ಅತ್ಯಾಚಾರಿಗಳನ್ನು ನಾನು ಗಲ್ಲಿಗೇರಿಸುತ್ತೇನೆ ಎಂದು ರಕ್ತದಲ್ಲಿ ಪತ್ರ ಬರೆದ ಶೂಟರ್!
ನವದೆಹಲಿ, ಡಿಸೆಂಬರ್ 16: ದೆಹಲಿ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೆ ಹಾಕುವುದು ಯಾವಾಗ ಎಂದು ಇಡೀ ದೇಶ ಕೇಳುತ್ತಿದ್ದರೇ, ಅತ್ತ ತಿಹಾರ ಜೈಲು ಅಧಿಕಾರಿಗಳು ಗಲ್ಲಿಗೆ ಹಾಕುವವರು ಸದ್ಯ ನಮ್ಮ ಬಳಿ ಯಾರೂ ಇಲ್ಲ ಎಂದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಒಂದು ಕಡೆ ಗಲ್ಲಿಗೆ ಹಾಕುವವರು ಯಾರು ಇಲ್ಲ ಎಂಬ ಕೂಗು ಜೈಲಾಧಿಕಾರಿಗಳದ್ದಾದರೆ, ಪರಮ ಪಾಪಿಗಳನ್ನು ಗಲ್ಲಿಗೆ ಹಾಕಲು ನಾನು ಸಿದ್ದ ಎಂದು ದೇಶಾದ್ಯಂತ ಹಲವರು ಮುಂದೆ ಬರುತ್ತಿದ್ದಾರೆ. ಈಗ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟು ಶೂಟರ್ ವರ್ತಿಕಾ ಸಿಂಗ್ ಅವರ ಸರದಿ. ವರ್ತಿಕಾ ಸಿಂಗ್ 'ನಿರ್ಭಯಾ ಅತ್ಯಾಚಾರಿಗಳಿಗೆ ನಾನೇ ಗಲ್ಲು ಹಾಕುತ್ತೇನೆ' ಎಂದು ಮುಂದೆ ಬಂದಿದ್ದಾರೆ.
ರಕ್ತದಲ್ಲಿ ಪತ್ರ ಬರೆದು ಮನವಿ!
ಶೂಟರ್ ವರ್ತಿಕಾ ಸಿಂಗ್ ಅವರು 'ದೆಹಲಿ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲು ಹಾಕುತ್ತೇನೆ, ನನಗೆ ಅವಕಾಶ ಕೊಡಿ' ಎಂದು ಕೇಂದ್ರ ಗೃಹ ಸಚಿವ ಅಮಿತ ಷಾ ಅವರಿಗೆ ರಕ್ತದಲ್ಲಿ ಪತ್ರ ಬರೆದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಭಾನುವಾರ ಈ ಪತ್ರ ಬರೆದು ಸುದ್ದಿಮಾಧ್ಯಮಗಳಿಗೆ ಅದರ ಪ್ರತಿಯನ್ನು ಬಿಡುಗಡೆ ಮಾಡಿದ್ದಾರೆ. 'ಮಹಿಳೆಯರ ಮೇಲೆ ದೌರ್ಜನ್ಯ ಎಸುಗವವರಿಗೆ, ಅತ್ಯಾಚಾರ ಮಾಡುವವರಿಗೆ ತಕ್ಕ ಶಾಸ್ತಿ ಮಾಡಲು ಮಹಿಳೆ ಸಮರ್ಥಳಿದ್ದಾಳೆ ಎಂಬುದನ್ನು ತೋರಿಸಲು ನನಗೆ ಗಲ್ಲು ಹಾಕಲು ಅನುಮತಿ ಕೊಡಿ' ಎಂದು ಮನವಿ ಮಾಡಿಕೊಂಡಿದ್ದಾರೆ. ವರ್ತಿಕಾ ಇದಕ್ಕಾಗಿ ತಮ್ಮ ಹೆಬ್ಬೆರಳನ್ನು ಕೊಯ್ದುಕೊಂಡಿದ್ದಾರೆ. ಈಗ ವರ್ತಿಕಾ ಪತ್ರ ಗೃಹ ಸಚಿವರ ಕಚೇರಿ ತಲುಪಿದೆ.
ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧರಿರುವ ಪೊಲೀಸ್ ಇವರೇ!
