ಆಟೋಮೊಬೈಲ್ ಮಾರಾಟ ಕುಸಿದಿದ್ದರೆ ಟ್ರಾಫಿಕ್ ಜಾಮ್ ಆಗೋದು ಹೇಗೆ?: ಬಿಜೆಪಿ ಸಂಸದನ ತರ್ಕ
ನವದೆಹಲಿ, ಡಿಸೆಂಬರ್ 5: ಉತ್ತರ ಪ್ರದೇಶದ ಬಲ್ಲಿಯಾ ಲೋಕಸಭೆ ಕ್ಷೇತ್ರದ ಬಿಜೆಪಿ ಸಂಸದ ಎಂ.ಪಿ. ವೀರೇಂದ್ರ ಸಿಂಗ್ ಮಸ್ತ್ ಅವರು ಹೊಸ ತರ್ಕ ಮಂಡಿಸುವ ಮೂಲಕ ನಗೆಪಾಟಲಿಗೀಡಾಗಿದ್ದಾರೆ.
ಭಾರತದಲ್ಲಿ ಆರ್ಥಿಕ ಕುಸಿತ ಉಂಟಾಗಿದೆ ಎಂಬ ವರದಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಅವರು, ಒಂದು ವೇಳೆ ಆಟೋಮೊಬೈಲ್ ಮಾರಾಟಗಳಲ್ಲಿ ಇಳಿಕೆಯಾಗಿದ್ದರೆ ರಸ್ತೆಯ ಮೇಲೆ ಇಷ್ಟೊಂದು ಟ್ರಾಫಿಕ್ ಜಾಮ್ ಏಕೆ ಆಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಆರ್ಥಿಕ ಕುಸಿತದ ವಾತಾವರಣವನ್ನು ಸೃಷ್ಟಿಸಲಾಗಿದೆ ಎಂದೂ ಆರೋಪಿಸಿದ್ದಾರೆ.
ಈರುಳ್ಳಿ ಸೇವನೆ ಆರೋಗ್ಯಕ್ಕೆ ಹಾನಿಕರ: ನಾನಂತೂ ಈರುಳ್ಳಿ ತಿನ್ನಲ್ಲ!
ಲೋಕಸಭೆಯಲ್ಲಿ ಗುರುವಾರ ಮಾತನಾಡಿದ ಅವರು, 'ಆರ್ಥಿಕ ಕುಸಿತ ಇದೆ ಎನ್ನುವಂತಹ ವಾತಾವರಣವನ್ನು ಸೃಷ್ಟಿ ಮಾಡಲಾಗುತ್ತಿದೆ. ಸರ್ಕಾರ ಮತ್ತು ದೇಶಕ್ಕೆ ಕೆಟ್ಟ ಹೆಸರು ತರಬೇಕೆಂಬ ಉದ್ದೇಶದಿಂದ ಜನರು ಆಟೋಮೊಬೈಲ್ ವಲಯ ಕುಸಿತ ಕಂಡಿದೆ ಎಂದು ಹೇಳುತ್ತಿದ್ದಾರೆ. ಆಟೋಮೊಬೈಲ್ ಮಾರಾಟದಲ್ಲಿ ಕುಸಿತ ಉಂಟಾಗಿದ್ದರೆ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಏಕೆ ಇದೆ? ಒಂದು ಮನೆಯಲ್ಲಿ 20 ವಾಹನಗಳು ಇರುತ್ತವೆ. ಗ್ರಾಹ ಮತ್ತು ಉತ್ಪಾದನೆ ನಡುವೆ ಯಾವ ರೀತಿಯ ಸಂಬಂಧ ಇರಬೇಕು ಎಂಬುದನ್ನು ನೀವು ನಿರ್ಧರಿಸಲು ಸಾಧ್ಯವಿಲ್ಲ' ಎಂದು ಹೇಳಿದರು.
ವೀರೇಂದ್ರ ಸಿಂಗ್ ಅವರ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇಂತಹ ಮೂರ್ಖತನದ ಹೇಳಿಕೆಗಳನ್ನು ನೀಡುವ ಮೂಲಕ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಡಿದ್ದಾರೆ.