ದೆಹಲಿ ಗಗನಸಖಿ ಸಾವಿನ ಕೇಸ್: ಪತಿ ಮಾಯಾಂಕ್ ಬಂಧನ
ನವದೆಹಲಿ, ಜುಲೈ 16: ದೆಹಲಿಯ ಹೌಝ್ ಖಾಸ್ ಪ್ರದೇಶದಲ್ಲಿ ಗಗನಸಖಿಯೊಬ್ಬರು, ಕಟ್ಟಡದಿಂದ ಕೆಳಗೆ ಹಾರಿ ಮೃತಪಟ್ಟ ಘಟನೆಗೆ ತಿರುವು ಸಿಕ್ಕಿದೆ. ಗಗನಸಖಿ ಅನಿಸಿಯಾ ಬಾತ್ರಾ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಕೆಯನ್ನು ಕೊಲೆಗೈಯಲಾಗಿದೆ ಎಂದು ಕುಟುಂಬಸ್ಥರು ಮೂರು ದಿನಗಳ ಬಳಿಕ ದೂರಿದ್ದಾರೆ.
ಜರ್ಮನ್ ಏರ್ ಲೈನ್ಸ್ ನ ಉದ್ಯೋಗಿ 39 ವರ್ಷ ವಯಸ್ಸಿನ ಅನಿಸಿಯಾ ಬಾತ್ರಾ ಅವರು ಜುಲೈ 13ರಂದು ಸಂಜೆ ವೇಳೆ ಪಂಚಶೀಲ್ ಪಾರ್ಕ್ ಕಟ್ಟಡದಿಂದ ಕೆಳಗೆ ಹಾರಿ ಬಿದ್ದಿದ್ದರು. ಆಕೆಯ ಪತಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದರು.
ಆದರೆ, ಸಾಯುವುದಕ್ಕೂ ಮುನ್ನ ಆಪ್ತರಿಗೆ ಎಸ್ಎಂಎಸ್ ಕಳಿಸಿದ್ದರು ಎಂದು ತಿಳಿದು ಬಂದಿದೆ. ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಜಾರಿಯಲ್ಲಿದೆ ಎಂದು ಎಂದು ಡಿಸಿಪಿ(ದಕ್ಷಿಣ) ರೊಮಿಲ್ ಬಾನಿಯಾ ತಿಳಿಸಿದ್ದಾರೆ.
ಅನಿಸಿಯಾ ಅವರ ಮೇಲೆ ದೈಹಿಕ, ಮಾನಸಿಕ ಹಲ್ಲೆಯಾಗಿದೆ. ಕೌಟುಂಬಿಕ ಕಲಹದಿಂದ ಬೇಸತ್ತಿದ್ದರೂ, ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿರಲಿಲ್ಲ ಎಂದು ಆಪ್ತರು ಹೇಳಿದ್ದಾರೆ.
ಗುರ್ ಗಾಂವ್ ನಲ್ಲಿ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಮಯಾಂಕ್ ಸಿಂಘ್ವಿ ಅವರು, ಇಡೀ ಪ್ರಕರಣದ ದಿಕ್ಕನ್ನು ಬದಲಾಯಿಸಲು ಯತ್ನಿಸಬಹುದು. ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಕೇಸ್ ಮುಚ್ಚಿ ಹಾಕಲು ಒತ್ತದ ಬರಬಹುದು ಎಂದು ಅನಿಸಿಯಾ ಅವರ ಸೋದರ ಕರಣ್ ಬಾತ್ರಾ ಆತಂಕ ವ್ಯಕ್ತಪಡಿಸಿದ್ದಾರೆ.
ಜುಲೈ 13ರಂದು ನಡೆದಿದ್ದೇನು?: ಅನಿಸಿಯಾ ಹಾಗೂ ಮಾಯಾಂಕ್ ಅವರ ನೆರೆಮನೆಯಾತ ಅಮರ್ ಪಾಲ್ ಸಿಂಗ್ ಕೊಹ್ಲಿ ಹೇಳಿಕೆ ಪ್ರಕಾರ, ಘಟನೆ ನಡೆದ ದಿನದಂದು ಇಬ್ಬರಿಗೂ ಜೋರು ಜಗಳವಾಗಿದೆ. ನಂತರ ಮನೆಯಿಂದ ಮಾಯಾಂಕ್ ಹೊರಕ್ಕೆ ಹೋಗಿದ್ದಾರೆ. ಆದರೆ, ವಾಪಸ್ ಬರುವಷ್ಟರಲ್ಲಿ ಈ ಘಟನೆ ನಡೆದಿದೆ.
ಈ ಹಿಂದೆ ದಂಪತಿ ಜಗಳ ಶಮನಗೊಳಿಸುವಂತೆ ಅನಿಸಿಯಾ ಪೋಷಕರು ನನ್ನಲ್ಲಿ ಕೇಳಿಕೊಂಡಿದರು. ಅನಿಸಿಯಾ ಮೇಲೆ ಮಾಯಾಂಕ್ ಹಲ್ಲೆ ಮಾಡಿದ್ದ ಎಂದು ಆರೋಪಿಸಿದ್ದರು.
ಅನಿಸಿಯಾ ಆಪ್ತರ ಹೇಳಿಕೆ: ಘಟನೆ ನಡೆದ ದಿನದಂದು ಮನೆಯ ರೂಮಿನಲ್ಲಿ ನಾನು ಸಿಲುಕಿದ್ದೇನೆ. ನನ್ನ ಪತಿ, ರೂಮ್ ಲಾಕ್ ಮಾಡಿ ಹೋರಕ್ಕೆ ಹೋಗಿದ್ದಾನೆ ಎಂದು ಎಸ್ಎಂಎಸ್ ಬಂದಿತು. ನಾನು ಸಾಯಲು ಸಿದ್ಧನಾಗುತ್ತಿದ್ದೇನೆ ಎಂದು ಆಕೆ ಅಂತಿಮವಾಗಿ ಸಂದೇಶ ಕಳಿಸಿದ್ದಳು ಎಂದು ಆಪ್ತರೊಬ್ಬರು ಹೇಳಿದ್ದಾರೆ. ಎಸ್ಎಂಎಸ್ ಸಂದೇಶಗಳನ್ನು ಸಂಗ್ರಹಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.