ಮೂವರು ಮಾಜಿ ಸಿಎಂ ಗಳ ಗಣಿ ಕೇಸ್: ಮಾ.31ಕ್ಕೆ ವಿಚಾರಣೆ ಕೊನೆ
ನವದೆಹಲಿ, ಜನವರಿ 18 : ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಎನ್. ಧರಂಸಿಂಗ್ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲಿ ಆಗಿರುವ ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆಯನ್ನು ಮಾರ್ಚ್ 31ಕ್ಕೆ ನಡೆಸುವುದಾಗಿ ಗುರುವಾರ ಸುಪ್ರೀಂಕೋರ್ಟ್ ಹೇಳಿದೆ.
ಸಾಯಿ ವೆಂಕಟೇಶ್ವರ ಮೈನಿಂಗ್ ಗೆ ಗಣಿಗಾರಿಕೆ ಅನುಮತಿ ನೀಡುವುದರಲ್ಲಿ ಆಗ ಸಿಎಂ ಆಗಿದ್ದ ಕುಮಾರಸ್ವಾಮಿ ಅಕ್ರಮ ಎಸಗಿದ್ದಾರೆ. ಮೀಸಲು ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟು ಅಕ್ರಮ ಮಾಡಿದ್ದಾರೆ ಎಂಬ ಆರೋಪವಿತ್ತು.
ಲೋಕಾಯುಕ್ತ ವರದಿಯಲ್ಲಿ ಇವರ ಅಕ್ರಮದ ಬಗ್ಗೆ ಉಲ್ಲೇಖವಾಗಿತ್ತು. ಇದನ್ನು ಆಧರಿಸಿ ತನಿಖೆಗೆ ಆಗ್ರಹಿಸಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಪ್ರಕರಣಗಳ ತನಿಖೆ ಮತ್ತು ವಿಚಾರಣೆಗೆ ಸುಪ್ರೀಂ ತಡೆ ನೀಡಿತ್ತು. ಈ ತಡೆ ತೆರವುಗೊಳಿಸುವಂತೆ ವಿಶೇಷ ತನಿಖಾ ದಳ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ನ್ಯಾ. ಎ . ಕೆ. ಸಿಕ್ರಿ ಮತ್ತು ನ್ಯಾ ಅಶೋಕ್ ಭೂಷಣ್ ಅವರ ಪೀಠ ಮಾರ್ಚ್ 31 ಕ್ಕೆ ವಿಚಾರಣೆ ನಡೆಸುವುದಾಗಿ ಹೇಳಿದೆ.