ಲಾಕ್ಡೌನ್ ವೇಳೆ ಅಪಘಾತದಿಂದ ನೂರಾರು ವಲಸೆ ಕಾರ್ಮಿಕರು ಸಾವು
ನವ ದೆಹಲಿ, ಮೇ 26: ವಲಸೆ ಕಾರ್ಮಿಕರ ಕಷ್ಟ ನಿಜಕ್ಕೂ ನೋವುಂಟು ಮಾಡುತ್ತದೆ. ಒಂದು ಕಡೆ ದುಡಿಮೆ ಇಲ್ಲದೆ, ಊಟಕ್ಕೂ ಪರದಾಟ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ತಮ್ಮ ಊರಿಗೆ ಹೋಗಲು ಎಷ್ಟೋ ಮಂದಿ ಕಷ್ಟಪಡುತ್ತಿದ್ದಾರೆ. ಆದರೆ, ಮಾರ್ಗ ಮಧ್ಯೆಯೇ ಪ್ರಾಣ ಕಳೆದುಕೊಂಡವರು ಅನೇಕರಿದ್ದಾರೆ.
196 (33%) ವಲಸೆ ಕಾರ್ಮಿಕರು ರಸ್ತೆ ಅಪಘಾತದಿಂದ ಮೃತರಾಗಿದ್ದಾರೆ. ಲಾಕ್ಡೌನ್ ವೇಳೆ ತಮ್ಮ ಊರಿಗೆ ಹೋಗುತ್ತಿದ್ದ ಇವರ ಜೀವನ ಸಾವಿನಲ್ಲಿ ಅಂತ್ಯವಾಗಿದೆ. ಸೇವ್ ಲೈಫ್ ಫೌಂಡೇಶನ್ ಈ ಬಗ್ಗೆ ಸರ್ವೆ ನಡೆಸಿದ್ದು, ವರದಿ ನೀಡಿದೆ.
ಕಾರ್ಮಿಕರು ಪ್ರಯಾಣಿಸುತ್ತಿದ್ದ ಟ್ರಕ್ ಅಪಘಾತ: 24 ಮಂದಿ ದುರ್ಮರಣ
ಲಾಕ್ಡೌನ್ ಸಮಯದಲ್ಲಿ ಈವರೆಗೆ ದೇಶದಲ್ಲಿ 1,346 ಅಪಘಾತಗಳು ನಡೆದಿದೆ. ಇದರಲ್ಲಿ 601 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. 1,161 ಮಂದಿ ಅಪಘಾತದಿಂದ ಗಾಯಗೊಂಡಿದ್ದಾರೆ. ಈ ಪೈಕಿ 866 ಮಂದಿ ವಲಸೆ ಕಾರ್ಮಿಕರು ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ.
ಅಪಘಾತಗಳ ಸಂಖ್ಯೆ ಹಾಗೂ ಅದರಿಂದ ಆದ ಸಾವಿನ ಸಂಖ್ಯೆ ಗಮನಿಸಿದರೆ, ಶೇಕಡ 25 ಇದೆ. ಅಂದರೆ ನೂರು ಜನರಿಗೆ ಅಪಘಾತ ಆದರೆ, ಅದರಲ್ಲಿ 25 ಮಂದಿ ಸಾವುಗೀಡಗುತ್ತಿದ್ದಾರೆ. ಈ ಪ್ರಮಾಣ ಲಾಕ್ಡೌನ್ ಹಿಂದೆಯೂ ಹಾಗೆಯೇ ಇತ್ತು.
ಕಾರ್ಮಿಕರನ್ನು ಹೊರತುಪಡಿಸಿ 370 ಮಂದಿ ಲಾಕ್ಡೌನ್ ವೇಳೆ ರಸ್ತೆ ಅಪಘಾತದಿಂದ ನಿಧನ ಹೊಂದಿದ್ದಾರೆ. ವಲಸೆ ಕಾರ್ಮಿಕರಲ್ಲದೆ, 35 ಕಾರ್ಮಿಕರು ರಸ್ತೆ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಇದರಲ್ಲಿ 31 ಕಾರ್ಮಿಕರು ಗಾಯಗೊಂಡಿದ್ದಾರೆ.
ರಸ್ತೆ ಸುರಕ್ಷತೆ ಹೆಚ್ಚಿಸಲು ರಸ್ತೆಗಳಲ್ಲಿನ ವಿನ್ಯಾಸ ಮತ್ತು ರಚನಾತ್ಮಕ ದೋಷಗಳನ್ನು ಸರಿಪಡಿಸಲು ಲಾಕ್ಡೌನ್ ಅವಧಿಯನ್ನು ಬಳಸುವಂತೆ ರಸ್ತೆ ಸುರಕ್ಷತಾ ಸಂಸ್ಥೆಗಳು ಅಧಿಕಾರಿಗಳಿಗೆ ಕರೆ ನೀಡಿದೆ.