ಕೆಂಪುಕೋಟೆ ಮೇಲೆ ರೈತಧ್ವಜ ಹಾರುವ ಮೊದಲು ನಡೆದಿದ್ದು ಏನು?
ನವದೆಹಲಿ, ಜನವರಿ.26: ಭಾರತದ 72ನೇ ಗಣರಾಜ್ಯೋತ್ಸವದ ಸಂಭ್ರಮದ ನಡುವೆ ರೈತರ ದಂಗೆಗೆ ರಾಷ್ಟ್ರ ರಾಜಧಾನಿ ಸಾಕ್ಷಿಯಾಯಿತು. ತ್ರಿವರ್ಣಧ್ವಜ ಹಾರಾಡುವ ನವದೆಹಲಿ ಕೆಂಪುಕೋಟೆ ಮೇಲೆ ರೈತರು ನಿಶಾನ್ ಸಾಹೇಬ್ ಧ್ವಜವನ್ನು ಹಾರಿಸಿದರು.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿದ್ದ 63 ದಿನಗಳ ಹೋರಾಟ ಮಂಗಳವಾರ ಹಿಂಸಾತ್ಮಕ ರೂಪ ಪಡೆದುಕೊಂಡಿತು. ಟ್ರ್ಯಾಕ್ಟರ್ ಗಳಲ್ಲಿ ಧಾವಿಸಿದ ಬಂದ ರೈತರ ಆಕ್ರೋಶದ ಕಿಚ್ಚಿಗೆ ದೆಹಲಿ ರಣರಂಗವಾಯಿತು.
ಸಿಖ್ಖರ ಧರ್ಮ ಧ್ವಜಕ್ಕೂ, ರೈತ ಚಳವಳಿಗೂ ಸಂಬಂಧವಿಲ್ಲ
ಗಣರಾಜ್ಯೋತ್ಸವ ಪರೇಡ್ ನಂತರದಲ್ಲಿ ರೈತರು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ಪರೇಡ್ ನಡೆಸುವುದಕ್ಕೆ ಪೊಲೀಸರು ಷರತ್ತುಬದ್ಧ ಅನುಮತಿ ನೀಡಲಾಗಿತ್ತು. ಆದರೆ 11 ಗಂಟೆ ಕಳೆದರೂ ಟ್ರ್ಯಾಕ್ಟರ್ ಪರೇಡ್ ನಡೆಸಲು ಅವಕಾಶ ನೀಡದ ಹಿನ್ನೆಲೆ ರೈತರು ಕೆರಳಿದರು. ಟ್ರ್ಯಾಕ್ಟರ್ ಗಳಲ್ಲಿ ನುಗ್ಗಿದ ರೈತರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿ ಅಶ್ರುವಾಯು ಸಿಡಿಸಿದರು. ಐತಿಹಾಸಿಕ ಆಚರಣೆಗೆ ಸಾಕ್ಷಿಯಾಗಬೇಕಿದ್ದ ನವದೆಹಲಿಯು ಮಂಗಳವಾರ ರೈತರ ಆಕ್ರೋಶದ ಕಿಚ್ಚಿಗೆ ಹಿಡಿದ ಕೈಗನ್ನಡಿ ಆಯಿತು. ಬೆಳಗ್ಗೆಯಿಂದ ಸಂಜೆವರೆಗೂ ದೆಹಲಿಯಲ್ಲಿ ನಡೆದ ಬೆಳವಣಿಗೆಗಳು ಹೇಗಿದ್ದವು ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
72ನೇ ಗಣರಾಜ್ಯೋತ್ಸವ ಸಂಭ್ರಮ ವಿಶೇಷ ಪುಟ
ಮೊದಲ ಸಂಘರ್ಷಕ್ಕೆ ಸಿಂಘು ಗಡಿ ಸಾಕ್ಷಿ
* ಬೆಳಗ್ಗೆ 8.30 ಗಂಟೆ: ಮೊದಲ ಬಾರಿಗೆ ಸಿಂಘು ಗಡಿಯಲ್ಲಿ ಸಂಘರ್ಷ ನಡೆಯಿತು. ಪ್ರತಿಭಟನಾನಿರತ ರೈತರು ಬ್ಯಾರಿಕೇಡ್ ಗಳನ್ನು ಸರಿಸಿ ನುಗ್ಗುವುದಕ್ಕೆ ಯತ್ನಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾನಿರತರನ್ನು ನಿಯಂತ್ರಿಸಿದರು. ಘಾಜಿಪುರ ಮತ್ತು ಟಿಕ್ರಿ ಗಡಿಯಲ್ಲಿಯೂ ಪ್ರತಿಭಟನಾಕಾರರು ಪ್ರಕ್ಷುಬ್ಧರಾದರು.
* ಬೆಳಗ್ಗೆ 8.45 ಗಂಟೆ: ದೆಹಲಿ ಮತ್ತು ಹರಿಯಾಣದ ಟಿಕ್ರಿ ಗಡಿ ಪ್ರದೇಶದಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ಮುರಿದ ರೈತರು ಜಾಥಾ ಆರಂಭಿಸಿದರು.
