ಈರುಳ್ಳಿ ಸೇವನೆ ಆರೋಗ್ಯಕ್ಕೆ ಹಾನಿಕರ: ನಾನಂತೂ ಈರುಳ್ಳಿ ತಿನ್ನಲ್ಲ!
ದೆಹಲಿ, ಡಿಸೆಂಬರ್.05: ಭಾರತದ ಪ್ರತಿಯೊಬ್ಬರ ಬಾಯಲ್ಲೂ ಈರುಳ್ಳಿಯದ್ದೇ ಮಾತು. ಈರುಳ್ಳಿ, ಈರುಳ್ಳಿ, ಈರುಳ್ಳಿ ಸಾಮಾನ್ಯ ಜನರಷ್ಟೇ ಅಲ್ಲ, ಎಲ್ಲರದ್ದೂ ಈಗ ಒಂದೇ ಜಪ. ಈರುಳ್ಳಿ ಬೆಲೆ ಕೇಳಿದರೆ ತಲೆ ದಿಮ್ ಎನ್ನುತ್ತದೆ. ಏಕೆಂದರೆ, ಈಗಾಗಲೇ ಈರುಳ್ಳಿ ಬೆಲೆ 100 ರೂಪಾಯಿ ಅಲ್ಲ, 150 ರೂಪಾಯಿಯ ಗಡಿ ದಾಟಿ ಹೋಗಿದೆ.
ದೇಶದ ಮಾರುಕಟ್ಟೆಗಳಲ್ಲಿ ಅಷ್ಟೇ ಅಲ್ಲ. ರಾಜ್ಯಸಭೆ, ಲೋಕಸಭೆಯಲ್ಲೂ ಈರುಳ್ಳಿ ಬೆಲೆ ಬಗ್ಗೆ ತೀವ್ರ ಚರ್ಚೆ ಆಗುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಹರಿ ಹಾಯುತ್ತಿವೆ. ಬೆಲೆ ಏರಿಕೆಗೆ ಕಡಿವಾಣ ಹಾಕುವಂತೆ ಆಗ್ರಹಿಸುತ್ತಿವೆ. ಈ ನಡುವೆ ಕೇಂದ್ರ ಸಚಿವರು ನೀಡಿರುವ ಉತ್ತರ ದೇಶಾದ್ಯಂತ ಸದ್ದು ಮಾಡುತ್ತಿದೆ.
ದಾಖಲೆ ಬರೆದ ಈರುಳ್ಳಿ ದರ; ಕೆ. ಜಿ. ಗೆ 180 ರೂ.!
ಅತಿಯಾದ ಈರುಳ್ಳಿ ಸೇವನೆಯಿಂದ ಆದಷ್ಟು ಬೇಗ ಕೋಪ ಬರುತ್ತದೆ. ನಾನಂತೂ ಹೆಚ್ಚಾಗಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಸೇವಿಸುವುದಿಲ್ಲ. ಹೀಗೆಂದು ಸ್ವತಃ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ದೇಶಾದ್ಯಂತ ಸಚಿವರು ನೀಡಿರು ಹೇಳಿಕೆ ಬಗ್ಗೆಯೇ ಚರ್ಚೆ ಆಗುತ್ತಿದೆ.
ಕೋಪ ನಿಯಂತ್ರಿಸಲು ಈರುಳ್ಳಿ ಸೇವನೆ ಬಿಡಬೇಕಾ?
ಹೌದು, ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅತಿಯಾದ ಈರುಳ್ಳಿ ಸೇವನೆಯಿಂದ ಜನರಿಗೆ ಆದಷ್ಟು ಬೇಗನೇ ಕೋಪ ಬರುತ್ತದೆ. ನಾನಂತೂ ಹೆಚ್ಚಾಗಿ ಈರುಳ್ಳಿಯನ್ನು ಸೇವನೆ ಮಾಡುವುದಿಲ್ಲ. ನಮ್ಮ ಮನೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹೆಚ್ಚಾಗಿ ಬಳಕೆ ಮಾಡುವುದಿಲ್ಲ ಎಂದು ಸಚಿವರು ಹೇಳುತ್ತಿದ್ದಂತೆ ಇಡೀ ಕಲಾಪವೇ ನಗೆಗಡಲಿನಲ್ಲಿ ತೇಲಿತು.
