ಐಕ್ಯ ವಿಪಕ್ಷದ ನಾಯಕರು ಯಾರು?: 'ನಾನು ಜ್ಯೋತಿಷಿಯಲ್ಲ' ಎಂದ ಮಮತಾ
ನವದೆಹಲಿ, ಜು.28: ಪೆಗಾಸಸ್ ಹಗರಣದ ಬಗ್ಗೆ ಪ್ರತಿಪಕ್ಷಗಳ ಮೆಗಾ ಸಭೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೈರು ಹಾಜರಾಗಿದ್ದಾರೆ. ಆದರೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ, ಮುಂದೆ ನಡೆಯುವ ಯುದ್ಧದಲ್ಲಿ ತಾನು ಮುಂಚೂಣಿಯಲ್ಲಿದ್ದೇನೆ, ಇದಕ್ಕಾಗಿ ಪಕ್ಷಗಳು ಒಂದಾಗಬೇಕು ಎಂದು ಸ್ಪಷ್ಟಪಡಿಸಿದರು. ಆದರೆ ಐಕ್ಯ ವಿರೋಧ ಪಕ್ಷದ ನಾಯಕರು ಯಾರು ಎಂದು ಮಾಧ್ಯಮಗಳು ಪ್ರಶ್ನಿಸಿದಾಗ, "ನಾನು ರಾಜಕೀಯ ಜ್ಯೋತಿಷಿ ಅಲ್ಲ," ಎಂದು ಹೇಳಿದ್ದಾರೆ.
"ವಿಪಕ್ಷಗಳ ಒಕ್ಕೂಟದ ನಾಯಕರು ಯಾರು ಎಂಬುವುದು ಇದು ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಬೇರೊಬ್ಬರು ಮುನ್ನಡೆಸಿದರೆ ನನಗೆ ಯಾವುದೇ ತೊಂದರೆ ಇಲ್ಲ," ಎಂದು ಹೇಳಿದರು. ಹಾಗೆಯೇ ಯುನೈಟೆಡ್ ವಿಪಕ್ಷಗಳಲ್ಲಿ ಮಮತಾ ಬ್ಯಾನರ್ಜಿ ಕೂಡಾ ಜೊತೆ ಸೇರಬಹುದೇ ಎಂದು ಮಾಧ್ಯಮ ಪ್ರಶ್ನಿಸಿದಾಗ, "ನಾನು ಸರಳ ಕಾರ್ಯಕರ್ತೆ, ನಾನು ಕಾರ್ಯಕರ್ತೆಯಾಗಿಯೇ ಮುಂದುವರಿಯಲು ಬಯಸುತ್ತೇನೆ," ಎಂದು ಹೇಳಿದರು.
'ಪೆಗಾಸಸ್ ಬಗ್ಗೆ ನ್ಯಾಯಾಂಗ ತನಿಖೆ ಅಗತ್ಯ': ಪ್ರಧಾನಿಯನ್ನು ಭೇಟಿಯಾದ ಮಮತಾ
ದೀರ್ಘಾವಧಿಯ ಯೋಜನೆಗಳ ಅಗತ್ಯವನ್ನು ಸೂಚಿಸಿದ ಮಮತಾ, "ಸಂಸತ್ತಿನ ಅಧಿವೇಶನದ ನಂತರ" ಮಾತುಕತೆ ಸರಿಯಾಗಿ ಪ್ರಾರಂಭವಾಗಲಿದೆ ಎಂದರು. "ನಾನು ನಿನ್ನೆ ಲಾಲು ಪ್ರಸಾದ್ ಯಾದವ್ ಜೊತೆಗೆ ಮಾತನಾಡಿದ್ದೇನೆ, ನಾವು ಎಲ್ಲಾ ಪಕ್ಷಗಳೊಂದಿಗೆ ಮಾತನಾಡುತ್ತೇವೆ," ಎಂದು ಮುಖ್ಯಮಂತ್ರಿ ಬ್ಯಾನರ್ಜಿ ತಿಳಿಸಿದ್ದಾರೆ.
ಪ್ರಸ್ತುತ ತನ್ನ ಐದು ದಿನಗಳ ದೆಹಲಿ ಭೇಟಿಯಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭೇಟಿ ಮಾಡಲಿದ್ದಾರೆ ಎಂದು ಈ ಸಂದರ್ಭದಲ್ಲೇ ಹೇಳಿದ್ದಾರೆ.
"ಒಟ್ಟಾಗಿ ಕೆಲಸ ಮಾಡಲು ಒಂದು ಸಾಮಾನ್ಯ ವೇದಿಕೆ ಇರಬೇಕು. ಪ್ರತಿಪಕ್ಷದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು. ನಾವೆಲ್ಲರೂ ಒಟ್ಟಾಗಿ ಕುಳಿತು ಏನಾದರೂ ಕೆಲಸ ಮಾಡುತ್ತೇವೆ," ಎಂದು ಇತ್ತೀಚಿನ ರಾಜ್ಯ ಚುನಾವಣೆಯಲ್ಲಿ ಬಿಜೆಪಿಯ ಅಸಾಧಾರಣ ಚುನಾವಣಾ ತಂತ್ರದ ಎದುರು ಭರ್ಜರಿ ಗೆಲುವು ಸಾಧಿಸಿರುವ ಬಂಗಾಳ ಮುಖ್ಯಮಂತ್ರಿ ಹೇಳಿದರು.