* ಬೆಳಗ್ಗೆ 9.30 ಗಂಟೆ: ಸಿಂಘು ಗಡಿಯಿಂದ ಹೊರಟ ರೈತರ ಟ್ರ್ಯಾಕ್ಟರ್ ಜಾಥಾ ಸಂಜಯ್ ಗಾಂಧಿ ಟ್ರಾನ್ಸಪೋರ್ಟ್ ನಗರಕ್ಕೆ ತಲುಪಿತು.
ಪ್ರತಿಭಟನಾನಿರತರ ಮೇಲೆ ಅಶ್ರುವಾಯು ಪ್ರಯೋಗ
* ಬೆಳಗ್ಗೆ 10.15 ಗಂಟೆ: ಘಜಿಪುರ್ ಗಡಿ ಪ್ರದೇಶದ ಚಾಲೋದಲ್ಲಿ ರೈತರು ಟ್ರ್ಯಾಕ್ಟರ್ ಜಾಥಾಗೆ ದಾರಿ ಮಾಡಿಕೊಟ್ಟರು. ಈ ವೇಳೆ ಪ್ರತಿಭಟನಾನಿರತ ರೈತರನ್ನು ನಿಯಂತ್ರಿಸುವುದಕ್ಕಾಗಿ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.
* ಬೆಳಗ್ಗೆ 11 ಗಂಟೆ: ಸಂಜಯ್ ಗಾಂಧಿ ಟ್ರಾನ್ಸಪೋರ್ಟ್ ನಗರದಲ್ಲಿ ಘರ್ಷಣೆ ನಡೆಯುತ್ತಿದ್ದಂತೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಅಶ್ರುವಾಯು ಸಿಡಿಸಿದರು. ಪೊಲೀಸರ ಜಲಫಿರಂಗಿ ವಾಹನದ ಮೇಲೆ ರೈತರು ದಾಳಿ ನಡೆಸಿದ ನಂತರದಲ್ಲಿ ಈ ಸಂಘರ್ಷ ಹೆಚ್ಚಾಯಿತು.
ಉತ್ತರ ದೆಹಲಿಯಲ್ಲೂ ರೈತರ ಹೋರಾಟಕ್ಕೆ ದಂಗೆ ಸ್ವರೂಪ
* ಬೆಳಗ್ಗೆ 11.30 ಗಂಟೆ: ದೆಹಲಿಯ ಪಾಂಡವನಗರ್ ಬಳಿಯ ದೆಹಲಿ-ಮೀರತ್ ಎಕ್ಸಪ್ರೆಸ್ ವೇ ನಲ್ಲಿ ಹಾಕಿದ್ದ ಬ್ಯಾರಿಕೇಡ್ ಗಳಿಗೆ ಹಾನಿ ಮಾಡಿದರು. ಉತ್ತರ ದೆಹಲಿಯ ಮುಕರ್ಬಾ ಚೌಕ್ ಬಳಿ ನಿಗದಿಗೊಳಿಸಿದ ಮಾರ್ಗವನ್ನು ಬದಲಿಸುವುದಕ್ಕಾಗಿ ರೈತರು ಬ್ಯಾರಿಕೇಡ್ ಗಳನ್ನು ಧ್ವಂಸಗೊಳಿಸಲು ಮುಂದಾದರು. ಈ ವೇಳೆ ರೈತರನ್ನು ನಿಯಂತ್ರಿಸುವುದಕ್ಕಾಗಿ ಪೊಲೀಸರು ಅಶ್ರುವಾಯು ಸಿಡಿದರು. ಕೇಂದ್ರದ ವಿರುದ್ಧ ದಂಗೆ ಎದ್ದಿರುವ ರೈತರಿಂದ ಪೊಲೀಸರ ಏಳು ಬಸ್ ಮತ್ತು ವಾಹನಗಳಿಗೆ ಹಾನಿಯಾಯಿತು.
* ಬೆಳಗ್ಗೆ 11.45 ಗಂಟೆ: ರೈತರ ಟ್ರ್ಯಾಕ್ಟರ್ ಜಾಥಾಗೆ ಮೊದಲೇ ನಿಗದಿಪಡಿಸಿದ್ದ ಘಜಿಪುರ್, ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ಪೊಲೀಸರು ತೆರವುಗೊಳಿಸಿದರು.
