ಚುನಾವಣಾ ಅಭ್ಯರ್ಥಿ ಆಯ್ಕೆ ಮುನ್ನ ಎಚ್ಚರ ಎಂದ ಸುಪ್ರೀಂಕೋರ್ಟ್
ನವದೆಹಲಿ, ಫೆಬ್ರವರಿ.13: ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ವಿರುದ್ಧ ಬಾಕಿ ಉಳಿದಿರುವ ಪ್ರಕರಣಗಳ ಕುರಿತು ಎಲ್ಲ ರಾಜಕೀಯ ಪಕ್ಷಗಳು ತಮ್ಮ ವೆಬ್ ಸೆಟ್ ಗಳಲ್ಲೇ ಮಾಹಿತಿಯನ್ನು ಅಪ್ ಲೋಡ್ ಮಾಡಬೇಕು ಎಂದು ಸುಪ್ರೀಂಕೋರ್ಟ್ ಖಡಕ್ ಸಂದೇಶ ರವಾನಿಸಿದೆ.
ಬಿಜೆಪಿ ಮುಖಂಡೆ ಹಾಗೂ ವಕೀಲೆ ಅಶ್ವಿನಿ ಕುಮಾರ್ ಉಪಾಧ್ಯಾನ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ನೇತೃತ್ವದ ಪೀಠ ನಡೆಸಿದ್ದು, ಮಹತ್ವದ ಆದೇಶವನ್ನು ಹೊರಡಿಸಿದೆ.
ಸಿಎಎ ವಿರೋಧಿ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಪೊರಕೆಯಲ್ಲಿ ಗುಡಿಸಿದ ಆಪ್
ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ಬಗ್ಗೆ ಮತ್ತು ಅಪರಾಧದ ಪ್ರಕರಣಗಳ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ವೆಬ್ ಸೈಟ್ ನಲ್ಲಿಯೇ ಪ್ರಕಟಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯವು ಸೂಚನೆ ನೀಡಿದೆ.
ಅಪರಾಧ ಹಿನ್ನೆಲೆ ಉಳ್ಳವರಿಗೆ ಟಿಕಟ್ ನೀಡುವುದೇಕೆ?
ರಾಜಕೀಯ ಪಕ್ಷಗಳು ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಉದ್ದೇಶವಾದರೂ ಏನು ಎಂದು ಸುಪ್ರೀಕೋರ್ಟ್ ಪ್ರಶ್ನೆ ಮಾಡಿದೆ. ಒಂದು ವೇಳೆ ಅಂಥ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದಲ್ಲಿ, ಅಪರಾಧ ಪ್ರಕರಣದ ಸಂಪೂರ್ಣ ಹಿನ್ನೆಲೆಯನ್ನು ರಾಜಕೀಯ ಪಕ್ಷಗಳು ತಮ್ಮ ವೆಬ್ ಸೈಟ್ ನಲ್ಲಿ ವಿಸ್ತೃತವಾಗಿ ಪ್ರಕಟಿಸಬೇಕು ಎಂದು ಕೋರ್ಟ್ ಸೂಚಿಸಿದೆ.
ಪಕ್ಷಗಳಿಗೆ ಅಭ್ಯರ್ಥಿ ಆಯ್ಕೆ ಮಾನದಂಡವೇನು?
ಇನ್ನು, ಚುನಾವಣೆಗಳಲ್ಲಿ ಟಿಕೆಟ್ ನೀಡುವ ರಾಜಕೀಯ ಪಕ್ಷಗಳಿಗೆ ಗೆಲ್ಲುವ ಅಭ್ಯರ್ಥಿಗಳು ಎಂಬುದಷ್ಟೇ ಮಾನದಂಡವೇ ಎಂದು ಕೋರ್ಟ್ ಪ್ರಶ್ನೆಸಿದೆ. ಇನ್ನು ಮುಂದೆ ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸುವ ಮೊದಲು, ಆ ಅಭ್ಯರ್ಥಿಯ ಆಯ್ಕೆಗೆ ಕಾರಣವೇನು ಎಂಬುದರ ಬಗ್ಗೆ ಪಕ್ಷವು ಸ್ಪಷ್ಟನೆಯನ್ನು ನೀಡಬೇಕು ಎಂದು ಕೋರ್ಟ್ ಹೇಳಿದೆ.
ಮಾಧ್ಯಮಗಳಿಗೂ ನೀಡಬೇಕು ಸಂಪೂರ್ಣ ಮಾಹಿತಿ
ಒಂದು ವೇಳೆ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಲ್ಲಿ 48 ಗಂಟೆಗಳಲ್ಲೇ ಒಂದು ಸ್ಥಳೀಯ ಮತ್ತು ಒಂದು ರಾಷ್ಟ್ರೀಯ ಪತ್ರಿಕೆ, ಹಾಗೂ ಪಕ್ಷದ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಅಭ್ಯರ್ಥಿಯ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣಗಳ ಮಾಹಿತಿಯ ಬಗ್ಗೆ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಕೋರ್ಟ್ ಸೂಚಿಸಿದೆ.
ಚುನಾವಣಾ ಆಯೋಗಕ್ಕೂ ಸೂಚನೆ ರವಾನಿಸಿದ ಸುಪ್ರೀಂಕೋರ್ಟ್
ಇದರ ಜೊತೆಗೆ ಕೇಂದ್ರ ಚುನಾವಣಾ ಆಯೋಗಕ್ಕೂ ಸುಪ್ರೀಂಕೋರ್ಟ್ ಖಡಕ್ ಸಂದೇಶವೊಂದನ್ನು ರವಾನಿಸಿದೆ. ರಾಜಕೀಯ ಪಕ್ಷಗಳು ಯಾರಿಗೂ ಗೊತ್ತಿರದ ಪತ್ರಿಕೆಗಳಲ್ಲಿ ಈ ಬಗ್ಗೆ ಪ್ರಕಟಿಸುವ ಮೂಲಕ ತಪ್ಪಿಸಿಕೊಳ್ಳುವ ಅಪಾಯವಿದೆ. ಹೀಗಾಗಿ ಯಾವ ಪತ್ರಿಕೆಗಳಲ್ಲಿ ಅಭ್ಯರ್ಥಿಗಳ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಪ್ರಕಟಣೆ ನೀಡಬೇಕು ಎಂಬುದರ ಬಗ್ಗೆ ಕೇಂದ್ರ ಚುನಾವಣಾ ಆಯೋಗವೇ ತೀರ್ಮಾನಿಸಬೇಕು. ಅಧಿಕೃತವಾದ ಪತ್ರಿಕೆಗಳ ಪಟ್ಟಿಯನ್ನು ಆದಷ್ಟು ಬೇಗ ತಯಾರಿಸಿ ನೀಡಬೇಕು ಎಂದು ಕೋರ್ಟ್ ಆಯೋಗಕ್ಕೆ ಸೂಚನೆ ನೀಡಿದೆ.