ಅಯೋಧ್ಯೆ ಪ್ರಕರಣ: ಅವಾಧಿ, ಗುರ್ಮುಖಿ, ಪರ್ಷಿಯನ್ ದಾಖಲೆ ಭಾಷಾಂತರವೇ ಸವಾಲು
ನವದೆಹಲಿ, ಜನವರಿ 10: ಅಯೋಧ್ಯಾ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿ ಇಪ್ಪತ್ತೊಂಬತ್ತಕ್ಕೆ ಮುಂದೂಡಿದೆ. ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠದಿಂದ ಒಬ್ಬರು ಹಿಂದಕ್ಕೆ ಸರಿದಿದ್ದಾರೆ. ಆ ಕಾರಣಕ್ಕೆ ವಿಚಾರಣೆ ಮುಂದಕ್ಕೆ ಹೋಗಿದೆ. ಈ ಹಿಂದೆ ಇದೇ ವಿಚಾರವಾಗಿ ಯು.ಯು.ಲಲಿತ್ ಪ್ರಕರಣದಲ್ಲಿ ಹಾಜರಾಗಿದ್ದರು. ಆ ಕಾರಣಕ್ಕೆ ಅವರು ಹಿಂದೆ ಸರಿದಿದ್ದು, ಇದೀಗ ವಿಚಾರಣೆ ಪೀಠವನ್ನು ಮತ್ತೊಮ್ಮೆ ರಚಿಸಬೇಕಾಗಿದೆ.
ಹೊಸ ಪೀಠದ ಎದುರು ಬೃಹದಾಕಾರದ ಸವಾಲೇ ಇದೆ. ರೀಮುಗಟ್ಟಲೆ ಸಾಕ್ಷ್ಯಗಳ ಪರಿಶೀಲನೆ ನಡೆಸಬೇಕಾಗಿದೆ. 88 ಸಾಕ್ಷ್ಯಗಳನ್ನು ನ್ಯಾಯಮೂರ್ತಿಗಳೆದುರು ಹಾಜರು ಪಡಿಸಲಾಗುತ್ತದೆ. 13886 ಪುಟಗಳು, ಸಂಬಂಧಪಟ್ಟ 257 ದಾಖಲಾತಿಗಳು ಹಾಗೂ ವಿಡಿಯೋ ಟೇಪ್ ಇದೆ. ಈ ಹಿಂದಿನ ಕೋರ್ಟ್ ಆದೇಶಗಳೇ 4304 ಪುಟಗಳ ಮುದ್ರಿತ ಹಾಗೂ 8333 ಟೈಪ್ ಆಗಿರುವ ಪುಟಗಳಿವೆ.
ಯುಯು ಲಲಿತ್ ಪ್ರಕರಣದಿಂದ ಹಿಂದೆ ಸರಿದಿದ್ದಕ್ಕೆ ವಿಹಿಂಪ ಹೇಳಿದ್ದೇನು?
15 ಟ್ರಂಕ್ ಗಳಲ್ಲಿ ಸೀಲ್ ಆಗಿರುವ ಈ ದಾಖಲೆಗಳೆಲ್ಲವ್ವನ್ನೂ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಪರಿಶೀಲನೆ ಮಾಡಬೇಕು. ಇವುಗಳನ್ನು ಇಟ್ಟಿರುವ ಕೋಣೆಯನ್ನು ಸಹ ಸದ್ಯಕ್ಕೆ ಸೀಲ್ ಮಾಡಲಾಗಿದೆ. ಇನ್ನು ಕೋರ್ಟ್ ಮುಂದೆ ಮತ್ತೊಂದು ದೊಡ್ಡ ಸವಾಲಿದೆ. ಸ್ಪಷ್ಟವಾಗಿಲ್ಲದೆ ಭಾಷಾಂತರವನ್ನು ಸಹ ನೋಡಬೇಕಿದೆ.
ಹಿಂದಿ, ಅವಾಧಿ, ಗುರ್ಮುಖಿ, ಪರ್ಷಿಯನ್ ಹಾಗೂ ಉರ್ದುವಿನಲ್ಲಿ ಬರೆದಿರುವ ದಾಖಲಾತಿಗಳನ್ನು ಇಂಗ್ಲಿಷ್ ಗೆ ಭಾಷಾಂತರ ಮಾಡಿಸಬೇಕಿತ್ತು. ಈ ಮಧ್ಯೆ ರಿಜಿಸ್ಟ್ರಾರ್ ಜನರಲ್ ವರದಿ ನೀಡಿದ್ದು, ಭಾಷಾಂತರ ಸ್ಪಷ್ಟವಾಗಿಲ್ಲ ಎಂದಿದ್ದು, ದಾವೆ ಹಾಕಿರುವವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆ ವಿಚಾರಣೆ ಜ.29 ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್
ಈ ಎಲ್ಲ ಪತ್ರಗಳನ್ನು ಮೌಲ್ಯಮಾಪನ ಮಾಡಿ, ಭಾಷಾಂತರ ದೋಷ ಸರಿಪಡಿಸಿ, ಜನವರಿ ಇಪ್ಪತ್ತೊಂಬತ್ತಕ್ಕೆ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿಜಿಸ್ಟ್ರಾರ್ ಜನರಲ್ ಕಚೇರಿಗೆ ಹೇಳಿದ್ದಾರೆ. ಆಗ ಪ್ರಕರಣದ ಮುಂದಿನ ವಿಚಾರಣೆಯನ್ನು ಕೋರ್ಟ್ ನಿರ್ಧರಿಸಬಹುದಾಗಿದೆ.
ಅಗತ್ಯ ಕಂಡುಬಂದಲ್ಲಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಅಧಿಕೃತ ಭಾಷಾಂತಕಾರರ ಸೇವೆಯನ್ನು ಪಡೆಯಬಹುದು ಎಂದು ಪೀಠವು ಹೇಳಿದೆ. 2010ರಿಂದ ಸುಪ್ರೀಂ ಕೋರ್ಟ್ ಮುಂದೆ ಈ ಪ್ರಕರಣ ಬಾಕಿ ಉಳಿದಿದೆ.