ವಿದ್ಯುತ್ ಸಂಪರ್ಕ ಇದ್ದರೆ ಸೀಮೆಎಣ್ಣೆ ಕೊಡಲ್ಲ?
ನವದೆಹಲಿ, ಜ. 13: ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಬಂದ ಮೇಲೆ ಹಲವು ಕ್ಷೇತ್ರಗಳಲ್ಲಿ ಹರಿದುಹೋಗುತ್ತಿದ್ದ ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಲು ಸನ್ನದ್ಧವಾಗಿದೆ.
ಶ್ರೀಮಂತರು ಸ್ವಯಂ ಇಚ್ಛೆಯಿಂದ ಸಬ್ಸಿಡಿ ರಹಿತ ಗ್ಯಾಸ್ ಪಡೆಯಲು ಎನ್ಡಿಎ ಕೋರಿತ್ತು. ಆದರೆ, ಈ ಪ್ರಸ್ತಾಪಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಧನಾತ್ಮಕ ಪ್ರತಿಕ್ರಿಯೆ ಬಂದಿರಲಿಲ್ಲ. [ವಿದ್ಯುತ್ ತಯಾರಿಸಿ ಸರ್ಕಾರಕ್ಕೆ ಮಾರಿ]
ಈಗ ಸೀಮೆ ಎಣ್ಣೆ ವಿತರಣೆಯಲ್ಲಿ ಕಟ್ಟುನಿಟ್ಟು ನಿಯಮ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ವಿದ್ಯುತ್ ಸಂಪರ್ಕ ಹೊಂದಿರುವ ಕುಟುಂಬಕ್ಕೆ ಸಬ್ಸಿಡಿ ಸಹಿತ ಸೀಮೆಎಣ್ಣೆ ನೀಡಬಾರದು ಎಂಬ ಪ್ರಸ್ತಾಪವನ್ನು ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ. [ಕರ್ನಾಟಕದಲ್ಲಿ 750 ಮೆ.ವ್ಯಾಟ್ ಸೌರಶಕ್ತಿ ಪಾರ್ಕ್]
ನವದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನ್, ಕಳೆದ ವರ್ಷ ಸೀಮೆಎಣ್ಣೆ ಸಬ್ಸಿಡಿಗೆ ಕೇಂದ್ರ ಸರ್ಕಾರ 30,575 ಕೋಟಿ ರು. ಖರ್ಚು ಮಾಡಿದೆ. ಆದ್ದರಿಂದ 2011ರಲ್ಲಿ ನಡೆದ ಜನಗಣತಿ ವರದಿ ಪ್ರಕಾರ ವಿದ್ಯುತ್ ಸಂಪರ್ಕ ಹೊಂದಿರುವ ಮನೆಗೆ ಸಬ್ಸಿಡಿ ಸಹಿತ ಸೀಮೆಎಣ್ಣೆ ವಿತರಣೆ ನಿಲ್ಲಿಸಬೇಕೆಂಬ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.