ದೇಶ ದ್ರೋಹಿಯನ್ನು ಎಷ್ಟು ಕೇಜ್ರಿವಾಲ್ ಕಾಪಾಡುತ್ತಾರೆ: ಸ್ಮೃತಿ ಇರಾನಿ
ನವದೆಹಲಿ ಜೂನ್ 1: "ದೇಶದ್ರೋಹಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಎಷ್ಟು ದಿನಗಳವರೆಗೆ ಕಾಪಾಡುತ್ತಾರೆ. ಜಾರಿ ನಿರ್ದೇಶನಾಲಯ(ಇಡಿ) ದಿಂದ ಬಂಧಿತರಾಗಿರುವ ದೆಹಲಿ ಸರಕಾರದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ಗೆ ಕ್ಲೀನ್ ಚಿಟ್ ನೀಡಲು ಕೇಜ್ರಿವಾಲ್ ಯಾರು?,'' ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಶ್ನಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ಯೇಂದ್ರ ಜೈನ್ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ನಡೆಯನ್ನು ತೀವ್ರವಾಗಿ ಖಂಡಿಸಿದರು.
ಸತ್ಯೇಂದ್ರ ಜೈನ್ ಬಂಧನ ರಾಜಕೀಯ ಪ್ರೇರಿತ: ಕೇಜ್ರಿವಾಲ್
"ಇಡಿ ಯಿಂದ ಸತ್ಯೇಂದ್ರ ಜೈನ್ ಬಂಧನ ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ. ಈ ಪ್ರಕರಣದಲ್ಲಿ ದೆಹಲಿಯ ರಾಜ್ಯ ಸರಕಾರ ಮತ್ತು ಆಮ್ ಆದ್ಮಿ ಪಕ್ಷ ಸಂಪೂರ್ಣ ಪ್ರಾಮಾಣಿಕವಾಗಿದೆ," ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಈಗ ಸ್ಮೃತಿ ಇರಾನಿ ಪ್ರಕರಣದ ಕುರಿತು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಹಿ.ಪ್ರದೇಶ ವಿಧಾನಸಭೆ ಚುನಾವಣೆ ಭೀತಿ: ಸತ್ಯೇಂದ್ರ ಜೈನ್ ವಿರುದ್ಧ ಪ್ರಕರಣ- ಆಪ್ ಆರೋಪ
ಸತ್ಯೇಂದ್ರ ಜೈನ್ ವಿರುದ್ಧ ಎದ್ದಿರುವ ಆರೋಪಗಳ ಸಂಬಂಧ ದಾಖಲೆಗಳನ್ನು ಪ್ರದರ್ಶಿಸಿದ ಸ್ಮೃತಿ ಇರಾನಿ, "ಈ ದಾಖಲೆಗಳು ಸುಳ್ಳೋ ಅಥವಾ ನಿಜವೋ? ಎಂದು ದೆಹಲಿ ಮುಖ್ಯಮಂತ್ರಿಗಳು ಉತ್ತರಿಸಬೇಕು,'' ಎಂದು ಆಗ್ರಹಿಸಿದರು.
ಸತ್ಯೇಂದ್ರ ಜೈನ್ ಶೆಲ್ ಕಂಪನಿಗಳ ಮಾಲೀಕ
"ದಾಖಲೆಗಳ ಆಧಾರದಲ್ಲಿ ನಾಲ್ಕು ಶೆಲ್ ಕಂಪನಿಗಳ ಒಡೆತನವನ್ನು ಸತ್ಯೇಂದ್ರ ಜೈನ್ ಮತ್ತು ಅವರ ಕುಟುಂಬದವರು ಹೊಂದಿದ್ದಾರೆ. ಪ್ರಕರಣದಲ್ಲಿ ಹೆಸರಿಸುವಂತೆ ಸತ್ಯೇಂದ್ರ ಜೈನ್ ಶೆಲ್ ಕಂಪನಿಗಳ ಮಾಲೀಕರು ಹೌದು ಅಥವಾ ಇಲ್ಲ ಎಂಬುದನ್ನು ನಾವು ತಿಳಿಯಬಯಸುತ್ತೇವೆ,'' ಎಂದು ಸ್ಮೃತಿ ಇರಾನಿ ಪ್ರಶ್ನಿಸಿದರು.
