ಪಟೇಲ್ ಗೆಲುವಿಂದ ಸಂತೋಷ, ನಿರಾಳವಾಗಿದೆ ಎಂದ ಸೋನಿಯಾ ಗಾಂಧಿ
ನವದೆಹಲಿ, ಆಗಸ್ಟ್ 9 : "ಚುನಾವಣೆ ಆಯೋಗದವರಿಗೆ ಥ್ಯಾಂಕ್ ಗಾಡ್" ಎಂದು ಪ್ರತಿಕ್ರಿಯಿಸಿದ್ದಾರೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ. ತಮ್ಮ ಸಹವರ್ತಿ ಅಹ್ಮದ್ ಪಟೇಲ್ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.
ಇಬ್ಬರು ಶಾಸಕರು 'ಕೈ' ಕೊಟ್ಟರೂ ಅಹ್ಮದ್ ಪಟೇಲ್ ಗೆದ್ದಿದ್ದು ಹೇಗೆ?
ಗುಜರಾತ್ ನಲ್ಲಿ ಮಂಗಳವಾರ ರಾಜಕೀಯ ಹೈಡ್ರಾಮಾ ನಂತರ ನಲವತ್ನಾಲ್ಕು ಶಾಸಕರ ಬೆಂಬಲ ಪಡೆದು ಅಹ್ಮದ್ ಪಟೇಲ್ ಅಂತೂ ರಾಜ್ಯಸಭೆಗೆ ಆಯ್ಕೆಯಾದರು. ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಚುನಾವಣೆಯಲ್ಲಿ ಕೊನೆಗೆ ಎರಡೂ ಪಕ್ಷದವರು ಚುನಾವಣೆ ಆಯೋಗದ ಎದುರು ಹಲವು ಸಲ ಎಡತಾಕಿದರು.
ಈ ಚುನಾವಣೆಯಲ್ಲಿ ಬಹಳ ಆತಂಕವಿತ್ತು. ಅಹ್ಮದ್ ಪಟೇಲ್ ಗೆಲುವಿನಿಂದ ನನಗೆ ತುಂಬ ಸಂತೋಷ ಹಾಗೂ ನಿರಾಳವಾಗಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ಈ ವರ್ಷದ ಕೊನೆಯಲ್ಲಿ ಇರುವ ಗುಜರಾತ್ ವಿಧಾನಸಭೆ ಚುನಾವಣೆ ಬಗ್ಗೆ ಮಾತನಾಡಲು ನಿರಾಕರಿಸಿದ ಅವರು, ನನ್ನ ಸಹೋದ್ಯೋಗಿಗಳು ಈ ಬಗ್ಗೆ ಅದಾಗಲೇ ಸಾಕಷ್ಟು ಮಾತನಾಡಿದ್ದಾರೆ ಎಂದಿದ್ದಾರೆ.
ಹಿಂದಿನ ಯಾವುದೇ ರಾಜ್ಯಸಭಾ ಚುನಾವಣೆಯ ಗೆಲುವಿನಲ್ಲೂ ಕಾಣದಂಥ ವಿಜಯೋತ್ಸವ ಆಚರಣೆ ಅಹ್ಮದ್ ಪಟೇಲ್ ಗೆಲುವಿಗೆ ಮಾಡಲಾಗುತ್ತಿದೆ.