ಐಸಿಐಸಿಐ-ವಿಡಿಯೋಕಾನ್ ವಿವಾದ: ಸೇವೆಯಿಂದ ಚಂದಾ ಕೊಚ್ಚಾರ್ ವಜಾ
ನವದೆಹಲಿ, ಜನವರಿ 31: ಐಸಿಐಸಿಐ ಬ್ಯಾಂಕ್-ವಿಡಿಯೋಕಾನ್ ಹಗರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ನ ಮಾಜಿ ಎಂಡಿ ಮತ್ತು ಸಿಇಒ ಚಂದಾ ಕೊಚ್ಚಾರ್ ಅವರನ್ನು ಬೋರ್ಡ್ ಆಫ್ ಐಸಿಐಸಿಐ ಸೇವೆಯಿಂದ ವಜಾಗೊಳಿಸಿದೆ.
ಐಸಿಐಸಿಐ ಬ್ಯಾಂಕ್-ವಿಡಿಯೊಕಾನ್ ಸಾಲದ ಪ್ರಕರಣದಲ್ಲಿ ಮಾಜಿ ಸಿಇಒ ಚಂದಾ ಕೊಚ್ಚಾರ್ ಅವರು ಬ್ಯಾಂಕ್ನ ನೀತಿಗಳನ್ನು ಉಲ್ಲಂಘಿಸಿದ್ದಾರೆ ಎಂಬ ಕುರಿತು ನಿವೃತ್ತ ನ್ಯಾಯಮೂರ್ತಿ ಬಿ ಎನ್ ಶ್ರೀಕೃಷ್ಣ ನೇತೃತ್ವದ ಸಮಿತಿ ತನಿಖೆ ನಡೆಸಿತ್ತು. ಅವರು ನಿಯಮಗಳನ್ನು ಉಲ್ಲಂಘಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ನೀಡಿದ್ದ 10 ಕೋಟಿ ರೂ. ಬೋನಸ್ ಅನ್ನು ವಾಪಸ್ ನೀಡುವಂತೆ ಆದೇಶಿಸಲಾಗಿದೆ.
ಚಂದಾ ಕೊಚ್ಚರ್ ಮೇಲೆ ಎಫ್ಐಆರ್ ಹಾಕಿದ ಸಿಬಿಐ ಅಧಿಕಾರಿ ವರ್ಗ
ಅವರ ವೇತನ, ಬೋನಸ್, ಮೆಡಿಕಲ್ ಸೌಲಭ್ಯಗಳು ಮತ್ತು ಷೇರು ಪಾಲುದಾರಿಕೆಯನ್ನು ಹಿಂಪಡೆಯಲು ಐಸಿಐಸಿಐ ಬೋರ್ಡ್ ಮುಂದಾಗಿದೆ.
ಸಮಿತಿಯ ವರದಿಯನ್ನು ಕೇಳಿ ನನಗೆ ಆಘಾತ, ಬೇಸರ, ಅವಮಾನ ಎಲ್ಲವೂ ಒಟ್ಟಿಗೇ ಆಗಿವೆ ಎಂದು ಚಂದಾ ಕೊಚ್ಚಾರ್ ಪ್ರತಿಕ್ರಿಯೆ ನೀಡಿದ್ದಾರೆ.
ವಿಡಿಯೋಕಾನ್ ಮುಖ್ಯ ಕಚೇರಿ ಮೇಲೆ ಸಿಬಿಐ ದಾಳಿ
ಚಂದಾ ಕೊಚ್ಚಾರ್ ಅಧಿಕಾರದಲ್ಲಿ ಇದ್ದ ಸಮುಯದಲ್ಲಿ ಐಸಿಐಸಿಐ ಬ್ಯಾಂಕ್ ಮೂಲಕ ಅವ್ಯವಹಾರ ನಡೆದಿದೆ ಎಂದು ಕಳೆದ ಮಾರ್ಚ್ ನಲ್ಲಿ ಮೊದಲ ಬಾರಿಗೆ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಚಂದಾ ಕೊಚ್ಚರ್, 2018 ರ ಅಕ್ಟೋಬರ್ನಲ್ಲಿ ಸಿಇಒ ಹುದ್ದೆಯಿಂದ ಕೆಳಗಿಳಿದಿದ್ದರು.
ಬ್ಯಾಂಕ್ ನ ನಿಯಮಗಳನ್ನು ಉಲ್ಲಂಘಿಸಿ ವಿಡಿಯೋಕಾನ್ ಗ್ರೂಪ್ ಗೆ ಸುಮಾರು 3250 ಕೋಟಿ ರೂ.ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಅವ್ಯವಹಾರದ ಹಗರಣ ಇದಾಗಿದೆ.