಅಗತ್ಯಗಳು, ಸಮಸ್ಯೆಗಳ ಪಟ್ಟಿ ನೀಡುವಂತೆ ಹೇಳಿದ್ದಾರೆ. ಕರ್ನಾಟಕದ ಎಲ್ಲ ಸಚಿವರು ಎಲ್ಲರೂ ಕುಳಿತು ಮಾತನಾಡಿ ಸರಿಮಾಡೋಣ ಎಂದು ತಿಳಿಸಿದರು.
ಚುನಾವಣೆ ಪ್ರಚಾರಕ್ಕೆ ಹೋದಾಗ ಹೆಚ್ಚಿನವರು ಹೇಳಿದ್ದು ಕುಡಿಯುವ ನೀರು. ಕೆರೆಗಳ ಹೂಳೆತ್ತುವುದು, ಸರಿಪಡಿಸುವುದು ಸಮಸ್ಯೆಯಾಗಿದೆ. ರಸ್ತೆಗಳ ಸಂಪರ್ಕಕ್ಕೆ ಆದ್ಯತೆ ನೀಡಿದರೆ ಮಂಡ್ಯದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ಸಂಸದೆಯಾಗಿ ಒಬ್ಬರಿಂದ ಅಭಿವೃದ್ಧಿ ಕಾರ್ಯ ಸಾಧ್ಯವಿಲ್ಲ. ಮಂಡ್ಯದಲ್ಲಿ ಶಾಸಕರು ಕೂಡ ಕೆಲಸ ಮಾಡಬೇಕು ಎಂದು ಹೇಳಿದರು.