ದೆಹಲಿಯ ವಿರುದ್ಧ ದಿಕ್ಕಿನಲ್ಲಿ ರೈತರ ಟ್ರ್ಯಾಕ್ಟರ್ ಜಾಥಾ
* ಮಧ್ಯಾಹ್ನ 12.15 ಗಂಟೆ: ದೆಹಲಿಯಲ್ಲಿ ಪ್ರತಿಭಟನಾನಿರತ ರೈತರು ಘಾಜಿಪುರದಿಂದ ಟ್ರ್ಯಾಕ್ಟರ್ಗಳನ್ನು ಅಕ್ಷರ್ಧಮ್ಗೆ ತೆರಳುತ್ತಾರೆ. ಯು-ಟರ್ನ್ ತೆಗೆದುಕೊಳ್ಳುವುದು ನಿಗದಿತ ಮಾರ್ಗವಾಗಿತ್ತು. ಆದರೆ, ರೈತರು ಬಲಕ್ಕೆ ತಿರುಗಿ ಐಟಿಒ ತಲುಪುತ್ತಾರೆ. ಯಮುನಾ ಸೇತುವೆ ದಾಟಿ ದೆಹಲಿ ಪೊಲೀಸ್ ಪ್ರಧಾನ ಕಚೇರಿಯ ಎದುರಿನ ಬ್ಯಾರಿಕೇಡ್ಗಳನ್ನು ಮುರಿಯುತ್ತಾರೆ.
* ಮಧ್ಯಾಹ್ನ 12.20 ಗಂಟೆ: ನೋಯ್ಡಾದಲ್ಲಿ ಘರ್ಷಣೆ ಭುಗಿಲೆದ್ದಿತು. ಕೆಲವು ಪ್ರತಿಭಟನಾಕಾರರು ಖಡ್ಗಗಳನ್ನು ಪ್ರದರ್ಶಿಸಿದರು.
* ಮಧ್ಯಾಹ್ನ 12.50 ಗಂಟೆ: ಟ್ರಾಕ್ಟರುಗಳ ಮೂಲಕ ರೈತರು ಬ್ಯಾರಿಕೇಡ್ಗಳ ತಳ್ಳುವುದಕ್ಕೆ ಮುಂದಾದರು. ದೆಹಲಿ ಪೊಲೀಸರು ಗಾಜಿಪುರ ಗಡಿಯ ಸಮೀಪದ ಶಹದಾರಾದ ಚಿಂತಾಮಣಿ ಚೌಕ್ನಲ್ಲಿ ರೈತರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದರು. ನಂಗ್ಲಾಯ್ ನಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ನಿರ್ಬಂಧಿಸಿದರು.
ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ
* ಮಧ್ಯಾಹ್ನ 1 ಗಂಟೆ: ದೆಹಲಿಯ ಕೆಂಪುಕೋಟೆಗೆ ಹೋಗುವುದಕ್ಕೆ ಅನುಮತಿ ನೀಡುವಂತೆ ಆಗ್ರಹಿಸಿ ರೈತರು ಸಂಘರ್ಷಕ್ಕೆ ಇಳಿದರು. ಐಟಿಓ ಬಳಿ ಬಸ್ ಗಳನ್ನು ಧ್ವಂಸಗೊಳಿಸಿದರು. ಕೆಲವು ದುಷ್ಕರ್ಮಿಗಳು ಪೊಲೀಸರ ಮೇಲೆ ಟ್ರ್ಯಾಕ್ಟರ್ ಹತ್ತಿಸಲು ಪ್ರಯತ್ನಿಸಿದ ಘಟನೆ ನಡೆಯಿತು. ಕೆಂಪುಕೋಟೆಗೆ ತೆರಳುವುದಕ್ಕೆ ಮುಂದಾದ ರೈತರನ್ನು ತಡೆಯುವುದಕ್ಕಾಗಿ ಲಾಠಿಚಾರ್ಜ್ ನಡೆಸಿದ ಪೊಲೀಸರು ಅಶ್ರುವಾಯು ಸಿಡಿಸಿದರು. ಒಬ್ಬ ಪ್ರತಿಭಟನಾನಿರತ ರೈತನ ಮೇಲೆ ಟ್ರ್ಯಾಕ್ಟರ್ ಹರಿದು ಮೃತಪಟ್ಟಿರುವ ಘಟನೆಯೂ ನಡೆಯಿತು.
* ಮಧ್ಯಾಹ್ನ 2 ಗಂಟೆ: ಐಟಿಓ ಪ್ರದೇಶದಲ್ಲಿ ನಡೆದ ಒಂದೂವರೆ ಗಂಟೆಗಳ ಸುದೀರ್ಘ ಸಂಘರ್ಷದ ನಂತರ ಪ್ರತಿಭಟನಾನಿರತ ರೈತರು ಕೆಂಪುಕೋಟೆಗೆ ತೆರಳಿದರು. ಸಿಂಗು ಗಡಿಯಿಂದ ಪ್ರತಿಭಟನಾಕಾರರು ಔಟರ್ ರಿಂಗ್ ರಸ್ತೆ (ನಂಗ್ಲೋಯಿ ಮತ್ತು ಟಿಸ್ ಹಜಾರಿ) ಮೂಲಕ ಕೆಂಪು ಕೋಟೆಯನ್ನು ತಲುಪಿದರು. ಅಂತಿಮವಾಗಿ ಕೆಂಪುಕೋಟೆ ಪ್ರವೇಶಿಸಿದ ಪ್ರತಿಭಟನಾನಿರತರು ಸಿಖ್ ಧ್ವಜವಾದ ನಿಶಾನ್ ಸಾಹಿಬ್ ನ್ನು ಹಾರಿಸಿದರು.