ವಿಡಿಯೋ ಸಾಕ್ಷ್ಯ:ಹಸಿವಿನ ನೋವು ತಾಳದೇ ಸತ್ತುಬಿದ್ದ ನಾಯಿ ಮಾಂಸ ಸೇವನೆ!
ನವದೆಹಲಿ, ಮೇ.24: ನೊವೆಲ್ ಕೊರೊನಾ ವೈರಸ್ ಭೀತಿ ಭಾರತ ಲಾಕ್ ಡೌನ್ 4.0 ವಿಸ್ತರಣೆಯು ವಲಸೆ ಕಾರ್ಮಿಕರನ್ನು ಎಂಥ ಸ್ಥಿತಿಗೆ ತಂದು ನಿಲ್ಲಿಸಿದೆ ಎನ್ನುವುದಕ್ಕೆ ನವದೆಹಲಿಯಲ್ಲಿ ನಡೆದ ಇದೊಂದು ಘಟನೆಯೇ ಜೀವಂತ ಸಾಕ್ಷಿ.
ವಲಸೆ ಕಾರ್ಮಿಕರನ್ನು ಗೂಡು ಸೇರಿಸಲು ಕೇಂದ್ರ ರೈಲ್ವೆ ಸಚಿವಾಲಯವು ಶ್ರಮಿಕ್ ರೈಲುಗಳ ವ್ಯವಸ್ಥೆ ಕಲ್ಪಿಸಿದೆ. ನವದೆಹಲಿ ಹಾಗೂ ಉತ್ತರ ಪ್ರದೇಶ ಸರ್ಕಾರಗಳು ಬಸ್ ವ್ಯವಸ್ಥೆ ಕಲ್ಪಿಸಿದೆ. ಇಷ್ಟರ ಮಧ್ಯೆಯೂ ನವದೆಹಲಿ-ಜೈಪುರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆ ಬಗ್ಗೆ ಕೇಳಿದರೆ ಕರಳು ಚುರುಕ್ ಎನ್ನುತ್ತೆ.
ತುತ್ತಿನ ಚೀಲ ತುಂಬಿಸಿಕೊಳ್ಳಲು ವಲಸೆ ಹೋದ ಕಾರ್ಮಿಕರಿಗೆಂಥಾ ಶಿಕ್ಷೆ?
ದುಡಿಮೆಯಿಲ್ಲದೇ ತಮ್ಮೂರಿಗೆ ವಲಸೆ ತೆರಳುತ್ತಿದ್ದ ಕಾರ್ಮಿಕನೊಬ್ಬ ಹಸಿವಿನ ನೋವು ತಾಳದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಅಡಿ ಸಿಲುಕಿ ಸತ್ತು ಬಿದ್ದ ಪ್ರಾಣಿಗಳ ಮಾಂಸವನ್ನೇ ಸೇವಿಸಿರುವುದು ಇಡೀ ಮಾನವೀಯ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ.
ತಡವಾಗಿ ಬೆಳಕಿಗೆ ಬಂತು ಕಳೆದ ವಾರ ನಡೆದ ಘಟನೆ
ನಡೆದುಕೊಂಡೇ ತಮ್ಮೂರಿನತ್ತ ಹೊರಟಿದ್ದ ವಲಸೆ ಕಾರ್ಮಿಕನೊಬ್ಬ ಶಹಾಪುರ್ ಬಳಿಯ ನವದೆಹಲಿ-ಜೈಪುರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸತ್ತು ಬಿದ್ದಿದ್ದ ಪ್ರಾಣಿಯ ಮಾಂಸವನ್ನೇ ತಿನ್ನುತ್ತಿರುವ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ. ಕಳೆದ ವಾರ ಈ ಘಟನೆದಿರುವ ಬಗ್ಗೆ ವರದಿಯಾಗಿದೆ.
ಸಾಮಾಜಿಕ ತಾಣದಲ್ಲಿ ಮೇ.18ರಂದು ಪೋಸ್ಟ್
ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಾಣಯ ಹಸಿಮಾಂಸವನ್ನು ವಲಸೆ ಕಾರ್ಮಿಕನೊಬ್ಬ ಸೇವಿಸುತ್ತಿರುವ ವಿಡಿಯೋವನ್ನು ಕಾರ್ ನಲ್ಲಿ ಚಲಿಸುತ್ತಿದ್ದ ಜೈಪುರ್ ಮೂಲದ ಪ್ರಧಾಮನ್ ಸಿಂಗ್ ನರುಕಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ವಲಸೆ ಕಾರ್ಮಿಕನಿಗೆ ಆಹಾರ ನೀಡಿದ ನರುಕಾ
ವಲಸೆ ಕಾರ್ಮಿಕನ ದುಸ್ಥಿತಿಯನ್ನು ಕಂಡು ಮರುಗಿದ ಪ್ರಧಾಮನ್ ಸಿಂಗ್ ನರುಕಾ ಆತನಿಗೆ ಆಹಾರ ಮತ್ತು ನೀರನ್ನು ಕೊಟ್ಟಿದ್ದಾರೆ. ನಡುರಸ್ತೆಯಲ್ಲಿ ಸತ್ತುಬಿದ್ದ ಮಾಂಸವನ್ನು ಶಹಾಪುರ್ ಬಳಿ ವಲಸೆ ಕಾರ್ಮಿಕನೊಬ್ಬ ಸೇವಿಸುತ್ತಿದ್ದರೆ ಯಾರೊಬ್ಬರೂ ಆತನ ಸಹಾಯಕ್ಕೆ ಬರಲಿಲ್ಲ. ಇದು ಮಾನವೀಯ ಸಮಾಜವೇ ತಲೆ ತಗ್ಗಿಸುವಂತಾ ನಾಚಿಕೆಗೇಡಿನ ಸಂಗತಿ ಎಂದು ಪ್ರಧಾಮನ್ ಸಿಂಗ್ ನರುಕಾ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಈ ವಿಡಿಯೋವನ್ನು ತಲುಪಿಸಿ
ಭಾರತ ಲಾಕ್ ಡೌನ್ 4.0 ನಡುವೆ ಕಾರ್ಮಿಕರ ಸ್ಥಿತಿ ಹೇಗಿದೆ ಎಂಬುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವರಿಕೆ ಆಗಬೇಕು. ಈ ಕಾರ್ಮಿಕನಂತೆ ಅದೆಷ್ಟೋ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ವಲಸೆ ಕಾರ್ಮಿಕನ ಸ್ಥಿತಿಯನ್ನು ಸಾಕ್ಷೀಕರಿಸುವ ಈ ವಿಡಿಯೋ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ತಲುಪುವವರೆಗೂ ಶೇರ್ ಮಾಡಿ ಎಂದು ಪ್ರಧಾಮನ್ ಸಿಂಗ್ ನರುಕಾ ಮನವಿ ಮಾಡಿಕೊಂಡಿದ್ದಾರೆ.