ಕೃಷಿ ಕಾಯ್ದೆಗಳಲ್ಲಿ ಲೋಪವಿದ್ದರೆ ಚರ್ಚೆಗೆ ಸಿದ್ಧ ಎಂದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್
ನವದೆಹಲಿ, ಫೆಬ್ರವರಿ.24: ಭಾರತದಲ್ಲಿ ರೈತರ ಕಲ್ಯಾಣ ಮತ್ತು ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ರೂಪಿಸಿರುವ ಕೃಷಿ ಸಂಬಂಧಿತ ಕಾಯ್ದೆಗಳ ಜಾರಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.
ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈಟ್ ಅವರು ಸಂಸತ್ ಚಲೋ ನಡೆಸುವುದಾಗಿ ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಕೇಂದ್ರ ಕೃಷಿ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ದೇಶದ ಕೃಷಿ ಮತ್ತು ಕೃಷಿಕರ ಆದಾಯ ಅಭಿವೃದ್ಧಿಗೆ ಅಗತ್ಯವಾಗಿರುವ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿದೆ ಎಂದಿದ್ದಾರೆ.
ಸಂಸತ್ ಘೇರಾವ್: ಕೃಷಿ ಕಾಯ್ದೆ ವಿರುದ್ಧ 4 ಅಲ್ಲ 40 ಲಕ್ಷ ಟ್ರ್ಯಾಕ್ಟರ್ ಜಾಥಾ!
ಕೇಂದ್ರ ಸರ್ಕಾರ ತನ್ನ ನಿಲುವಿಗೆ ಬದ್ಧವಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆಗೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿದ್ದೇವೆ. ಕೃಷಿ ಕಾಯ್ದೆಗಳಲ್ಲಿ ಲೋಪವಿರುವ ಬಗ್ಗೆ ನೀವು ವಾದವನ್ನು ಬೇಕಿದ್ದಲ್ಲಿ ಮಂಡಿಸಿ ಎಂದು ಸಚಿವ ನರೇಂದ್ರ ಸಿಂಗ್ ತೋಮರ್ ಆಹ್ವಾನಿಸಿದ್ದಾರೆ.
ಸಂಸತ್ ಮುತ್ತಿಗೆ ಎಚ್ಚರಿಕೆ ನೀಡಿದ ರಾಕೇಶ್ ತಿಕೈಟ್:
ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು. ಇಲ್ಲದೇ ಹೋದಲ್ಲಿ ಸಂಸತ್ ಮುತ್ತಿಗೆ ಹಾಕಲಾಗುತ್ತದೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈಟ್ ಎಚ್ಚರಿಕೆ ನೀಡಿದ್ದರು. ದೆಹಲಿಯ ಇಂಡಿಯಾ ಗೇಟ್ ಬಳಿ ಇರುವ ಉದ್ಯಾನವನಗಳಲ್ಲಿ ರೈತರು ಉಳುಮೆ ಮಾಡುವ ಮೂಲಕ ಕೇಂದ್ರದ ವಿರುದ್ಧ ಹೋರಾಟ ನಡೆಸಲಿದ್ದಾರೆ ಎಂದಿದ್ದರು.
4ರ ಬದಲು 40 ಲಕ್ಷ ಟ್ರಾಕ್ಟರ್ ಜಾಥಾ:
ಮಾರ್ಚ್ ತಿಂಗಳ ಆರಂಭದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಸಂಸತ್ ಘೇರಾವ್ ನಡೆಸುವುದಕ್ಕೆ ಚಿಂತಿಸಲಾಗುತ್ತಿದೆ. ಯಾವುದೇ ಸಂದರ್ಭದಲ್ಲಿ ಟ್ರ್ಯಾಕ್ಟರ್ ಜಾಥಾ ನಡೆಸುವುದಕ್ಕೆ ದೇಶಾದ್ಯಂತ ರೈತರು ಅಣಿ ಆಗಿದ್ದಾರೆ. ಈ ಬಾರಿ 4 ಲಕ್ಷದ ಬದಲಿಗೆ 40 ಲಕ್ಷ ಟ್ರ್ಯಾಕ್ಚರ್ ಗಳೊಂದಿಗೆ ಸಂಸತ್ ಘೇರಾವ್ ನಡೆಸಲಾಗುತ್ತದೆ. ಅಷ್ಟರಲ್ಲೇ ಕೇಂದ್ರ ಸರ್ಕಾರವು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ರಾಕೇಶ್ ತಿಕೈಟ್ ಎಚ್ಚರಿಸಿದ್ದರು.