ಭಾರತದ ಹಲವೆಡೆ ಗುಡುಗು, ಮಿಂಚು ಸಹಿತ ಮಳೆ ಮುನ್ಸೂಚನೆ
ನವದೆಹಲಿ, ಫೆಬ್ರವರಿ 20: ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಭಾರತದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು, ಇನ್ನೂ ಮೂರ್ನಾಲ್ಕು ದಿನ ಮಳೆ ಮುಂದುವರೆಯುವುದಾಗಿ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಉತ್ತರ ಭಾರತದಲ್ಲಿ ಒಣಹವೆಯಿದ್ದ ಕೆಲವೆಡೆ ಶುಕ್ರವಾರ ಸಂಜೆಯಿಂದ ಮಳೆ ಆರಂಭವಾಗಿದೆ. ಶನಿವಾರವೂ ಮಳೆ ಮುಂದುವರೆದಿದ್ದು, ಇನ್ನಷ್ಟು ದಿನ ಮಳೆಯಾಗುವುದಾಗಿ ಇಲಾಖೆ ಸೂಚನೆ ನೀಡಿದೆ. ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕ, ಲಕ್ಷದ್ವೀಪದಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ. ಮುಂದೆ ಓದಿ...
ಮುಂದಿನ ಕೆಲವೇ ಗಂಟೆಗಳಲ್ಲಿ ದೇಶದ ವಿವಿಧೆಡೆ ಭಾರಿ ಮಳೆಯ ಮುನ್ಸೂಚನೆ
ಗುಡುಗು ಮಿಂಚು ಸಹಿತ ಮಳೆಯಾಗುವ ಸೂಚನೆ
ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಪುದುಚೆರಿಯಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರೆಯಲಿದ್ದು, ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರ್ನಾಟಕ ಹಾಗೂ ಕೇರಳದಲ್ಲಿಯೂ ಮಳೆಯಾಗುತ್ತದೆ ಎಂದು ತಿಳಿಸಿದೆ.
ಕರ್ನಾಟಕದ ಎಲ್ಲೆಲ್ಲಿ ಮಳೆಯಾಗಿದೆ?
ಕರ್ನಾಟಕದಲ್ಲಿ ಶುಕ್ರವಾರ ಸಂಜೆಯಿಂದ ಮಳೆ ಆರಂಭವಾಗಿದ್ದು, ಕಳೆದ 24 ಗಂಟೆಗಳಲ್ಲಿ ಚಿಂತಾಮಣಿಯಲ್ಲಿ 24 ಎಂಎಂ ಮಳೆಯಾಗಿದೆ. ಮಡಿಕೇರಿಯಲ್ಲಿ 15 ಎಂಎಂ ಹಾಗೂ ಮೈಸೂರಿನಲ್ಲಿ 15 ಎಂಎಂ ಮಳೆಯಾಗಿದೆ. ಬೆಂಗಳೂರಿನಲ್ಲಿ 7 ಎಂಎಂ ಮಳೆ ದಾಖಲಾಗಿದೆ. ಚಿತ್ರದುರ್ಗ, ಬಾಲಕೋಟೆ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಸಾಧಾರಣ ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿಯೂ ಮಳೆಯಾಗುವ ಸೂಚನೆಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿದೆ.
ಯಾವ ರಾಜ್ಯದಲ್ಲಿ ಎಷ್ಟು ಮಳೆ ದಾಖಲು?
ಕಳೆದ 24 ಗಂಟೆಗಳಲ್ಲಿ ತಮಿಳುನಾಡಿನ ಕುನೂರಿನಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದೆ. ಒಂದೇ ದಿನ ಕುನೂರಿನಲ್ಲಿ 74 ಎಂಎಂ ಮಳೆ ದಾಖಲಾಗಿದೆ. ಆಂಧ್ರದ ಒಂಗೋಲ್, ಆರೋಗ್ಯವರಂನಲ್ಲಿ 62 ಹಾಗೂ 52 ಎಂಎಂ ಹಾಗೂ ಬಪಾತ್ಲಾದಲ್ಲಿ 23 ಎಂಎಂ ಮಳೆಯಾಗಿದೆ. ಲಕ್ಷದ್ವೀಪದ ಅಗಾತಿಯಲ್ಲಿ 17 ಎಂಎಂ ಮಳೆ ದಾಖಲಾಗಿದೆ.
ಉತ್ತರ ಭಾರತದ ಕೆಲವೆಡೆ ಐದು ದಿನಗಳ ಕಾಲ ಮಳೆ
ಮುಂದಿನ ಐದು ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಲ್ತಿಸ್ತಾನ, ಮುಜಾಫರ್ಬಾದ್ನಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಹಿಮಾಚಲಪ್ರದೇಶ, ಉತ್ತರಾಖಂಡದಲ್ಲಿ ಫೆಬ್ರವರಿ 24ರವರೆಗೂ ಮಳೆಯಾಗುವುದಾಗಿ ತಿಳಿಸಿದೆ. ಈ ಪ್ರದೇಶಗಳಲ್ಲಿ ಹಿಮಪಾತವಾಗುವುದೆಂದು ಇಲಾಖೆ ತಿಳಿಸಿದೆ.