ಕೊರೊನಾ ವಿರುದ್ಧದ ಹೋರಾಟ: ಜಿಡಿಪಿಯ ಶೇ 1 ರಷ್ಟು ಖರ್ಚು
ನವದೆಹಲಿ, ಮೇ 1: ಭಾರತ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ದಿಟ್ಟ ಕ್ರಮಗಳನ್ನು ಕೈಗೊಂಡಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (IMF) ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಹೇಳಿದ್ದಾರೆ.
ಶುಕ್ರವಾರ ಪತ್ರಕರ್ತ ಶೇಖರ್ ಗುಪ್ತಾ ಅವರೊಂದಿಗೆ ನಡೆದ ಸಂದರ್ಶನದಲ್ಲಿ ಮಾತನಾಡಿದ ಗೀತಾ ಅವರು, ಭಾರತ ಕೋವಿಡ್ ವಿರುದ್ಧದ ಹೋರಾಟಕ್ಕೆ ನಾವು ಅಂದುಕೊಂಡಕ್ಕಿಂತ ಹೆಚ್ಚಿನದನ್ನು ಖರ್ಚು ಮಾಡುತ್ತಿದೆ. ಆದರೆ, ಇದು ಭಾರತದ ಜಿಡಿಪಿಯ ಶೇ 1 ರಷ್ಟು ಮಾತ್ರ ಎಂದು ಅವರು ಹೇಳಿದ್ದಾರೆ.
ಭಾರತ ಕೇವಲ ಲಾಕ್ಡೌನ್ ಒಂದೇ ಘೋಷಿಸಲಿಲ್ಲ. ಅದರ ಜೊತೆಗೆ ಆರ್ಥಿಕ ಉತ್ತೇಜನಕ್ಕೆ ಹಾಗೂ ಆರ್ಥಿಕ ಕುಸಿತ ಕಾಣದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಘೋಷಿಸಿತು. ಆದರೆ, ಬಿಕ್ಕಟ್ಟಿನ ಅಂತ್ಯದ ಮೊದಲು, ಸಂಸ್ಥೆಗಳು ದಿವಾಳಿಯಾಗಬಾರದು ಎಂದು ಅವರು ಹೇಳಿದರು. ಸಾಲ ಸಹಿಷ್ಣುತೆಯ ಜೊತೆಗೆ, ವೇತನ ಸಬ್ಸಿಡಿಗಳ ಅಗತ್ಯವೂ ಇದೆ ಎಂದು ಹೇಳಿದರು.
2020-21ರಲ್ಲಿ ಭಾರತದ ಆರ್ಥಿಕತೆಯು ಶೇಕಡಾ 1.9 ರಷ್ಟಾಗುತ್ತದೆ ಎಂದು ಐಎಂಎಫ್ ಮುನ್ಸೂಚನೆ ನೀಡಿತ್ತು. ಆದರೆ ಮೇ 3 ರವರೆಗೆ ಲಾಕ್ಡೌನ್ ವಿಸ್ತರಣೆಯನ್ನು ಭಾರತ ಘೋಷಿಸುವ ಮುನ್ನ ಈ ಮುನ್ಸೂಚನೆ ನೀಡಲಾಗಿತ್ತು. ಈ ಮುನ್ಸೂಚನೆಗಳ ಸುತ್ತ ಸಾಕಷ್ಟು ಅನಿಶ್ಚಿತತೆ ಇದೆ, ಮತ್ತು ಅವುಗಳನ್ನು ದೇಶದ ವಾಸ್ತವತೆಗಳ ಆಧಾರದ ಮೇಲೆ ಪರಿಷ್ಕರಿಸಲಾಗುವುದು ಎಂದು ಗೋಪಿನಾಥ್ ಹೇಳಿದರು.
ನಮ್ಮ ಜೀವಿತಾವಧಿಯಲ್ಲಿ ಈ ರೀತಿಯ ಬಿಕ್ಕಟ್ಟನ್ನು ನಾವು ಯಾವತ್ತೂ ನೋಡಿಲ್ಲ. ನಾವು ನಿಜವಾದ ಜಾಗತಿಕ ಬಿಕ್ಕಟ್ಟನ್ನು ನೋಡುತ್ತಿದ್ದೇವೆ. ಇದು ಉದಯೋನ್ಮುಖ ಆರ್ಥಿಕತೆಗಳಿಗಂತೂ ಇನ್ನೂ ಹೆಚ್ಚು ಪೆಟ್ಟು ನೀಡುತ್ತದೆ ಎಂದು ಗೋಪಿನಾಥ್ ಎಚ್ಚರಿಸಿದ್ದಾರೆ.