'ನಾನು ಸಸ್ಯಾಹಾರಿ, ಈರುಳ್ಳಿ ತಿನ್ನುವುದಿಲ್ಲ, ಹೀಗಾಗಿ ಬೆಲೆ ಗೊತ್ತಾಗೋದು ಹೇಗೆ?'
ನವದೆಹಲಿ, ಡಿಸೆಂಬರ್ 5: ತಮ್ಮ ಕುಟುಂಬದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹೆಚ್ಚಾಗಿ ಸೇವಿಸುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಹೇಳಿಕೆ ನೀಡಿದ ಮರುದಿನ ಮತ್ತೊಬ್ಬ ಬಿಜೆಪಿ ಸಂಸದ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತಾವು ಸಸ್ಯಾಹಾರಿಯಾಗಿರುವುದರಿಂದ ಈರುಳ್ಳಿ ತಿನ್ನುವುದಿಲ್ಲ ಎಂದು ಕೇಂದ್ರ ಸಚಿವ ಅಶ್ವಿನಿ ಚೌಬೆ ಹೇಳಿದ್ದಾರೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾಗಿರುವ ಅಶ್ವಿನಿ ಚೌಬೆ, ಇದುವರೆಗೂ ತಾವು ಈರುಳ್ಳಿಯ ರುಚಿಯನ್ನೇ ನೋಡಿಲ್ಲ. ಹೀಗಾಗಿ ತಮಗೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆಯ ಬಗ್ಗೆ ತಿಳಿಯಲೂ ಅಸಾಧ್ಯ ಎಂದು ಹೇಳಿಕೊಂಡಿದ್ದಾರೆ.
ಈರುಳ್ಳಿ ಸೇವನೆ ಆರೋಗ್ಯಕ್ಕೆ ಹಾನಿಕರ: ನಾನಂತೂ ಈರುಳ್ಳಿ ತಿನ್ನಲ್ಲ!
'ನಾನು ಸಸ್ಯಾಹಾರಿ. ನಾನು ಈರುಳ್ಳಿಯ ರುಚಿಯನ್ನೇ ನೋಡಿಲ್ಲ. ಹೀಗಿರುವಾಗ ನನ್ನಂತಹ ವ್ಯಕ್ತಿಗೆ ಈರುಳ್ಳಿಯ ಮಾರುಕಟ್ಟೆ ದರದ ಪರಿಸ್ಥಿತಿ ಹೇಗೆ ತಿಳಿಯಲು ಸಾಧ್ಯ?' ಎಂದು ಹೇಳಿದ್ದಾರೆ.
ತಾವು ಈರುಳ್ಳಿ-ಬೆಳ್ಳುಳ್ಳಿ ತಿನ್ನುವ ಕುಟುಂಬಕ್ಕೆ ಸೇರಿಲ್ಲ ಎಂದಿದ್ದ ನಿರ್ಮಲಾ ಸೀತಾರಾಮನ್ ಅವರನ್ನು ಅಣಕಿಸಿದ್ದ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ಈರುಳ್ಳಿ ತಿನ್ನುವುದಿಲ್ಲ ಎನ್ನುವ ಹಣಕಾಸು ಸಚಿವರು ಅದರ ಬೆಲೆ ಏರಿಕೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಏನು ತಿನ್ನುತ್ತಾರೆ? ಅವರು ಅವಕಾಡೋ (ಜಗತ್ತಿನ ಅತ್ಯಂತ ಆರೋಗ್ಯಕಾರಿ ಹಣ್ಣು ಎಂದು ಪರಿಗಣಿಸಿರುವ ಮೆಕ್ಸಿಕೋ ಮೂಲದ ಹಣ್ಣು) ತಿನ್ನುತ್ತಾರೆಯೇ ಎಂದು ಪ್ರಶ್ನಿಸಿದ್ದರು.
ದಾಖಲೆ ಬರೆದ ಈರುಳ್ಳಿ ದರ; ಕೆ. ಜಿ. ಗೆ 180 ರೂ.!
ಮಹಾರಾಷ್ಟ್ರ, ಗುಜರಾತ್ ಅಲ್ಲದೆಯೇ ಉತ್ತರ ಪ್ರದೇಶದ ತಮ್ಮ ಕ್ಷೇತ್ರದಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದ್ದು, ಕೆ.ಜಿಗೆ 25 ರೂ. ದರದಲ್ಲಿ ಒಂದು ಟ್ರಕ್ ಲೋಡ್ ಈರುಳ್ಳಿ ಒದಗಿಸಲು ಸಿದ್ಧರಿರುವುದಾಗಿ ವಿಪಕ್ಷಗಳಿಗೆ ಸವಾಲು ಹಾಕಿದರು.