ಪರಮವೀರ ಚಕ್ರ ಪ್ರಶಸ್ತಿ ನೀಡಿದರೆ ಸಾಕೇ: ಕರ್ನಲ್ ಸಂತೋಷ್ ತಂದೆ
ನವದೆಹಲಿ, ಜನವರಿ.25: ಭಾರತ ಚೀನಾದ ಲಡಾಖ್ ಪೂರ್ವ ಗಡಿ ಪ್ರದೇಶ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ವೀರಯೋಧನ ಕರ್ನಲ್ ಸಂತೋಷ್ ಬಾಬು ಅವರಿಗೆ ಪರಮವೀರ ಚಕ್ರ ಪ್ರಶಸ್ತಿ ನೀಡುವುದರಿಂದ ಶೇ.100ರಷ್ಟು ತೃಪ್ತಿ ಆಗುವುದಿಲ್ಲ ಎಂದು ಹುತಾತ್ಮ ಯೋಧರ ತಂದೆ ಬಿ. ಉಪೇಂದ್ರ ಹೇಳಿದ್ದಾರೆ.
"ಕೇಂದ್ರ ಸರ್ಕಾರವು ತಮ್ಮ ಮಗನಿಗೆ ಘೋಷಿಸಿರುವ ಪರಮವೀರ ಚಕ್ರ ಪ್ರಶಸ್ತಿ ಬಗ್ಗೆ ನಾನು ಅತೃಪ್ತಿ ಹೊಂದಿದ್ದೇನೆ ಎಂದು ಅರ್ಥವಲ್ಲ. ಆದರೆ ಒಂದು ಪ್ರಶಸ್ತಿಯಿಂದ ಶೇ.100ರಷ್ಟು ತೃಪ್ತಿ ನೀಡುವುದಕ್ಕೆ ಸಾಧ್ಯವಾಗದು. ಅದರ ಬದಲಿಗೆ ಬೇರೆ ರೀತಿಯಲ್ಲಿ ಗೌರವಿಸುವ ಅವಕಾಶವಿದೆ" ಎಂದು ಉಪೇಂದ್ರ ತಿಳಿಸಿದ್ದಾರೆ.
ಗಲ್ವಾನ್ ಕಣಿವೆ ಧೀರ ಯೋಧರಿಗೆ ಶೌರ್ಯ ಪ್ರಶಸ್ತಿ
ಕಳೆದ 2020ರ ಜೂನ್ ತಿಂಗಳಿನಲ್ಲಿ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ ನಡೆದಿತ್ತು. ಅಂದು ದೇಶಕ್ಕಾಗಿ ಪ್ರಾಣಬಿಟ್ಟ ವೀರಯೋಧ ಕರ್ನಲ್ ಸಂತೋಷ್ ಬಾಬು ಅವರನ್ನು ಗುರುತಿಸಿದ ಕೇಂದ್ರ ಸರ್ಕಾರವು 72ನೇ ಗಣರಾಜ್ಯೋತ್ಸವದಂದು ಅವರಿಗೆ ಮರಣೋತ್ತರ ಪರಮವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸುವುದಾಗಿ ಘೋಷಿಸಿತ್ತು.
ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ಹುತಾತ್ಮ:
ಕರ್ನಲ್ ಸಂತೋಷ್ ಬಾಬು ಅವರು ಬಿಹಾರದ 16ನೇ ರೆಜಿಮೆಂಟ್ ನ ಕಮಾಂಡರ್ ಆಫೀಸರ್ ಆಗಿದ್ದರು. 2020ರ ಜೂನ್.15ರಂದು ಗಾಲ್ವಾನ್ ಕಣಿವೆಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಮತ್ತು ಭಾರತೀಯ ಯೋಧರ ನಡುವೆ ಮುಖಾಮುಖಿ ಸಂಘರ್ಷ ನಡೆಯಿತು. ಅಂದು ಭಾರತದ 20 ಯೋಧರು ಹುತಾತ್ಮರಾಗಿದ್ದರು.
ಮಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ತಂದೆ:
"ನನ್ನ ಮಗ, ತಾನು ನಿಯೋಜನೆಗೊಂಡ ಪ್ರದೇಶದಲ್ಲಿನ ಹವಾಮಾನ ಪರಿಸ್ಥಿತಿಗಳಿಂದ ಎದುರಾದ ಸವಾಲುಗಳನ್ನು ನಿವಾರಿಸಿಕೊಂಡು, ಚೀನಾದ ಸೈನ್ಯದೊಂದಿಗೆ ಹೋರಾಡಿದರು. ನನ್ನ ಮಗ ಮತ್ತು ಅವನ ಸಹಪಾಟಿ ಯೋಧರು ಬರಿಗಾಲಿನಿಂದ ಹೋರಾಡಿದರು. ಶತ್ರುರಾಷ್ಟ್ರದ ಹೆಚ್ಚು ಸೈನಿಕರನ್ನು ಕೊಲ್ಲುವ ಮೂಲಕ ಭಾರತವು ಚೀನಾಕ್ಕಿಂತ ಶ್ರೇಷ್ಠ ಮತ್ತು ಬಲಶಾಲಿ ಎಂಬುದನ್ನು ಸಾಬೀತುಪಡಿಸಿದರು" ಎಂದು ಉಪೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.