ಹವಾಲಾ ಮೂಲಕ ಹಣ ವರ್ಗಾವಣೆ
"ಹವಾಲಾ ಅಪರೇಟರ್ಗಳ ಮೂಲಕ ಸತ್ಯೇಂದ್ರ ಜೈನ್ 16.39 ಕೋಟಿ ರೂ.ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಸತ್ಯವೇ?. ಈ ಹಣ ತನ್ನ ಸಹಚರರಿಗೆ ಸೇರಿದ್ದು ಎಂಬ ಜೈನ್ ವಾದವನ್ನು ತೆರಿಗೆ ಇಲಾಖೆ ತಳ್ಳಿಹಾಕಿದೆ. ಅಲ್ಲದೇ ಈ ಹಣವು ಜೈನ್ ಅವರಿಗೆ ಸೇರಿದ್ದು ಎಂದು ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಅಲ್ಲದೇ 2019ರಲ್ಲಿ ದೆಹಲಿ ಹೈಕೋರ್ಟ್ ನ ವಿಭಾಗೀಯ ಪೀಠ ತೆರಿಗೆ ಇಲಾಖೆ ಶೋಧನೆಗಳನ್ನು ಒಪ್ಪಿಕೊಂಡಿದೆ,'' ಎಂದು ಸ್ಮೃತಿ ಇರಾನಿ ಹೇಳಿದರು.
200 ಎಕರೆ ಜಮೀನು ಖರೀದಿ
"ಅಕ್ರಮ ಮತ್ತು ಲೆಕ್ಕಕ್ಕೆ ಸಿಗದ ಆದಾಯವಾದಲ್ಲಿ ಶೆಲ್ ಕಂಪನಿಗಳ ಹೆಸರಿನಲ್ಲಿ 16.39 ಕೋಟಿ ರೂ.ಗಳಿಗೆ ದೆಹಲಿಯ ಸಮೀಪ ಅನಧಿಕೃತ ಕಾಲೋನಿಗಳಲ್ಲಿ 200 ಎಕರೆ ಜಮೀನು ಖರಿದೀಸಿರುವುದು ನಿಜವೇ?. ಈ ಅಕ್ರಮ ಹಣದಿಂದ ಖದೀಸಿದ ಜಮೀನಿನಲ್ಲಿ ಲಾಭದ ಪಾಲು ಪಡೆದ ಕಾರಣದಿಂದ ಆಪ್ ಈ ಅನಧಿಕೃತ ಕಾಲೋನಿಗಳನ್ನು ಸಕ್ರಮಗೊಳಿಸಿದೆಯೇ?,'' ಎಂದು ಸಚಿವರು ಪ್ರಶ್ನಿಸಿದರು.
"ಗಂಭೀರ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಯೊಬ್ಬನನ್ನು ರಕ್ಷಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೊರಟಿದ್ದಾರೆ,'' ಎಂದು ಸ್ಮೃತಿ ಇರಾನಿ ದೂರಿದರು.
ಇಡಿ ಯಿಂದ ಸತ್ಯೇಂದ್ರ ಜೈನ್ ಬಂಧನ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ರನ್ನು ಇತ್ತೀಚೆಗೆ ಜಾರಿ ನಿರ್ದೇಶನಾಲಯ ಬಂಧಿಸಿದೆ. ಅರವಿಂದ್ ಕೇಜ್ರಿವಾಲ್ ಸಂಪುಟದ ಸಚಿವರಾಗಿದ್ದ ಸತ್ಯೇಂದ್ರ ಜೈನ್ 2015-16ರಲ್ಲಿ ಕೋಲ್ಕತ್ತಾ ಮೂಲದ ಸಂಸ್ಥೆಯೊಂದಿಗೆ ಹವಾಲಾ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.
ಜಾರಿ ನಿರ್ದೇಶನಾಲಯದಿಂದ ತನಿಖೆ
ಜೈನ್ ಮತ್ತು ಅವರ ಕುಟುಂಬದ ವಿರುದ್ಧ 16.39 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಆರೋಪದ ಸಂಬಂಧ ಸಿಬಿಐ 2017ರ ಆಗಸ್ಟ್ನಲ್ಲಿ ಪ್ರಕರಣ ದಾಖಲಿಸಿತ್ತು. 2011-12ರಲ್ಲಿ 11.78 ಕೋಟಿ ರೂ. ಮತ್ತು 2015-16 ರಲ್ಲಿ 4.63 ಕೋಟಿ ರೂ. ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಲು ಜೈನ್ ಮತ್ತು ಅವರ ಕುಟುಂಬವು ನಾಲ್ಕು ಶೆಲ್ ಸಂಸ್ಥೆಗಳನ್ನು ಯಾವುದೇ ನೈಜ ವ್ಯವಹಾರವಿಲ್ಲದ ಕಂಪನಿಗಳನ್ನು ಸ್ಥಾಪಿಸಿದೆ ಎಂದು ಸಿಬಿಐ ಆರೋಪಿಸಿದೆ. ಸಿಬಿಐನ ಪ್ರಾಥಮಿಕ ತನಿಖಾ ವರದಿಯ ಆಧಾರದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ.