'ಪ್ರವಾದಿ ಇಂದು ಬದುಕಿದ್ದರೆ...' ಲೇಖಕಿ ತಸ್ಲಿಮಾ ನಸ್ರಿನ್ ಆಕ್ರೋಶ
ನವದೆಹಲಿ, ಜೂ. 11: ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆಯಿಂದ ಅಮಾನತಾಗಿರುವ ನೂಪೂರ್ ಶರ್ಮಾ ಹಾಗೂ ಉಚ್ಚಾಟನೆಗೊಂಡಿರುವ ನವೀನ್ ಕುಮಾರ್ ಜಿಂದಾಲ್ ಅವರನ್ನು ಬಂಧಿಸುವಂತೆ ಭಾರತ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಹಾಗೂ ಹಿಂಸಾಚಾರದ ವಿರುದ್ಧ ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರಿನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅವರು, ಮುಹಮ್ಮದ್ ಅವರು ಇಂದು ಬದುಕಿದ್ದರೂ ಸಹ ಪ್ರಪಂಚದಾದ್ಯಂತದ ಮುಸ್ಲಿಂ ಮತಾಂಧರ ಹುಚ್ಚುತನವನ್ನು ನೋಡಿ ಅವರು ಆಘಾತಕ್ಕೊಳಗಾಗಿದ್ದರು ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧದ ಹೇಳಿಕೆಯಿಂದ ದೇಶದ 15 ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಅದರಲ್ಲಿ ಜಾರ್ಖಂಡ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಇಬ್ಬರು ಮೃತರಾಗಿದ್ದು, ಸುಮಾರು 10 ಜನರು ಗಾಯಗೊಂಡಿದ್ದಾರೆ. ಪ್ರತಿಭಟನೆಯಿಂದ ರಾಂಚಿ ಸಂಪೂರ್ಣ ಉದ್ವಿಗ್ನಗೊಂಡಿದ್ದು, ನಗರದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಅಲ್ಲದೆ ಜಮ್ಮು ಕಾಶ್ಮೀರ, ಉತ್ತರ ಪ್ರದೇಶ, ಪಶ್ಚಿಮಾ ಬಂಗಾಳ, ಹರಿಯಾಣ, ಕರ್ನಾಟಕ ಸೇರಿದಂತೆ ಪ್ರತಿಭಟನೆಗಳು ನಡೆದಿವೆ.
ನೂಪುರ್ ವಿವಾದ: ದೆಹಲಿಯಲ್ಲಿ ಪ್ರತಿಭಟನೆ- ಕೋವಿಡ್ ನಿಯಮಗಳ ಅಡಿಯಲ್ಲಿ ಪ್ರಕರಣ
ಹಿಂಸಾಚಾರದಲ್ಲಿ ಬೈಕ್ಗಳು ಸೇರಿದಂತೆ ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಹಲವು ನಗರಗಳಲ್ಲಿ ಶುಕ್ರವಾರ ಮಧ್ಯಾಹ್ನದ ಪ್ರಾರ್ಥನೆ ನಂತರ ಪ್ರತಿಭಟನೆಕಾರರು ಮಸೀದಿಗಳ ಮುಂದೆ ಪ್ರತಿಭಟನೆ ಶುರು ಮಾಡಿದರು. ನಂತರ ಬಿಜೆಪಿಯ ರಾಷ್ಟ್ರೀಯ ವಕ್ತಾರೆಯಾಗಿದ್ದ ನೂಪೂರ್ ಶರ್ಮಾ ಹಾಗೂ ದೆಹಲಿ ಬಿಜೆಪಿ ಘಟಕದ ಮಾಧ್ಯಮ ಮುಖ್ಯಸ್ಥರಾಗಿದ್ದ ನವೀನ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅವರಿಬ್ಬರನ್ನು ಬಂಧಿಸುವಂತೆ ಒತ್ತಾಯ ಮಾಡಿದರು.
ಘಟನೆಯಲ್ಲಿ ಕಲ್ಲು ತೂರಾಟ
ಉತ್ತರಪ್ರದೇಶದಲ್ಲಿ ನಡೆದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸುಮಾರು 130 ಜನರನ್ನು ಈಗಾಗಲೇ ಬಂಧಿಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಕಲ್ಲು ತೂರಾಟ ನಡೆಸಲಾಗಿದ್ದು, ಬೈಕ್ ಹಾಗೂ ಕಾರುಗಳುಗಳು ಬೆಂಕಿಯಿಂದ ಸುಟ್ಟು ಭಸ್ಮವಾಗಿವೆ.
