'ಯಾರಿಗೂ ನನ್ನನ್ನು ಬಂಧಿಸುವ ಧೈರ್ಯವಿಲ್ಲ' - ಐಎಂಎಗೆ ಬಾಬಾ ರಾಮ್ ದೇವ್ ತಿರುಗೇಟು
ನವದೆಹಲಿ, ಮೇ 27: ಅಲೋಪತಿಯನ್ನು ಟೀಕಿಸಿ ಯೋಗ ಗುರು ರಾಮ್ ದೇವ್ ನೀಡಿರುವ ಹೇಳಿಕೆ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ದೇಶದ್ರೋಹ ಆರೋಪದ ಮೇಲೆ ರಾಮ್ದೇವ್ ಬಂಧನ ಮಾಡಬೇಕು ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ) ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ.
ಈ ಎಲ್ಲಾ ಬೆಳವಣಿಗೆಯ ಬಳಿಕವೂ ಅಲೋಪತಿಯ ವಿರುದ್ದದ ತನ್ನ ಟೀಕೆಯನ್ನು ಮುಂದುವರಿಸಿರುವ ಯೋಗ ಗುರು ಬಾಬಾ ರಾಮ್ ದೇವ್, ನನ್ನನ್ನು ಬಂಧಿಸುವ ಧೈರ್ಯ ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.
ರಾಮ್ದೇವ್ ವಿರುದ್ಧ ದೇಶದ್ರೋಹದ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಿ: ಪ್ರಧಾನಿಗೆ ಐಎಂಎ ಪತ್ರ
ಅಲೋಪತಿ ಮೂರ್ಖತನದ ವಿಜ್ಞಾನ ಎಂದು ಟೀಕಿಸಿದ್ದ ಬಾಬಾ ರಾಮ್ದೇವ್ ಹೇಳಿಕೆ ದುರಾದೃಷ್ಟಕರ, ಅದನ್ನು ಹಿಂಪಡೆಯಬೇಕು ಎಂದು ಈಗಾಗಲೇ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ರಾಮ್ದೇವ್ಗೆ ಹೇಳಿದ್ದಾರೆ. ಹಾಗೆಯೇ ಅಲೋಪತಿ ಮೂರ್ಖತನದ ಪದ್ಧತಿ ಎಂದಿದ್ದ ರಾಮ್ದೇವ್ಗೆ ಉತ್ತರಾಖಂಡ ರಾಜ್ಯದ ವೈದ್ಯರ ತಂಡ 1,000 ಕೋಟಿ ರೂಗಳ ಮಾನನಷ್ಟ ಮೊಕದ್ದಮೆ ಹೂಡಿದೆ. ಐಎಂಎ ರಾಮ್ ದೇವ್ ಬಂಧನಕ್ಕೆ ಒತ್ತಾಯಿಸಿ ಪ್ರಧಾನಿಗೆ ಪತ್ರ ಬರೆದಿದೆ.
ಈ ಬೆನ್ನಲ್ಲೇ ವಿಡಿಯೋವೊಂದು ಬಿಡುಗಡೆ ಮಾಡಲಾಗಿದ್ದು, ನನ್ನನ್ನು ಬಂಧಿಸುವ ಧೈರ್ಯ ಯಾರಿಗೂ ಇಲ್ಲ. ಅವರ ಅಪ್ಪನಿಂದಲೂ ನನ್ನನ್ನು ಬಂಧಿಸಲಾಗದು ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಕಾಂಗ್ರೆಸ್ ಮುಖಂಡ ಗೌರವ್ ಪಾಂಡಿ ಟ್ವೀಟರ್ನಲ್ಲಿ ಶೇರ್ ಮಾಡಿದ್ದಾರೆ.
ಬಾಬಾ ರಾಮ್ದೇವ್ ಕ್ಷಮೆಯಾಚಿಸದಿದ್ದರೆ 1000 ಕೋಟಿ ರೂ. ಮಾನನಷ್ಟ ಮೊಕದ್ದಮೆ: ಐಎಂಎ
ಏನಾದರೂ ಕ್ರಮ ತೆಗೆದುಕೊಳ್ಳಬಹುದೇ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾರನ್ನು ಗೌರವ್ ಪಾಂಡಿ ಟ್ಯಾಗ್ ಮಾಡಿದ್ದಾರೆ.
(ಒನ್ಇಂಡಿಯಾ ಸುದ್ದಿ)