ಹಿಂದೂಸ್ತಾನಿ ಮುಸ್ಲಿಂ ಆಗಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ; ಗುಲಾಂ ನಬಿ ಆಜಾದ್
ನವದೆಹಲಿ, ಫೆಬ್ರುವರಿ 09: "ನಾನು ಪಾಕಿಸ್ತಾನಕ್ಕೆ ಎಂದೂ ಹೋಗಿಲ್ಲ, ಹೀಗಾಗಿ ನಾನು ಅದೃಷ್ಟಶಾಲಿ ಎನಿಸುತ್ತಿದೆ. ಪಾಕಿಸ್ತಾನಕ್ಕೆ ಹೋಗದ ಅದೃಷ್ಟವಂತರಲ್ಲಿ ನಾನೂ ಒಬ್ಬ. ಪಾಕಿಸ್ತಾನದಲ್ಲಿನ ಸನ್ನಿವೇಶಗಳ ಬಗ್ಗೆ ಓದುತ್ತಿದ್ದಾಗ, ನಾನು ಹಿಂದೂಸ್ತಾನಿ ಮುಸ್ಲಿಂ ಆಗಿರುವುದಕ್ಕೆ ಹೆಮ್ಮೆ ಎನಿಸುತ್ತದೆ" ಎಂದು ರಾಜ್ಯಸಭೆಯಲ್ಲಿ ತಮ್ಮ ವಿದಾಯ ಭಾಷಣದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಮಂಗಳವಾರ ನಾಲ್ಕು ಮಂದಿ ನಿವೃತ್ತಿಯಾಗುತ್ತಿದ್ದು, ರಾಜ್ಯ ಸಭೆಯಲ್ಲಿ ವಿದಾಯ ಭಾಷಣವನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯಸಭೆಯಲ್ಲಿ ತಮ್ಮ ಕೊನೆಯ ದಿನದ ಭಾಷಣ ಆರಂಭಿಸಿದ ಗುಲಾಂ ನಬಿ ಆಜಾದ್, ಜಮ್ಮು ಹಾಗೂ ಕಾಶ್ಮೀರದಿಂದ ದೆಹಲಿವರೆಗಿನ ತಮ್ಮ ರಾಜಕೀಯ ಪಯಣದ ಬಗ್ಗೆ ಮಾತನಾಡಿದರು.
ಗುಲಾಂ ನಬಿ ನನ್ನ ನಿಜಸ್ನೇಹಿತ; ರಾಜ್ಯ ಸಭೆಯಲ್ಲಿ ಕಣ್ಣೀರು ಹಾಕಿದ ಮೋದಿ
ತಾವು ಹಿಂದೂಸ್ತಾನಿ ಮುಸ್ಲಿಂ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತದೆ ಎಂದು ಭಾವುಕರಾದರು. ವಿದಾಯ ಭಾಷಣದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಗೌರವ ಸಮರ್ಪಿಸಿ, "ಅವರಿಂದ ನಾನು ಹಲವು ವಿಷಯಗಳನ್ನು ಕಲಿತಿದ್ದೇನೆ. ಯಾವುದೇ ಬಿಕ್ಕಟ್ಟನ್ನು ಸುಲಭವಾಗಿ ಪರಿಹರಿಸುವುದು ಹೇಗೆ ಎಂಬುದನ್ನು ಅವರಿಂದ ಕಲಿತಿದ್ದೇನೆ" ಎಂದು ಸ್ಮರಿಸಿಕೊಂಡರು.
ನರೇಂದ್ರ ಮೋದಿಗೆ ಧನ್ಯವಾದ ಹೇಳಿದ ಆಜಾದ್: ನರೇಂದ್ರ ಮೋದಿಯವರು ಗುಲಾಂ ನಬಿ ಅವರನ್ನು ನಿಜಸ್ನೇಹಿತ ಎಂದು ಹೇಳಿ ರಾಜ್ಯ ಸಭೆಯಲ್ಲಿ ಕಣ್ಣೀರು ಹಾಕಿದ ಪ್ರಸಂಗ ನಡೆದಿದ್ದು, ಗುಲಾಂ ನಬಿ ಆಜಾದ್ ಪ್ರಧಾನಿಗೆ ಧನ್ಯವಾದ ಸಲ್ಲಿಸಿದ್ದಾರೆ. "ಮೋದಿಯವರು ತಮ್ಮ ವಿರುದ್ಧದ ಮಾತುಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಲಿಲ್ಲ. ವೈಯಕ್ತಿಕ ಹಾಗೂ ರಾಜಕೀಯವನ್ನು ಅವರು ಬೇರೆ ಬೇರೆಯಾಗಿ ನೋಡುತ್ತಿದ್ದರು. ಎಷ್ಟೋ ಬಾರಿ ನಾವು ವಾಗ್ಯುದ್ಧ ನಡೆಸಿದ್ದೇವೆ. ಆದರೆ ಮೋದಿ ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಲಿಲ್ಲ" ಎಂದು ಧನ್ಯವಾದ ಸಲ್ಲಿಸಿದರು.
ಸಹಕಾರದಿಂದ ದೇಶ ನಡೆಯಬೇಕೇ ವಿನಃ ಜಗಳದಿಂದಲ್ಲ ಎಂದು ಎಲ್ಲರಿಗೂ ಸಲಹೆ ನೀಡಿದರು.