ಆರ್ಎಸ್ಎಸ್ ಅನ್ನು ಇನ್ಮುಂದೆ ಸಂಘ ಪರಿವಾರ ಎಂದು ಕರೆಯುವುದಿಲ್ಲ; ರಾಹುಲ್
ನವದೆಹಲಿ, ಮಾರ್ಚ್ 25: "ಆರ್ಎಸ್ಎಸ್ ಅನ್ನು ಇನ್ನು ಮುಂದೆ ಸಂಘ ಪರಿವಾರ ಎಂದು ಕರೆಯುವುದಿಲ್ಲ. ಮಹಿಳೆಯರನ್ನು ಹಾಗೂ ಹಿರಿಯರನ್ನು ಸಂಘ ಪರಿವಾರದಲ್ಲಿ ಗೌರವಿಸುತ್ತಾರೆ. ಆದರೆ ಆರ್ಎಸ್ಎಸ್ನಲ್ಲಿ ಹೀಗಾಗುತ್ತಿದೆಯೇ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಆರ್ಎಸ್ಎಸ್ ವಿರುದ್ಧ ಟ್ವೀಟ್ ಮಾಡಿರುವ ಅವರು, "ಆರ್ಎಸ್ಎಸ್ ಹಾಗೂ ಅದರ ಸಂಘ ಸಂಸ್ಥೆಗಳನ್ನು ನಾನು ಸಂಘ ಪರಿವಾರ ಎಂದು ಕರೆಯುವುದಿಲ್ಲ. ಅದಕ್ಕೆ ಆರ್ಎಸ್ಎಸ್ ಸೂಕ್ತವೂ ಅಲ್ಲ. ಕುಟುಂಬದಲ್ಲಿ ಮಹಿಳೆ, ಹಿರಿಯರನ್ನು ಗೌರವದಿಂದ ಕಾಣಲಾಗುತ್ತದೆ. ಪ್ರೀತಿ, ಗೌರವಾದರಗಳು ತುಂಬಿರುತ್ತವೆ. ಆದರೆ ಆರ್ಎಸ್ಎಸ್ನಲ್ಲಿ ಅದಿಲ್ಲ" ಎಂದು ಹೇಳಿದ್ದಾರೆ.
"ಪುರುಷರಿಗಿಂತ ಮಹಿಳೆಯರೇ ಗಟ್ಟಿ; ಆದರೆ ಇದು ಅವರಿಗೆ ಅರ್ಥವಾಗಿಲ್ಲ"
ಉತ್ತರ ಪ್ರದೇಶದಲ್ಲಿ ಕೇರಳ ಕ್ರೈಸ್ತ ಸನ್ಯಾಸಿನಿಗಳ ಮೇಲಿನ ದೌರ್ಜನ್ಯದ ಕುರಿತು ಪ್ರತಿಕ್ರಿಯಿಸಿರುವ ಅವರು, ಇವೆಲ್ಲವೂ ಆರ್ಎಸ್ಎಸ್ನ ಕೆಟ್ಟ ಪ್ರಚಾರದ ಫಲ ಎಂದು ಹೇಳಿದ್ದಾರೆ.
"ಒಂದು ಸಮುದಾಯದ ವಿರುದ್ಧ ಮತ್ತೊಂದು ಸಮುದಾಯವನ್ನು ಎತ್ತಿಕಟ್ಟುವುದು, ಅಲ್ಪಸಂಖ್ಯಾತರನ್ನು ಹಿಂಸೆ ಮಾಡುವುದು ಈ ಸಂಘ ಪರಿವಾರದ ಕೆಲಸ. ಇಂಥ ಕೆಟ್ಟ ಶಕ್ತಿಗಳ ವಿರುದ್ಧ ಸರಿಯಾದ ಹೆಜ್ಜೆ ಇಡಲು ಸೂಕ್ತ ಸಮಯ" ಎಂದು ಹೇಳಿದ್ದಾರೆ.
ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಬ್ಬರು ಕ್ರೈಸ್ತ ಸನ್ಯಾಸಿಗಳು ಮತ್ತು ಅವರ ಇಬ್ಬರು ಶಿಷ್ಯೆಯರನ್ನು ಎಬಿವಿಪಿ ಸದಸ್ಯರು ಮುತ್ತಿಗೆ ಹಾಕಿ ರೈಲಿನಿಂದ ಬಲವಂತವಾಗಿ ಕೆಳಕ್ಕಿಳಿಸಿದ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿತ್ತು. ತಾವು ಯಾವುದೇ ಮತಾಂತರದಲ್ಲಿ ಭಾಗಿಯಾಗಿಲ್ಲ ಎಂದು ರೈಲ್ವೆ ನಿಲ್ದಾಣದಲ್ಲಿ ವಿಚಾರಣೆ ವೇಳೆ ಅವರು ವಿವರಣೆ ನೀಡಿದ ಬಳಿಕವಷ್ಟೇ ಅವರನ್ನು ಮುಂದೆ ಸಾಗಲು ಅನುಮತಿ ನೀಡಲಾಯಿತು. ಬುಧವಾರ, ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ ಸೂಕ್ತ ತನಿಖೆ ನಡೆಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದು ಒತ್ತಾಯಿಸಿದ್ದರು.