ಅರವಿಂದ್ ಕೇಜ್ರಿವಾಲ್ಗೆ ಹಿನ್ನಡೆ: ಕೇಂದ್ರದ ದೆಹಲಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ
ನವದೆಹಲಿ, ಮಾರ್ಚ್ 22: ದೆಹಲಿ ಸರ್ಕಾರದ ಅಧಿಕಾರವನ್ನು ಕಡಿತಗೊಳಿಸುವ ಮತ್ತು ರಾಜಧಾನಿ ಮೇಲಿನ ಹಿಡಿತವನ್ನು ತನ್ನ ತೆಕ್ಕೆಗೆ ಮತ್ತಷ್ಟು ತೆಗೆದುಕೊಳ್ಳುವ ಕೇಂದ್ರ ಸರ್ಕಾರದ ವಿವಾದಾತ್ಮಕ ಮಸೂದೆಯು ಕಾನೂನು ಸ್ವರೂಪ ಪಡೆದುಕೊಳ್ಳುವತ್ತ ಮತ್ತೊಂದು ಹೆಜ್ಜೆ ಇರಿಸಿದೆ. ರಾಷ್ಟ್ರೀಯ ರಾಜಧಾನಿ ದೆಹಲಿ ಪ್ರದೇಶ ಸರ್ಕಾರ (ತಿದ್ದುಪಡಿ) ಮಸೂದೆ, 2021ಅನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದ್ದು, ಅದೀಗ ರಾಜ್ಯಸಭೆಗೆ ರವಾನೆಯಾಗಿದೆ. ಇದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ತೀವ್ರ ಹಿನ್ನಡೆಯುಂಟುಮಾಡಿದೆ.
ದೆಹಲಿ ಸರ್ಕಾರದ ಬಹುತೇಕ ಅಧಿಕಾರಗಳನ್ನು ಲೆಫ್ಟಿನೆಂಟ್ ಗವರ್ನರ್ ಹಿಡಿತಕ್ಕೆ ನೀಡುವ ಈ ಮಸೂದೆಯು, ಚುನಾಯಿತ ಸರ್ಕಾರದ ಅಧಿಕಾರವನ್ನು ಮೊಟಕುಗೊಳಿಸಲಿದೆ ಎಂದು ದೆಹಲಿ ಸರ್ಕಾರ ಆರೋಪಿಸಿದೆ. ಈ ಮಸೂದೆಯನ್ನು ಅಂಗೀಕರಿಸಿರುವುದು ದೆಹಲಿಯ ಜನರಿಗೆ ಮಾಡಿರುವ ಅವಮಾನ ಎಂದು ಅರವಿಂದ್ ಕೇಜ್ರಿವಾಲ್ ಟೀಕಿಸಿದ್ದಾರೆ.
ದೆಹಲಿ ಸರ್ಕಾರದ ಮನೆ ಮನೆಗೆ ದಿನಸಿ ಯೋಜನೆಗೆ ಕೇಂದ್ರ ಅಡ್ಡಗಾಲು
'ಇಂದು ಲೋಕಸಭೆಯಲ್ಲಿ ಜಿಎನ್ಸಿಟಿಡಿ ಅನುಮೋದನೆಯು ದೆಹಲಿಯ ಜನತೆಗೆ ಮಾಡಿದ ಅವಮಾನ. ಜನರಿಂದ ಆಯ್ಕೆಯಾದವರ ಅಧಿಕಾರಗಳನ್ನು ಈ ಮಸೂದೆ ಕಿತ್ತುಕೊಳ್ಳುತ್ತದೆ ಮತ್ತು ಸೋಲು ಅನುಭವಿಸಿದವರಿಗೆ ದೆಹಲಿಯನ್ನು ನಡೆಸುವ ಅಧಿಕಾರ ನೀಡುತ್ತದೆ. ಬಿಜೆಪಿಯು ಜನರಿಗೆ ಮೋಸ ಮಾಡಿದೆ' ಎಂದು ಕೇಜ್ರಿವಾಲ್ ಕಿಡಿಕಾರಿದ್ದಾರೆ.
ಹೊಸ ಮಸೂದೆಯ ಪ್ರಕಾರ 'ಸರ್ಕಾರ' ಎಂಬುದರ ವ್ಯಾಖ್ಯಾನವು ಲೆಫ್ಟಿನೆಂಟ್ ಗವರ್ನರ್ ಎಂಬ ಅರ್ಥ ನೀಡುತ್ತದೆ. ವಿಧಾನಸಭೆ ರೂಪಿಸುವ ಯಾವುದೇ ಕಾನೂನು ಮೊದಲು ಲೆಫ್ಟಿನೆಂಟ್ ಗವರ್ನರ್ ಅಭಿಪ್ರಾಯ ಪಡೆದುಕೊಂಡ ನಂತರವೇ ಜಾರಿಯಾಗಬೇಕಾಗುತ್ತದೆ.