ಪತಂಜಲಿ "ಕೊರೋನಿಲ್" ಬಗ್ಗೆ ಮತ್ತೊಂದು ವಿವಾದ; ಆರೋಗ್ಯ ಸಚಿವರ ಮೇಲೆ ಐಎಂಎ ವಾಗ್ದಾಳಿ
ನವದೆಹಲಿ, ಫೆಬ್ರವರಿ 22: ಪತಂಜಲಿ ಬಿಡುಗಡೆ ಮಾಡಿರುವ ಕೊರೋನಿಲ್ ಮಾತ್ರೆಗಳು ಕೊರೊನಾ ಸೋಂಕು ಗುಣಪಡಿಸಬಲ್ಲದು. ಸಂಶೋಧನೆಗಳಲ್ಲಿ ಇದು ಸಾಬೀತಾಗಿದ್ದು, ಕೊರೋನಿಲ್ ಔಷಧಿ ಕೋವಿಡ್ -19ಗೆ ಪುರಾವೆ ಆಧಾರಿತ ಔಷಧ ಎಂದು ಶುಕ್ರವಾರ ಯೋಗಗುರು ಬಾಬಾ ರಾಮ್ದೇವ್ ಕೊರೋನಿಲ್ ಔಷಧಿ ಬಿಡುಗಡೆ ಮಾಡಿದ್ದಾರೆ. ಆದರೆ ಈ ಕುರಿತು ಭಾರತೀಯ ವೈದ್ಯಕೀಯ ಸಂಸ್ಥೆ ಕೇಂದ್ರ ಆರೋಗ್ಯ ಸಚಿವರಿಗೆ ಪ್ರಶ್ನೆ ಮಾಡಿದೆ.
ಪತಂಜಲಿಯ ಕೊರೋನಿಲ್ ಔಷಧಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡ ಕಾರಣಕ್ಕೆ ವಾಗ್ದಾಳಿ ನಡೆಸಿದೆ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ನಿಯಮಾವಳಿ ಪ್ರಕಾರ ಯಾವುದೇ ವೈದ್ಯರು ಯಾವುದೇ ಔಷಧವನ್ನು ಪ್ರಚಾರ ಮಾಡುವಂತಿಲ್ಲ. ಆದರೆ ಸ್ವತಃ ವೈದ್ಯರಾಗಿರುವ ಆರೋಗ್ಯ ಸಚಿವರೇ ಕೊರೊನಿಲ್ ಔಷಧಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಆಶ್ಚರ್ಯಕರವಾಗಿದೆ ಎಂದು ಐಎಂಎ ತಿಳಿಸಿದೆ. ಮುಂದೆ ಓದಿ...
ಪತಂಜಲಿಯಿಂದ ಕೊರೊನಾ ಸೋಂಕಿಗೆ 'ಪುರಾವೆ ಆಧಾರಿತ' ಕೊರೊನಿಲ್ ಮಾತ್ರೆ
ಔಷಧಕ್ಕೆ ಪುರಾವೆ ಬಿಡುಗಡೆಗೊಳಿಸಿದ್ದ ಪತಂಜಲಿ
ಪತಂಜಲಿ ಸಂಸ್ಥೆ ಕೊರೊನಾ ಸೋಂಕಿಗೆ ಪುರಾವೆ ಆಧಾರಿತ ಕೊರೋನಿಲ್ ಮಾತ್ರೆ ಸಿದ್ಧಪಡಿಸಿದೆ. ಇದು ಕೊರೊನಾ ವಿರುದ್ಧ ಹೋರಾಡಲು ಸಹಕಾರಿ ಎಂದು ಯೋಗ ಗುರು ಬಾಬಾ ರಾಮ್ದೇವ್ ಶುಕ್ರವಾರ ಔಷಧಿ ಬಿಡುಗಡೆಗೊಳಿಸಿದ್ದರು. ಕೊರೊನಾ ಸೋಂಕಿನ ವಿರುದ್ಧ ಮೊದಲ ಆಯುರ್ವೇದ ಔಷಧಿ ಇದಾಗಿದೆ ಎಂದು ಹೇಳಿಕೊಂಡಿದ್ದರು. ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹಾಗೂ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉಪಸ್ಥಿತಿಯಲ್ಲಿ ಔಷಧಿ ಹಾಗೂ ಪುರಾವೆ ಕಾಗದವನ್ನು ಬಿಡುಗಡೆಗೊಳಿಸಲಾಗಿತ್ತು.