ಪೆಗಾಸಸ್ ಬಳಸಿ ಪ್ರಶಾಂತ್ ಕಿಶೋರ್ ಮೇಲೆ ಕಣ್ಗಾವಲು: ಮಮತಾ
ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಪಕ್ಷವು ಪೆಗಾಸಸ್ ವಿಷಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿರುವ ಸುದ್ದಿ ಸಂಸ್ಥೆಗಳ ಒಕ್ಕೂಟವು ಮಮತಾ ಬ್ಯಾನರ್ಜಿ ಸೋದರಳಿಯ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿಯ ದೂರವಾಣಿ ಸಂಖ್ಯೆ ಸಂಭಾವ್ಯ ಕಣ್ಗಾವಲು ಗುರಿಗಳ ಪಟ್ಟಿಯ ಭಾಗವಾಗಿದೆ ಎಂದು ಹೇಳಿದೆ.
ಇನ್ನು ಮಮತಾ ಬ್ಯಾನರ್ಜಿ ಇಂದು "ತನ್ನ ಫೋನ್ ಅನ್ನು ಈಗಾಗಲೇ ಟ್ಯಾಪ್ ಮಾಡಲಾಗಿದೆ. ಆದ್ದರಿಂದ ನಾನು ಯಾರೊಂದಿಗೂ ಮಾತನಾಡಲು ಸಾಧ್ಯವಾಗುತ್ತಿಲ್ಲ," ಎಂದು ಹೇಳಿದ್ದಾರೆ. "ಅಭಿಷೇಕ್ (ಮುಖರ್ಜಿ) ಫೋನ್ ಟ್ಯಾಪ್ ಮಾಡಿದ್ದರೆ, ನಾನು ಅವರೊಂದಿಗೆ ಮಾತನಾಡುತ್ತಿದ್ದರೆ, ಸ್ವಯಂಚಾಲಿತವಾಗಿ ನನ್ನ ಫೋನ್ ಕೂಡ ಟ್ಯಾಪ್ ಆಗುತ್ತದೆ. ಪೆಗಾಸಸ್ ಎಲ್ಲರ ಜೀವವನ್ನು ಅಪಾಯಕ್ಕೆ ಸಿಲುಕಿಸಿದೆ," ಎಂದರು.
ಪೆಗಾಸಸ್ ಮಾರಾಟಗಾರ ಸಂಸ್ಥೆ ಎನ್ಎಸ್ಒ ತನ್ನ ಗ್ರಾಹಕರು ಕೇವಲ "ಪರಿಶೀಲನೆ" ಹೊಂದಿರುವ ಸರ್ಕಾರಗಳು ಎಂಬ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡಿದೆ. ಈ ಹಿನ್ನೆಲೆ ಪೆಗಾಸಸ್ ವಿಷಯದ ಬಗ್ಗೆ ಪ್ರತಿಪಕ್ಷಗಳು ಸರ್ಕಾರದಿಂದ ವಿವರಣೆಯನ್ನು ಕೋರಿವೆ. ಸರ್ಕಾರ ಮಾತ್ರ ಯಾವುದೇ ಅಕ್ರಮ ಕಣ್ಗಾವಲು ನಡೆಸಿಲ್ಲ ಎಂದು ಹೇಳಿಕೊಂಡಿದೆ. ಪ್ರತಿಪಕ್ಷಗಳ ಆರೋಪ ಸುಳ್ಳು, ಆಧಾರ ರಹಿತ ಎಂದಿದೆ.
ಇಂದಿನ ವಿರೋಧ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ನ ರಾಹುಲ್ ಗಾಂಧಿ, "ಇಡೀ ಪ್ರತಿಪಕ್ಷ ಇಲ್ಲಿದೆ. ನಮ್ಮ ಧ್ವನಿಯನ್ನು ಸಂಸತ್ತಿನಲ್ಲಿ ಮೊಟಕುಗೊಳಿಸಲಾಗುತ್ತಿದೆ. ಭಾರತದಲ್ಲಿ ಕೆಲವು ವ್ಯಕ್ತಿಗಳ ವಿರುದ್ಧ ಬಳಸಲಾಗುತ್ತಿದೆ ಎನ್ನಲಾದ ಪೆಗಾಸಸ್ ಸಾಫ್ಟ್ವೇರ್ ಖರೀದಿಸಲಾಗಿದೆಯೇ ಮತ್ತು ಅದು ಇದೆಯೇ ಎಂದು ಮಾತ್ರ ನಾವು ಕೇಳುತ್ತಿದ್ದೇವೆ ಎಂದು ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)