ಬೇನಾಮಿ ಆಸ್ತಿ ಪ್ರಕರಣ: ರಾಬರ್ಟ್ ವಾದ್ರಾ ಹೇಳಿಕೆ ದಾಖಲಿಸಿಕೊಂಡ ಐಟಿ ಅಧಿಕಾರಿಗಳು
ನವದೆಹಲಿ, ಜನವರಿ 4: ಬೇನಾಮಿ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೋಮವಾರ ರಾಬರ್ಟ್ ವಾದ್ರಾ ಅವರಿಂದ ಹೇಳಿಕೆ ದಾಖಲಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರಿಗೆ ಈ ಹಿಂದೆಯೇ ಆದಾಯ ತೆರಿಗೆ ಇಲಾಖೆ ಸಮನ್ಸ್ ನೀಡಿತ್ತು. ಆದರೆ ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.
ಬಿಕಾನೇರ್ ಮತ್ತು ಫರೀದಾಬಾದ್ ಭೂ ಹಗರಣಗಳು ಸೇರಿದಂತೆ ವಾದ್ರಾ ಅವರು ಎರಡು ಬೇನಾಮಿ ಆಸ್ತಿಗಳ ಪ್ರಕರಣದಲ್ಲಿ ಸಂಬಂಧ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
'ಭವಿಷ್ಯ' ಹೇಳುವ ಹಸುವಿನ ವಿಡಿಯೋ ಹಂಚಿದ ರಾಬರ್ಟ್ ವಾದ್ರಾ
ಐಟಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಳ್ಳಲು ಪೂರ್ವ ದೆಹಲಿಯ ಸುಖದೇವ್ ವಿಹಾರದಲ್ಲಿನ ವಾದ್ರಾ ಕಚೇರಿಗೆ ತೆರಳಿದರು. ಲಂಡನ್ನಲ್ಲಿ ಸುಮಾರು 12 ಮಿಲಿಯನ್ ಪೌಂಡ್ ಮೌಲ್ಯದ ಆಸ್ತಿಗಳನ್ನು ಹೊಂದಿರುವ ಆರೋಪ ಪ್ರಕರಣದಲ್ಲಿ ಈಗಾಗಲೇ ರಾಬರ್ಟ್ ವಾದ್ರಾ ತನಿಖೆ ಎದುರಿಸುತ್ತಿದ್ದಾರೆ.
ರಾಜಸ್ಥಾನದ ಬಿಕಾನೇರ್ನಲ್ಲಿ ವಾದ್ರಾ ಅವರ ಸ್ಕೈಲೈಟ್ ಹಾಸ್ಪಿಟಾಲಿಟಿ ಸಂಸ್ಥೆಯು ಭೂ ಹಗರಣದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಲಾಗಿದೆ. ಬಡ ಗ್ರಾಮಸ್ಥರ ಮರುವಸತಿಗಾಗಿ ಮೀಸಲಿಟ್ಟಿದ್ದ 69.55 ಹೆಕ್ಟೇರ್ ಭೂಮಿಯನ್ನು ಕೇವಲ 72 ಲಕ್ಷ ರೂ ಬೆಲೆಗೆ ಖರೀದಿ ಮಾಡುವ ಮೂಲಕ ಅಕ್ರಮವಾಗಿ ಅತಿಕ್ರಮಿಸಿದ್ದ ವಾದ್ರಾ ಸಂಸ್ಥೆ, ಅದನ್ನು ಅಕ್ರಮ ಹಣ ವರ್ಗಾವಣೆ ಮೂಲಕ ಅಲೆಗೆನ್ಸಿ ಫಿನ್ಲೀಸ್ ಎಂಬ ಸಂಸ್ಥೆಗೆ 5.15 ಕೋಟಿಗೆ ಮಾರಾಟ ಮಾಡಿತ್ತು ಎಂದು ಆರೋಪಿಸಲಾಗಿದೆ. ಈ ಪ್ರದೇಶದಲ್ಲಿ ಭೂಮಿ ಹಂಚಿಕೆಯಲ್ಲಿ ನಕಲಿ ದಾಖಲೆ ಸೃಷ್ಟಿಸಲಾಗಿದೆ ಎಂದು ರಾಜಸ್ಥಾನ ಪೊಲೀಸರು ಪ್ರಕರಣ ದಾಖಲಿಸಿದ್ದರು.
2018ರ ಸೆಪ್ಟೆಂಬರ್ನಲ್ಲಿ ಗುರುಗಾಂವ್ನಲ್ಲಿ ಭೂ ಹಂಚಿಕೆಗಳಲ್ಲಿ ಅಕ್ರಮ ನಡೆದಿದೆ ಎಂದು ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಆರೋಪಿಸಿದ್ದರು. ಸ್ಕೈಲೈಟ್ ಹಾಸ್ಪಿಟಾಲಿಟಿ ಸಂಸ್ಥೆಯು ಶಿಕೋಪುರ ಗ್ರಾಮದಲ್ಲಿ 2008ರಲ್ಲಿ 3.5 ಎಕರೆ ಭೂಮಿಯನ್ನು ಅದರ ಮೂಲ ಬೆಲೆಗಿಂತಲೂ ಅಧಿಕ ಬೆಲೆಗೆ ಡಿಎಲ್ಎಫ್ಗೆ ಮಾರಾಟ ಮಾಡಿತ್ತು ಎಂದು ಆರೋಪ ಮಾಡಿದ್ದರು.