ಹಣ ವಿನಿಮಯಕ್ಕೆ ಗುರುತಿನ ಚೀಟಿ ತೋರಿಸಿದರೆ ಸಾಕು
ನವದೆಹಲಿ, ನವೆಂಬರ್, 16: ಹಣ ವಿನಿಮಯಕ್ಕಾಗಿ ಬ್ಯಾಂಕ್ ಗಳಲ್ಲಿ ಕ್ಯೂ ನಿಲ್ಲುತ್ತಿರುವ ಗ್ರಾಹಕರ ಅನುಕೂಲಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿರ್ದೇಶನ ನೀಡಿದೆ.
ನಿಷೇಧಿತ ರೂ.500 ಹಾಗೂ ರೂ 1000 ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಬರುವ ಗ್ರಾಹಕರಲ್ಲಿ ಗುರುತಿನ ಚೀಟಿ ಪ್ರತಿಯನ್ನು ಪಡೆದುಕೊಳ್ಳಬೇಡಿ, ತೋರಿಸಿದರೆ ಸಾಕು ಎಂದು ಆರ್ ಬಿಐ ಸೂಚಿಸಿದೆ.[25 ಜನರನ್ನು ಆಪೋಶನ ತೆಗೆದುಕೊಂಡ 500, 1000 ನೋಟು]
ಈ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಆರ್ ಬಿ ಐ ಹಣ ವಿನಿಮಯಕ್ಕಾಗಿ ಬರುತ್ತಿರುವ ಗ್ರಾಹಕರು ಬ್ಯಂಕ್ ಗಳಿಗೆ ಅಗತ್ಯ ಗುರುತಿನ ಚೀಟಿಯ ಪ್ರತಿಯನ್ನು ಒದಗಿಸುವ ಅವಶ್ಯಕತೆ ಇಲ್ಲ, ಬ್ಯಾಂಕ್ ಸಿಬ್ಬಂದಿಗೆ ತೋರಿಸಿದರೆ ಸಾಕು ಎಂದು ಹೇಳಿದೆ.
ಹಣ ವಿನಿಮಯಕ್ಕಾಗಿ ಭರ್ತಿ ಮಾಡಿರುವ ಅರ್ಜಿಯಲ್ಲಿರುವ ವಿವಿರಗಳ ಪರಿಶೀಲನೆಗಾಗಿ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ತೋರಿಸಬೇಕಾಗುತ್ತದೆ ಎಂದು ಆರ್ ಬಿ ಐ ನ ಹಿರಿಯ ಅದಿಕಾರಿಯೊಬ್ಬರು ತಿಳಿಸಿದ್ದಾರೆ.[ಹಣ ವಿನಿಮಯ ಮಾಡಿಕೊಳ್ಳುವವರ ಬೆರಳಿಗೆ ಶಾಹಿ]
ಕೆಲವೊಂದು ಬ್ಯಾಂಕ್ ಗಳು ಯಾವುದೇ ಗುರುತಿನ ಚೀಟಿ ಪ್ರತಿಗಳನ್ನು ಪಡೆದುಕೊಳ್ಳುತ್ತಿಲ್ಲ. ಆದರೆ ಕೆಲವೊಂದು ಬ್ಯಾಂಕ್ ಗಳು ಕೇಳುತ್ತಿವೆ. ಪ್ರತಿಗಳನ್ನು ಪಡೆದುಕೊಳ್ಳುವಂತೆ ಯಾವುದೇ ಸೂಚನೆಯನ್ನು ನಾವು ನೀಡಿಲ್ಲ ಎಂದು ಆರ್ ಬಿ ಐ ಹೇಳಿದೆ.
"ಗ್ರಾಹಕರ ವಿವರಗಳು ಈಗಾಗಲೇ ಬ್ಯಾಂಕ್ ನಲ್ಲಿ ದಾಖಲಾಗಿರುವುದರಿಂದ ಮತ್ತೊಮ್ಮೆ ಅವರಿಂದ ಗುರುತಿನ ಚೀಟಿ ಪ್ರತಿಗಳನ್ನು ಪಡೆದುಕೊಳ್ಳುವ ಅವಶ್ಯಕತೆ ಆದರೂ ಏನು" ಎಂದು ಲಕ್ಷ್ಮೀ ವಿಲಾಸ್ ಬ್ಯಾಂಕ್ ನ ಸಿಒಒ ವಿದ್ಯಾಸಾಗರ್ ಹೇಳಿದ್ದಾರೆ.
ನವೆಂಬರ್ 8ರಂದು ಪ್ರಧಾನಿ ಮೋದಿ ಅವರು ಗರಿಷ್ಠ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡುತ್ತಿರುವುದಾಗಿ ಘೋಷಿಸಿದ ಬೆನ್ನಲ್ಲೇ ತಮ್ಮ ಬಳಿಯಿದ್ದ ಹಣವನ್ನು ವಿನಿಮಯ ಮಾಡಿಕೊಳ್ಳಲು ಗ್ರಾಹಕರು ಬ್ಯಾಂಕ್ ಗಳಲ್ಲಿ ಕ್ಯೂಕಟ್ಟಿ ನಿಲ್ಲುತ್ತಿದ್ದಾರೆ.
ವಿನಿಮಯಕ್ಕಾಗಿ ಮಾನ್ಯವಿರುವ ಗುರುತಿನ ಚೀಟಿ ಪ್ರತಿಗಳಲ್ಲಿ ಯಾವುದಾದರೂ ಒಂದನ್ನು ಜತೆಗೆ ಬ್ಯಾಂಕ್ ಸಿಬ್ಬಂದಿಗೆ ತೋರಿಸುವ ಅಗತ್ಯವಿದೆ.