ಏರ್ ಸ್ಟ್ರೈಕ್ ಬಗ್ಗೆ ಸಂಶಯಿಸುವವರನ್ನು ನಂಬಲು ಸಾಧ್ಯವೆ? : ಮೋದಿ
Recommended Video
ನವದೆಹಲಿ, ಮಾರ್ಚ್ 09 : "ಯಾರ ನರನಾಡಿಗಳಲ್ಲಿ ಹಿಂದೂಸ್ತಾನದ ರಕ್ತ ಹರಿಯುತ್ತಿರುತ್ತದೋ, ಅವರಿಗೆ (ಏರ್ ಸ್ಟ್ರೈಕ್) ಬಗ್ಗೆ ಸಂಶಯ ಬರಲು ಸಾಧ್ಯವೆ? ಯಾರು ಭಾರತ ಮಾತೆಗೆ ಜೈ ಅಂತಾರೋ, ಅವರಿಗೆ ಸಂಶಯ ಬರಲು ಸಾಧ್ಯವೆ? ಹೀಗೆ ಸಂಶಯ ವ್ಯಕ್ತಪಡಿಸುವವರು ಯಾರು? ಇಂಥ ಮಾತುಗಳ ಮೇಲೆ ಭರವಸೆ ಇಡಲು ಸಾಧ್ಯವೆ?"
ಗ್ರೇಟರ್ ನೊಯ್ಡಾದಲ್ಲಿ ಶನಿವಾರ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಫೆಬ್ರವರಿ 26ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ವಾಯು ಸೇನೆ ಯಶಸ್ವಿಯಾಗಿ ನಡೆಸಿದ ಏರ್ ಸ್ಟ್ರೈಕ್ ಅನ್ನು ಪ್ರಶ್ನಿಸಿದ, ಸಾಕ್ಷ್ಯ ಕೇಳುತ್ತಿರುವವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಏರ್ ಸ್ಟ್ರೈಕ್ ಸುಳ್ಳು ಎಂದ ಸಂಸ್ಥೆಗೆ ವಾಯುಸೇನೆಯಿಂದ ಮಂಗಳಾರತಿ
ಹಿಂದೆ ನಡೆದ ಹಲವಾರು ಭಯೋತ್ಪಾದಕ ದಾಳಿಗಳು, ಬಾಂಬ್ ಸ್ಪೋಟಗಳು ಕೂಡ ಪಾಕಿಸ್ತಾನದ ಜೊತೆ ತಳಕು ಹಾಕಿಕೊಂಡಿವೆ. ಆದರೆ, ಹಿಂದಿನ (ಯುಪಿಎ) ಸರಕಾರ ಏನು ಮಾಡಿತು? ಅವರು ಗೃಹ ಮಂತ್ರಿಯನ್ನೇ ಬದಲಾಯಿಸಿದರು. ಈಗ ಹೇಳಿ, ನಾವು ಇಂಥ ಪರಿಸ್ಥಿತಿಯಲ್ಲಿ ಗೃಹ ಮಂತ್ರಿಯನ್ನು ಬದಲಾಯಿಸಬೇಕೋ, ನಮ್ಮ ನೀತಿಗಳನ್ನು ಬದಲಾಯಿಸಬೇಕೋ ಎಂದು ಮೋದಿ ಪ್ರಶ್ನಿಸಿದರು.
ಕೆಲ ವರ್ಷಗಳಿಗೆ ಮೊದಲು ಗ್ರೇಟರ್ ನೊಯ್ಡಾ, ಹಲವಾರು ಹಗರಣಗಳಿಗೆ ಹೆಸರುವಾಸಿಯಾಗಿತ್ತು. ಈಗ ಹೊಸ ಅವಕಾಶಗಳಿಗೆ, ಹೊಸ ಅಭಿವೃದ್ಧಿಗಳಿಗೆ ಹೆಸರು ಪಡೆದಿದೆ. ಮೇಕ್ ಇಂಡಿಯಾ ಕೇಂದ್ರ ಭಾಗವಾಗಿ ಗ್ರೇಟರ್ ನೊಯ್ಡಾ ಬೆಳೆಯುತ್ತಿದೆ. ಇಡೀ ಉತ್ತರ ಪ್ರದೇಶವೇ ಬದಲಾವಣೆ ಕಾಣುತ್ತಿದೆ ಎಂದು ನರೇಂದ್ರ ಮೋದಿ ಪ್ರಶಂಸಿಸಿದರು.
2014ಕ್ಕೂ ಮೊದಲು ಇಡೀ ದೇಶದಲ್ಲಿ ಕೇವಲ ಎರಡೇ ಎರಡು ಮೊಬೈಲ್ ತಯಾರಕ ಕಂಪನಿಗಳಿದ್ದವು. ಇಂದು ಇಡೀ ದೇಶದಲ್ಲಿ 125ಕ್ಕೂ ಹೆಚ್ಚು ಕಂಪನಿಗಳು ಮೊಬೈಲನ್ನು ತಯಾರಿಸುತ್ತಿವೆ. ಈ 125 ಫ್ಯಾಕ್ಟರಿಗಳಲ್ಲಿ ಹಲವಾರು ಕಂಪನಿಗಳು ನೊಯ್ಡಾದಲ್ಲಿವೆ. ಇಲ್ಲಿಂದ ಸಂಪರ್ಕವನ್ನು ಉತ್ತಮಪಡಿಸಲು ಜೇವರ್ ನಲ್ಲಿ ದೇಶದ ಅತೀದೊಡ್ಡ ಏರ್ಪೋರ್ಟ್ ನಿರ್ಮಾಣವಾಗುತ್ತಿದೆ. ಇದನ್ನು ಅನುಷ್ಠಾನಕ್ಕೆ ತರಲು ಅಂತಿಮ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ ಎಂದು ಅವರು ನುಡಿದರು.
ಬಾಲಕೋಟ್ ದಾಳಿ ಸುಳ್ಳಾ? ಉಪಗ್ರಹ ಚಿತ್ರಗಳು ಹೇಳುವ ಹೊಸಕತೆ ನಿಜಾನಾ?
ನರೇಂದ್ರ ಮೋದಿಯವರು ಪಂಡಿತ್ ದೀನ್ ದಯಾಳ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಯಾಲಜಿ ಸೇರಿದಂತೆ ಹಲವಾರು ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿದರು. ಇದು ಭಾರತದ ಸರ್ವೇಕ್ಷಣ ಇಲಾಖೆಯ ಅಡಿಯಲ್ಲಿ ಬರುತ್ತದೆ. ನೊಯ್ಡಾ ಸಿಟಿ ಸೆಂಟರ್ ಮತ್ತು ನೊಯ್ಡಾ ಎಲೆಕ್ಟ್ರಾನಿಕ್ ಸಿಟಿ ನಡುವಿನ 6.6 ಕಿ.ಮೀ. ಉದ್ದದ ಬ್ಲೂಲೈನ್ ಮೆಟ್ರೋ ಕಾಮಗಾರಿಯನ್ನೂ ಉದ್ಘಾಟಿಸಿದರು.