ಜಮಾತ್ ಉಲ್ಮಾ ಇ ಹಿಂದ್ ಕರೆ
ನುಪೂರ್ ಶರ್ಮಾ ವಿರುದ್ಧ ಪ್ರತಿಭಟನೆಗಳು ಜಾಸ್ತಿಯಾಗುತ್ತಿದ್ದಂತೆ ತಾವು ಯಾವುದೇ ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಮುಸ್ಲಿಂ ವಿದ್ವಾಂಸರು ಹಾಗೂ ವಕ್ತಾರರಿಗೆ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ ಶನಿವಾರ ತಿಳಿಸಿದೆ. ಅಲ್ಲದೆ ಮತ್ತೊಂದು ಪ್ರಮುಖ ಮುಸ್ಲಿಂ ಸಂಘಟನೆ ಜಮಾತ್ ಉಲ್ಮಾ ಇ ಹಿಂದ್ ಕೂಡ ಪರಿಸ್ಥಿತಿ ತಿಳಿಯಾಗುವವರೆಗೂ ರಾಷ್ಟ್ರೀಯ ವಿಷಯಗಳ ಸಂಬಂಧ ಯಾವುದೇ ಟಿವಿ ಚರ್ಚೆಯಲ್ಲಿ ಭಾಗವಹಿಸದಂತೆ ಕರೆ ನೀಡಿದೆ.
ನ್ಯಾಯಸಮ್ಮತ ನಿರ್ಧಾರಗಳು ಬೇಕಾಗಿಲ್ಲ
ಪ್ರವಾದಿ ವಿರೋಧಿಗಳ ಉದ್ದೇಶ ಪೈಗಂಬರರನ್ನು ಅವಮಾನಿಸುವುದೇ ಆಗಿದೆ. ಹಾಗಾಗಿ ಮುಂದೆ ಟಿವಿ ಚರ್ಚೆಗಳಲ್ಲಿ ಪಾಲ್ಗೊಳ್ಳುವುದು ಬೇಡ ಎಂದು ಸೂಚನೆ ನೀಡಿದೆ. ಮುಸ್ಲಿಮರ ಕುರಿತಂತೆ ಟಿವಿಯವರಿಗೆ ನ್ಯಾಯಸಮ್ಮತ ನಿರ್ಧಾರಗಳು ಬೇಕಾಗಿಲ್ಲ, ಬದಲಾಗಿ ಅವರಿಗೆ ಮುಸ್ಲಿಂ ಎಂಬ ಒಬ್ಬರ ಮುಖ ಬೇಕು ಅಷ್ಟೇ. ಹೀಗಾಗಿ ಅವರ ಉದ್ದೇಶ ಒಳ್ಳೇಯದಲ್ಲ. ನಾವು ಅವರ ಟಿವಿ ಕಾರ್ಯಕ್ರಮಗಳನ್ನು ಬಹಿಷ್ಕಾರಿ ಮಾಡುವುದರಿಂದ ಅವರ ಟಿಆರ್ಪಿಯು ಇಳಿಯುತ್ತದೆ. ಅಲ್ಲದೆ ಅವರ ತೆವಲು ಕೂಡ ಕಡಿಮೆಯಾಗುತ್ತದೆ. ಮುಖ್ಯವಾಗಿ ಅವರು ಏನು ಅಂದುಕೊಳ್ಳುತ್ತಾರೋ ಅವರು ಸಾಧ್ಯವಾಗುವುದಿಲ್ಲ ಎಂದು ಸಂಸ್ಥೆ ಹೇಳಿದೆ.
|
ಜಮಾತ್ ಉಲ್ಮಾಇ ಹಿಂದ್ ಆಕ್ರೋಶ
ಈ ಬಗ್ಗೆ ಮಾತನಾಡಿರುವ ಜಮಾತ್ ಉಲ್ಮಾಇ ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ಮೌಲಾನಾ ನಿಯಾಜ್ ಫಾರೂಕಿ, ನಮ್ಮ ಸಂಘಟನೆ ಸದಸ್ಯರಿಗೆ ಯಾವುದೇ ಟಿವಿ ಕಾರ್ಯಕ್ರಮಗಳಿಗೆ ಭಾಗವಹಿಸದಂತೆ ಸೂಚನೆ ನಿಡಿದೆ. ಈಗ ಪರಿಸ್ಥಿತಿ ಚೆನ್ನಾಗಿಲ್ಲ. ಅಲ್ಲದೆ ನಾವು ಈ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕಿದೆ. ಅಲ್ಲದೆ ಕೆಲವು ವಿತಂಡವಾದಿಗಳು ಚರ್ಚೆಯಲ್ಲಿ ಭಾಗವಹಿಸುತ್ತಾರೆ. ಅವರಿಗೆ ನಮ್ಮ ಸಮುದಾಯದ ಬಗ್ಗೆ ಇಲ್ಲಸಲ್ಲದನ್ನು ಹೇಳುತ್ತಾರೆ. ಹಾಗಾಗಿ ಇದಕ್ಕೆ ಮುಸ್ಮಿಂ ಸಮುದಾಯ ಭಾಗವಹಿಸುವುದು ಬೇಡ ಎಂದು ಹೇಳಿದರು.