ಮೋದಿ ಶುರು ಮಾಡಿದರು, ನಾವು ಮುಗಿಸುತ್ತೇವೆ: ಪಾಕಿಸ್ತಾನ
ನವದೆಹಲಿ, ಆಗಸ್ಟ್ 27: ಭಾರತ ಮತ್ತು ಪಾಕಿಸ್ತಾನದ ನಡುವಿನ ಎಲ್ಲಾ ವಾಯುಮಾರ್ಗಗಳನ್ನೂ ಮುಚ್ಚಲು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಚಿಂತನೆ ನಡೆಸಿದ್ದಾರೆ ಎಂದು ಪಾಕ್ ಸಚಿವ ಫವಾದ್ ಹುಸೇನ್ ಟ್ವೀಟ್ ಮಾಡಿದ್ದಾರೆ.
ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಕೇವಲ ವಾಯುಮಾರ್ಗ ಮಾತ್ರವಲ್ಲದೆ, ಭಾರತದಿಂದ ಪಾಕಿಸ್ತಾನದ ಮೂಲಕ ಅಫ್ಘಾನಿಸ್ತಾನಕ್ಕೆ ತೆರಳುವ ಭೂ ಮಾರ್ಗವನ್ನೂ ಮುಚ್ಚುವ ಬಗ್ಗೆ ಇಮ್ರಾನ ಖಾನ್ ಯೋಚಿಸುತ್ತಿದ್ದಾರೆ ಎಂದು ಹುಸೇನ್ ಹೇಳಿದ್ದಾರೆ.
ಇಬ್ಬರ ಬಳಿಯೂ ಅಣ್ವಸ್ತ್ರವಿದೆ, ನೆನಪಿರಲಿ: ಅಬ್ಬರಿಸಿದ ಇಮ್ರಾನ್ ಖಾನ್
ಅಫ್ಘಾನಿಸ್ತಾನ ಮತ್ತು ಭಾರತಕ್ಕಿದ್ದ ವ್ಯಾಪಾರ ಮಾರ್ಗವನ್ನು ಮುಚ್ಚಿ, ಎರಡೂ ದೇಶಗಳಿಗೆ ತೊಂದರೆ ಉಂಟುಮಾಡಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಹೊಡೆವ ಲೆಕ್ಕಾಚಾರ ಪಾಕಿಸ್ತಾನದ್ದು.
"ಈ ಎರಡು ನಿರ್ಧಾರಗಳನ್ನು ತೆಗೆದುಕೊಳ್ಳಲು ಇರುವ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಪರಿಶೀಲಿಸಲಾಗುತ್ತಿದೆ. ಮೋದಿ ಆರಂಭಿಸಿದ್ದಾರೆ, ನಾವು ಮುಗಿಸುತ್ತೇವೆ" ಎಂದು ಹುಸೇನ್ ಹೇಳಿದ್ದಾರೆ.
ಕಾಶ್ಮೀರದಲ್ಲಿ 40 ನಾಯಕರು, ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ವಶಕ್ಕೆ
ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370 ನೇ ವಿಧಿಯ ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಆಗಸ್ಟ್ 5 ರಂದು ಭಾರತ ರದ್ದುಗೊಳಿಸಿದೆ. ಇದರಿಂದ ರೊಚ್ಚಿಗೆದ್ದಿರುವ ಪಾಕಿಸ್ತಾನ, ಭಾರತ ನಡೆಯನ್ನು ಅಕ್ರಮ ಎಂದು ದೂರಿ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆವ ಪ್ರಯತ್ನ ಮಾಡಿತ್ತು. ಆದರೆ ಕಾಶ್ಮೀರವನ್ನು ಭಾರತದ ಆಂತರಿಕ ವಿಷಯ ಎಂದು ವ್ಯಾಖ್ಯಾನಿಸಿದ ಹೆಚ್ಚಿನ ದೇಶಗಳು ಪರೋಕ್ಷವಾಗಿ ಭಾರತದ ಬೆಂಬಲಕ್ಕೇ ನಿಂತವು. ಇದರಿಂದ ಅವಮಾನಕ್ಕೊಳಗಾದ ಪಾಕಿಸ್ತಾನ ಇದೀಗ ಭಾರತದ ವಿರುದ್ಧ ಯಾವೆಲ್ಲ ಅಸ್ತ್ರ ಪ್ರಯೋಗಿಸಲು ಸಾಧ್ಯವೋ ಅವೆಲ್ಲವನ್ನೂ ಮಾಡುತ್ತಿದೆ.