ಪರಿಶೀಲನೆ ನಡೆಸಿಲ್ಲ ಎಂದ ಡಬ್ಲುಎಚ್ಒ
ಈ ವರದಿಯಲ್ಲಿ ಫಾರ್ಮಾಸ್ಯುಟಿಕಲ್ ಪ್ರಾಡಕ್ಟ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯಿಂದ ಕೊರೋನಿಲ್ ಔಷಧ ಪ್ರಮಾಣೀಕೃತಗೊಂಡಿರುವುದಾಗಿ ಉಲ್ಲೇಖಿಸಲಾಗಿತ್ತು. ಆದರೆ ಇದರ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ತಾನು ಕೊರೊನಾಗೆ ಸಂಬಂಧಿಸಿದಂತೆ ಯಾವುದೇ ಪಾರಂಪರಿಕ ಔಷಧಿಯ ಪರಿಶೀಲನೆ ನಡೆಸಿಲ್ಲ ಎಂದು ಟ್ವೀಟ್ ಮಾಡಿತ್ತು.
"ದೇಶಕ್ಕೆ ಇದು ಅವಮಾನಕರ ಸಂಗತಿ"
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಐಎಂಎ ವಾಗ್ದಾಳಿ ನಡೆಸಿದ್ದು, ಅವೈಜ್ಞಾನಿಕ ಔಷಧದ ಪ್ರಚಾರದಲ್ಲಿ ಆರೋಗ್ಯ ಸಚಿವರೇ ತೊಡಗಿಕೊಂಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಅದನ್ನು ನಿರಾಕರಿಸಿದ್ದು, ಇದು ದೇಶಕ್ಕೆ ಅವಮಾನಕರ ಸಂಗತಿ ಎಂದು ಹೇಳಿದೆ.
ಕೊರೋನಿಲ್ ಔಷಧಿ ನಿರಾಕರಿಸಿದ್ದ ಆರೋಗ್ಯ ಇಲಾಖೆ
ಬಾಬಾ ರಾಮ್ ದೇವ್ ಅವರು ಕೊರೊನಾ ಸೋಂಕಿಗೆ ಔಷಧಿ ಕಂಡುಹಿಡಿದಿರುವುದಾಗಿ ಈ ಹಿಂದೆಯೇ ಹೇಳಿಕೊಂಡಿದ್ದರು. ಕೊರೊನಾ ಲಸಿಕೆ ಆವಿಷ್ಕಾರಕ್ಕೂ ಮೊದಲು ಬಾಬಾ ರಾಮ್ ದೇವ್ ಅವರು ಇದೇ ಕೊರೋನಿಲ್ ಕಿಟ್ ಅನ್ನು ಕೊರೊನಾ ಸೋಂಕಿಗೆ ಔಷಧಿ ಎಂದು ಹೇಳಿದ್ದರು. ಆದರೆ ಈ ಪ್ರಚಾರಕ್ಕೆ ಕಿಡಿಕಾರಿದ್ದ ಕೇಂದ್ರ ಆರೋಗ್ಯ ಇಲಾಖೆ ಕೊರೊನಾ ಸೋಂಕಿಗೆ ಈವರೆಗೂ ಸಾಬೀತು ಪಡಿಸಿದ ಔಷಧಿ ಇಲ್ಲ, ಹೀಗಾಗಿ ಯಾವುದೇ ಔಷಧಿಯನ್ನು ಕೊರೊನಾ ಔಷಧಿ ಎಂದು ಪ್ರಚಾರ ಮಾಡಬಾರದು ಎಂದು ಹೇಳಿತ್ತು. ಆದರೆ ಆರೋಗ್ಯ ಸಚಿವರೇ ಈ ಬಾರಿ ಕೊರೋನಿಲ್ ಬಿಡುಗಡೆಗೆ ಹಾಜರಾಗಿದ್ದರು.