ಪ್ರಸನ್ನ ಕುಮಾರ್ ಹೇಳಿದ ಅಪಹರಣದ ಕಥೆ!
ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಕೆಜೆಪಿ ಸಂಸ್ಥಾಪಕ ಪ್ರಸನ್ನ ಕುಮಾರ್ ಸೋಮವಾರ ನವದೆಹಲಿಯಲ್ಲಿ ಪತ್ತೆಯಾಗಿದ್ದರು. ಬುಧವಾರ ಮಾಧ್ಯಮಗಳೊಂದಿಗೆ ಮಾನಾಡಿದ ಅವರು, ಬೆಂಗಳೂರಿನಲ್ಲಿ ತಮ್ಮ ಮನೆಯ ಮುಂದೆಯೇ ಇರುವ ಐವರು ದುಷ್ಕರ್ಮಿಗಳು ತಮ್ಮನ್ನು ಅಪಹರಿಸಿದ್ದು, ತಮಗೆ ಕೊಲ್ಲುವ ಬೆದರಿಕೆ ಒಡ್ಡಿದ್ದರು ಎಂದು ಆರೋಪಿಸಿದರು. [ಪ್ರಸನ್ನ ಕುಮಾರ್ ದೆಹಲಿಯಲ್ಲಿ ಪತ್ತೆ]
ಬೆಂಗಳೂರಿನಿಂದ ನನ್ನನ್ನು ಅಪಹರಣ ಮಾಡಿದ ಬಳಿಕ, ದುಷ್ಕರ್ಮಿಗಳು ಕಾರುಗಳನ್ನು ಬದಲಾಯಿಸುತ್ತ ನನ್ನನ್ನು ದೆಹಲಿಗೆ ತಂದು ಬಿಟ್ಟರು. ಅವರು ಅನೇಕ ಬಾರಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಮತ್ತು ಗುಂಡು ಹಾರಿಸಿ ಕೊಲ್ಲುವ ಬೆದರಿಕೆ ಒಡ್ಡಿದ್ದಾರೆ ಈ ಬಗ್ಗೆ ನಾನು ದೆಹಲಿ-ಹರ್ಯಾಣ ಗಡಿಯಲ್ಲಿರುವ ಬದರ್ ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ ಎಂದು ಹೇಳಿದರು.
ಕೆಜೆಪಿ ಅಧ್ಯಕ್ಷರಾಗಿರುವ ಬಿ.ಎಸ್.ಯಡಿಯೂರಪ್ಪ ಕೆಜೆಪಿ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಲು ಹೊರಟಿದ್ದಾರೆ. ಇದನ್ನು ನಾನು ವಿರೋಧಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದೇನೆ. ಆದ್ದರಿಂದ ನನ್ನನ್ನು ಅಪಹರಣ ಮಾಡಿಸಲಾಗಿತ್ತು. ಇದರ ಹಿಂದೆ ಕರ್ನಾಟಕದ ಪ್ರಭಾವಿ ರಾಜಕೀಯ ವ್ಯಕ್ತಿಗಳ ಕೈವಾಡವಿದೆ ಎಂದು ಪ್ರಸನ್ನ ಕುಮಾರ್ ದೂರಿದರು. [ಕೆಜೆಪಿ ಸಂಸ್ಥಾಪಕ ಪ್ರಸನ್ನ ಕುಮಾರ್ ನಾಪತ್ತೆ]
ಸದ್ಯ ನನ್ನ ಅಪಹರಣ ಪ್ರಕರಣ ಕುರಿತು ದೆಹಲಿ-ಹರ್ಯಾಣ ಗಡಿಯ ಬದರ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಈ ಬಗ್ಗೆ ಅವರು ತನಿಖೆ ನಡೆಸುತ್ತಿದ್ದಾರೆ. ಬದರ್ ಪುರ ಪೊಲೀಸರ ಜೊತೆ ಕರ್ನಾಟಕಕ್ಕೆ ಗುರುವಾರ ಹಿಂತಿರುಗುತ್ತಿದ್ದೇನೆ ಎಂದು ಪ್ರಸನ್ನ ಕುಮಾರ್ ಮಾಹಿತಿ ನೀಡಿದರು.
ವಿಲೀನಕ್ಕೆ ಒಪ್ಪಿಗೆ ಇಲ್ಲ : ಕರ್ನಾಟಕದ ಜನತಾ ಪಕ್ಷ (ಕೆಜೆಪಿ) ಮತ್ತು ಬಿಜೆಪಿ ವಿಲೀನ ಸಾಧ್ಯವಿಲ್ಲ, ಈ ಎರಡೂ ಪಕ್ಷಗಳು ವಿಲೀನಗೊಳ್ಳಲು ಕೆಜೆಪಿ ಸಂಸ್ಥಾಪಕ ಅಧ್ಯಕ್ಷನಾಗಿರುವ ನಾನು ಅವಕಾಶ ನೀಡುವುದಿಲ್ಲ ಎಂದು ಪ್ರಸನ್ನ ಕುಮಾರ್ ಹೇಳಿದರು. ಇದನ್ನು ಪ್ರಶ್ನಿಸಿ ಈಗಾಗಲೇ ನಾನು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದೇನೆ ಎಂದು ತಿಳಿಸಿದರು.