ಬೆಂಬಲ ಯಾಚನೆ
ಶೂಟರ್ ವರ್ತಿಕಾ ಸಿಂಗ್ ಅವರು ದೆಹಲಿ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲು ಹಾಕುತ್ತೇನೆ ಎಂದಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ಸಾಕಷ್ಟು ಬೆಂಬಲ ಸೂಚಿಸಿದ್ದಾರೆ. ಆದರೆ, ವರ್ತಿಕಾ, 'ನಾನು ಈ ಕೆಲಸವನ್ನು ಪ್ರಚಾರಕ್ಕಾಗಿ ಮಾಡಿಲ್ಲ. ನನಗೆ ನಟಿಯರು, ಶಾಸಕಿಯರು ಹಾಗೂ ಸಂಸದೆಯರು ಬೆಂಬಲ ನೀಡಬೇಕು. ಇದು ಅತ್ಯಾಚಾರಿಗಳಿಗೆ ತಕ್ಕ ಪಾಠವಾಗಬೇಕು. ಮಹಿಳೆ ಅಬಲೆಯಲ್ಲ, ಸಬಲೆ ಎಂಬುದನ್ನು ಸಾಬೀತುಪಡಿಸಬೇಕು' ಎಂದು ಹೇಳಿದ್ದಾರೆ.
ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ
ಸದ್ಯದಲ್ಲೇ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೆ ಹಾಕಲಾಗುತ್ತೆ ಎಂಬ ಹಿನ್ನೆಲೆಯಲ್ಲಿ ತಿಹಾರ ಜೈಲು ಅಧಿಕಾರಿಗಳು ನಿರ್ಭಯಾ ಅತ್ಯಾರಿಗಳಿಗೆ ಗಲ್ಲು ಹಾಕಲು ಸರ್ವ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಸದ್ಯ ಆ ಜೈಲಿನಲ್ಲಿ ಗಲ್ಲು ಹಾಕುವ ಇಲ್ಲದಿರುವುದು ಅವರಿಗೆ ಅಡಚಣೆ ಆಗಿದೆ. ಗಲ್ಲು ಹಾಕಲು ಯಾವುದೇ ಕ್ಷಣದಲ್ಲಿ ಆದರೂ ಅಂತಿಮ ಆದೇಶ ಬರುವ ಸಾಧ್ಯತೆ ಇರುವುದರಿಂದ ತಿಹಾರ ಜೈಲು ಅಧಿಕಾರಿಗಳು ಹ್ಯಾಂಗ್ ಮೆನ್ ಗೆ ಹುಡುಕಾಡುವಂತಾಗಿದೆ. ಅಲ್ಲದೇ ಕಳೆದ ಡಿ.೬ ರಂದು ತಮಿಳುನಾಡು ಪೊಲೀಸ್ ಪೇದೆ ಶ್ರೀನಿವಾಸನ್ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೆ ಹಾಕುವುದಾಗಿ ಮುಂದೆ ಬಂದಿದ್ದರು. ಯಾರು ಬೇಕಾದರೂ ಗಲ್ಲು ಹಾಕುವಂತಿಲ್ಲ. ಇದಕ್ಕೆ ತನ್ನದೇಯಾದ ನಿಯಮಾವಳಿಗಳು ಇರುವುದರಿಂದ ಗೃಹ ಸಚಿವರು ಅಂತಿಮ ನಿರ್ಧಾರ ಕೈಗೊಳ್ಳಬಹುದಾಗಿದೆ.
ಕಟುಕರನ್ನು ಗಲ್ಲಿಗೇರಿಸುವ ಹ್ಯಾಂಗ್ಮ್ಯಾನ್ಗಳ ಸಂಬಳ ಎಷ್ಟಿರುತ್ತೆ ಗೊತ್ತೆ?
ಏನಿದು ಪ್ರಕರಣ
ಡಿಸೆಂಬರ್ 16, 2012 ರಂದು ನಡುರಾತ್ರಿಯಲ್ಲಿ ದೆಹಲಿಯಲ್ಲಿ ಮುಖೇಶ್ ಸಿಂಗ್, ವಿನಯ ಶರ್ಮಾ, ಮಹಮ್ಮದ್ ಅಪ್ರೋಜ್, ಪವನ್ ಗುಪ್ತಾ ಹಾಗೂ ಅಕ್ಷಯ್ ಠಾಕೂರ್ ಎನ್ನುವರು ನಿರ್ಭಯಾಳನ್ನು ಅಪಹರಿಸಿ ಬಸ್ ನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ್ದರು. ನಿರ್ಭಯಾ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಳು. ಇದರ ವಿರುದ್ಧ ದೇಶದ್ಯಾಂತ ಭಾರೀ ಪ್ರತಿಭಟನೆಗಳು ಜರುಗಿ, ನಾಲ್ವರಿಗೆ ಗಲ್ಲು ಶಿಕ್ಷೆಯಾಗಿತ್ತು. ಒಬ್ಬ ಬಾಲಾಪರಾಧಿ ಬಿಡುಗಡೆಯಾಗಿದ್ದ. ಮುಕೇಶ್ ಸಿಂಗ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೂ ಮೂವರು ಸದ್ಯ ತಿಹಾರ್ ಜೈಲಿನಲ್ಲಿದ್ದಾರೆ.