ಕೇಂದ್ರದಿಂದ ಈರುಳ್ಳಿ ಬೆಲೆ ನಿಯಂತ್ರಣ
ಲೋಕಸಭೆಯಲ್ಲಿ ಈರುಳ್ಳಿ ಬೆಲೆ ಏರಿಕೆ ಬಗ್ಗೆ ವಿರೋಧ ಪಕ್ಷಗಳು ಪ್ರಸ್ತಾಪಿಸಿದವು. ಈ ಬಗ್ಗೆ ಉತ್ತರ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸರ್ಕಾರ ಈಗಾಗಲೇ ಬೆಲೆ ಏರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ತಗೆದುಕೊಂಡಿದೆ ಎಂದರು. ವಿದೇಶಗಳಿಗೆ ಈರುಳ್ಳಿ ರಫ್ತು ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಕೇಂದ್ರ ಗ್ರಾಹಕ ಸಚಿವಾಲಯದಿಂದಲೇ ಈರುಳ್ಳಿ ಸಂಗ್ರಹಿಸಿಡಲು ಮಿತಿ ನಿಗದಿಗೊಳಿಸಲಾಗಿದೆ. ಸಗಟು ವ್ಯಾಪಾರಿಗಳಿಗೆ 25 ಟನ್ ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ 5 ಟನ್ ಗಳ ಮಿತಿ ನಿಗದಿಗೊಳಿಸಲಾಗಿದೆ. ವಿದೇಶಗಳಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ರಾಷ್ಟ್ರದೊಳಗೆ ಈರುಳ್ಳಿ ಸಾಗಾಟಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಚಿನ್ನ, ಬೆಳ್ಳಿಯಲ್ಲ, ಈರುಳ್ಳಿ ಕಳುವಾಗಿದ್ದಕ್ಕೆ ಪೊಲೀಸ್ ಠಾಣೆಯಲ್ಲಿ ಕೇಸ್!
ನೇರ ಸಂಪರ್ಕ ವ್ಯವಸ್ಥೆ ಜಾರಿ ಕುರಿತು ಪ್ರಸ್ತಾಪ
ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆಗೆ ಮಧ್ಯವರ್ತಿಗಳ ಹಾವಳಿಯೇ ಮುಖ್ಯ ಕಾರಣ ಎಂದು ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ. ಸರ್ಕಾರದಲ್ಲೇ ಇರುವ ಲೋಪದೋಷಗಳು ಮಧ್ಯವರ್ತಿಗಳ ಪಾಲಿಗೆ ವರದಾನ ಆಗುತ್ತಿವೆ. ಇದರಿಂದಾಗಿಯೇ ಈರುಳ್ಳಿ ಬೆಲೆ ಗಗನಮುಖಿಯಾಗಿ ಏರಿಕೆ ಆಗುತ್ತಿದೆ. ರೈತರಿಗೆ ಮಾರುಕಟ್ಟೆಯ ನೇರ ಸಂಪರ್ಕ ವ್ಯವಸ್ಥೆ ಜಾರಿಗೊಳಿಸಿದರೆ, ಇದಕ್ಕೆಲ್ಲ ಕಡಿವಾಣ ಹಾಕಲು ಕೊಂಚ ಮಟ್ಟಿಗೆ ಸಹಾಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಚಿನ್ನ, ಬೆಳ್ಳಿಯಲ್ಲ, ಈರುಳ್ಳಿ ಕಳ್ಳತನ!
ಇನ್ನು, ಲೋಕಸಭೆಯಲ್ಲಿ ಮಾತನಾಡುತ್ತಾ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿಚಿತ್ರ ಘಟನೆಯೊಂದರ ಬಗ್ಗೆ ಉಲ್ಲೇಖಿಸಿದರು. ದೇಶದಲ್ಲಿ ಈರುಳ್ಳಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗುತ್ತಿದೆ. ಇದರಿಂದ ಕಳ್ಳರ ಕಣ್ಣು ಕೂಡಾ ಈರುಳ್ಳಿ ಮೇಲೆ ಬಿದ್ದಿದೆ. ಇಷ್ಟುದಿನ ಚಿನ್ನ, ಬೆಳ್ಳಿ, ಹಣ ಕದಿಯುತ್ತಿದ್ದ ಕಳ್ಳರು ಈಗ ಈರುಳ್ಳಿ ಕಳ್ಳತನ ಮಾಡುತ್ತಿದ್ದಾರೆ. ಮಧ್ಯಪ್ರದೇಶದ ಮಾಲ್ವಾ ಜಿಲ್ಲೆ ಮಂಡಸೂರು ಪ್ರದೇಶದ ರಿಚ್ಚಾ ಗ್ರಾಮದಲ್ಲಿ ಜೀತೇಂದ್ರ ಕುಮಾರ್ ಬೆಳೆದಿದ್ದ ಈರುಳ್ಳಿಯನ್ನೇ ಕದ್ದಿರುವ ಘಟನೆ ನಡೆದಿದೆ. ಸುಮಾರು 30 ಸಾವಿರ ರೂಪಾಯಿ ಮೌಲ್ಯದ ಈರುಳ್ಳಿ ಕಳ್ಳತನವಾಗಿದ್ದು, ಇದರಿಂದ ನೊಂದ ರೈತ ಜೀತೇಂದ್ರ ಕುಮಾರ್, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಸಚಿವರು ತಿಳಿಸಿದರು.