ರಾಮ್ದೇವ್ ವಿರುದ್ಧ ದೇಶದ್ರೋಹದ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಿ: ಪ್ರಧಾನಿಗೆ ಐಎಂಎ ಪತ್ರ
ನವದೆಹಲಿ, ಮೇ 26: ಅಲೋಪತಿ ವೈದ್ಯಕೀಯ ಪದ್ದತಿ ಹಾಗೂ ವೈದ್ಯರ ಬಗ್ಗೆ ಬಾಬಾ ರಾಮ್ದೇವ್ ಆಡಿದ ಮಾತು ದೊಡ್ಡ ವಿವಾದವಾಗಿದೆ. ವೈದ್ಯಕೀಯ ಸಂಘ ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರವನ್ನು ಬರೆದಿದ್ದು ದೇಶದ್ರೋಹದ ಅಡಿಯಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಿ ಎಂದು ಮನವಿ ಮಾಡಿದೆ. ಇದೇ ಸಂದರ್ಭದಲ್ಲಿ ಬಾಬಾ ರಾಮ್ದೇವ್ ಲಸಿಕೆ ಕಾರ್ಯಕ್ರಮದ ವಿರುದ್ಧ ತಪ್ಪುಸಂದೇಶಗಳನ್ನು ರಾಮ್ದೇವ್ ಹರಿಯಬಿಡುತ್ತಿದ್ದಾರೆ ಎಂದು ಆರೋಪಿಸಿದೆ.
ಕೊರೊನಾ ಲಸಿಕೆಯ ಎರಡು ಡೋಸ್ಗಳನ್ನು ಪಡೆದುಕೊಂಡ ನಂತರವೂ ಅಲೋಪತಿ ಚಿಕಿತ್ಸೆಯ ಕಾರಣದಿಂದಾಗಿ ವಿಶ್ವಾದ್ಯಂತ 10 ಸಾವಿರಕ್ಕೂ ಹೆಚ್ಚು ವೈದ್ಯರು ಹಾಗೂ ಲಕ್ಷಾಂತರ ಮಂದಿ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ರಾಮ್ದೇವ್ ವಿಡಿಯೋದಲ್ಲಿ ಹೇಳಿರುವುದನ್ನು ನೋವಿನಿಂದ ನಿಮ್ಮ ಗಮನಕ್ಕೆ ತರುತ್ತಿದ್ದೇವೆ ಎಂದು ಪತ್ರದಲ್ಲಿ ಐಎಂಎ ಪ್ರಧಾನಿಗೆ ತಿಳಿಸಿದೆ.
ಬಾಬಾ ರಾಮ್ದೇವ್ ಕ್ಷಮೆಯಾಚಿಸದಿದ್ದರೆ 1000 ಕೋಟಿ ರೂ. ಮಾನನಷ್ಟ ಮೊಕದ್ದಮೆ: ಐಎಂಎ
ಕರೋನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ನಿಮ್ಮ ಬದ್ಧತೆಗೆ ಭಾರತೀಯ ವೈದ್ಯಕೀಯ ಸಂಘವು ಉತ್ಸುಕತೆಯಿಂದ ಕೈಜೋಡಿಸಿದೆ. ಲಸಿಕೆ ಕಾರ್ಯಕ್ರಮವನ್ನು ಆರಂಭಿಸಿದಾಗ ಜನರ ಹಿಂಜರಿಕೆಯನ್ನು ದೂರ ಮಾಡಲು ದೇಶಾದ್ಯಂತದ ಐಎಂಎ ನಾಯಕರು ಲಸಿಕೆ ಪಡೆದಿದ್ದಾರೆ. ಈ ಮೂಲಕ ಜನರ ಹಿಂಜರಿಕೆಯನ್ನು ದೂರ ಮಾಡಲಾಯಿತು ಎಂದು ಪತ್ರದಲ್ಲಿ ಹೇಳಲಾಗಿದೆ.
ಇದಕ್ಕೂ ಮುನ್ನ ಉತ್ತರಾಖಂಡದ ಐಎಂಎ ಘಟಕ ಬಾಬಾ ರಾಮ್ದೇವ್ಗೆ ಮಾನನಷ್ಟ ಮೊಕದ್ದಮೆಯ ನೋಟಿಸ್ ಕಳುಹಿಸಿದೆ. ನೋಟಿಸ್ ತಲುಪಿದ 15 ದಿನಗಳ ಒಳಗಾಗಿ ತನ್ನ ಹೇಳಿಕೆಗೆ ಲಿಖಿತ ಕ್ಷಮೆಯಾಚನೆ ಮಾಡುವಂತೆ ಈ ನೋಟಿಸ್ನಲ್ಲಿ ತಿಳಿಸಲಾಗಿದ್ದು ಇಲ್ಲವಾದರೆ 1000 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆಯನ್ನು ಹೂಡುವುದಾಗಿ ಎಚ್ಚರಿಸಿದೆ.
ವಿವಾದಾತ್ಮಕ ಹೇಳಿಕೆ ವಾಪಾಸ್ ಪಡೆದು 25 ಪ್ರಶ್ನೆ IMA ಮುಂದಿಟ್ಟ ರಾಮ್ದೇವ್
ಉತ್ತರಾಖಂಡ್ನ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ನ ಕಾರ್ಯದರ್ಶಿ ಅಜಯ್ ಖನ್ನಾ ಅವರ ಪರವಾಗಿ ವಕೀಲ ನೀರಜ್ ಪಾಂಡೆ ಈ ಆರು ಪುಟಗಳ ನೋಟಿಸ್ ನೀಡಿದ್ದಾರೆ. ಬಾಬಾ ರಾಮ್ದೇವ್ ಅವರ ಹೇಳಿಕೆಯಿಂದ ಅಲೋಪತಿಯ ಮತ್ತು ಇದರ ಭಾಗವಾಗಿರುವ 2000 ವೈದ್ಯರ ಖ್ಯಾತಿ ಮತ್ತು ಇಮೇಜ್ಗೆ ಧಕ್ಕೆಯಾಗಿದೆ ಎಂದು ವಿವರಿಸಿದೆ.