ಭಾರತ ಇನ್ನೆಷ್ಟು ದಿನ ಜಾತ್ಯತೀತವಾಗಿರುತ್ತೆ? : ಸುಪ್ರೀಂ
ನವದೆಹಲಿ, ಫೆ. 10: "ಭಾರತ ಜಾತ್ಯತೀತ ರಾಷ್ಟ್ರ. ಇನ್ನೆಷ್ಟು ದಿನ ಹೀಗಿರುತ್ತೋ ಗೊತ್ತಿಲ್ಲ..." ಈ ಆತಂಕ ವ್ಯಕ್ತಪಡಿಸಿರುವುದು ಯಾವುದೋ ರಾಜಕಾರಣಿ ಅಲ್ಲ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್! ಈ ಆತಂಕಕ್ಕೆ ಕಾರಣವಾಗಿದ್ದು ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ. ಏನು ಗೊತ್ತೇ?
'ಭಾರತದಲ್ಲಿ ಕ್ರಿಶ್ಚಿಯನ್ ವೈಯಕ್ತಿಕ ಕಾನೂನಿಗೆ ಅನುಗುಣವಾಗಿ ಕ್ರಿಶ್ಚಿಯನ್ ನ್ಯಾಯಾಲಯ ಜಾರಿಗೆ ತರಬೇಕು' ಎಂದು ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೇಳಿದ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹೀಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ವಿಷಯ ಹಾಗೂ ಮದುವೆ, ದತ್ತು ಪಡೆಯುವುದು ಮತ್ತು ವಿಚ್ಛೇದನದಂತಹ ಕೌಟುಂಬಿಕ ವಿಷಯಗಳಲ್ಲಿ ಸಾರ್ವತ್ರಿಕ ಕಾನೂನು ಅನ್ವಯವಾಗಬೇಕು. ನಾಗರಿಕ ವಿಷಯಗಳಲ್ಲಿ ಧರ್ಮವನ್ನು ಹೊರಗಿಡಬೇಕು ಎಂದು ನ್ಯಾ. ವಿಕ್ರಮಜಿತ್ ಸೇನ್ ಹಾಗೂ ನ್ಯಾ. ಸಿ. ನಾಗಪ್ಪನ್ ಇದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿತು. [ಕೇಂದ್ರಕ್ಕೆ ಸುಪ್ರೀಂ ಚಾಟಿ]
ಪ್ರಕರಣವೇನು? : ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಮೂಲದ ಕ್ಯಾಥೋಲಿಕ್ ಸಂಘದ ಮಾಜಿ ಅಧ್ಯಕ್ಷ ಕ್ಲಾರೆನ್ಸ್ ಪೈಯಸ್ ಅವರು ವಿವಾಹ ವಿಚ್ಛೇದನ ಪ್ರಕರಣವನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 494 (ದ್ವಿಪತ್ನಿತ್ವ ಅಥವಾ ದ್ವಿಪತಿತ್ವ) ಅಡಿ ಕ್ರಿಮಿನಲ್ ನ್ಯಾಯಾಲಯದ ಮೂಲಕ ನಿರ್ಧರಿಸುವಾಗ 'ಕ್ಯಾನನ್ ಲಾ' ಅನ್ವಯಿಸಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. [ಮದುವೆಗಾಗಿ ಇಸ್ಲಾಂಗೆ ಮತಾಂತರ ಅಸಿಂಧು]
ಮುಸ್ಲಿಂ ಸಮುದಾಯಕ್ಕೆ ಮೊಹಮ್ಮದನ್ ಕಾನೂನಿನಂತೆ ವಿವಾಹ ವಿಚ್ಛೇದನ ಪಡೆಯಲು ಅವಕಾಶ ನೀಡಲಾಗಿದೆ. ಇದರಂತೆ ಕ್ರೈಸ್ತರಿಗೆ ಕೂಡ 'ಕ್ಯಾನನ್ ಲಾ'ದಂತೆ ವಿವಾಹ ವಿಚ್ಛೇದನ ಪಡೆಯಲು ಅವಕಾಶ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. [ಫತ್ವಾಕ್ಕೆ ಕಾನೂನು ಮಾನ್ಯತೆ ಇಲ್ಲ]
ಈ ಅರ್ಜಿಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.