ವರುಣ್ ಗಾಂಧಿ 'ಹನಿಟ್ರ್ಯಾಪ್' ಪ್ರಕರಣ: ಸಿಬಿಐ ತನಿಖೆ ಇಲ್ಲ
ನವದೆಹಲಿ, ಅಕ್ಟೋಬರ್, 21: ರಕ್ಷಣಾ ಇಲಾಖೆ ಒಪ್ಪಂದಗಳ ರಹಸ್ಯ ಮಾಹಿತಿ ಪಡೆಯಲು 'ಹನಿ ಟ್ರ್ಯಾಪ್ ' (ಮಹಿಳೆಯರನ್ನು ಬಳಸಿಕೊಂಡು ರಹಸ್ಯ ಬಯಲಿಗೆಳೆಯುವದು) ಮೂಲಕ ಶಸ್ತ್ರಾಸ್ತ್ರ ದಲ್ಲಾಳಿಯೊಬ್ಬರು ಬಿಜೆಪಿ ಸಂಸದ ವರುಣ್ ಗಾಂಧಿಯ ಅವರನ್ನು ಬಳಸಿಕೊಂಡಿದ್ದಾರೆ ಎನ್ನುವ ಆರೋಪವನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ.
ವರುಣ್ ಗಾಂಧಿ ವಿರುದ್ಧ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಆದ್ದರಿಂದ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಹೇಳಿದೆ.
ಈ ಕುರಿತಂತೆ ಮಾಧ್ಯಮಗಳೆದುರು ಯಾವುದೇ ಹೇಳಿಕೆ ನೀಡದಂತೆ ಬಿಜೆಪಿ ನಾಯಕರಿಗೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ.
ಇನ್ನು ಪ್ರಕರಣದಲ್ಲಿ ತನ್ನ ಕೈವಾಡವಿದೆ ಎಂಬ ಆರೋಪದಲ್ಲಿ ಶೇ.1ರಷ್ಟು ಸತ್ಯಾಂಶವಿದೆ ಎಂದಾದಲ್ಲಿ ರಾಜಕೀಯ ನಿವೃತ್ತ ಪಡೆಯುವುದಾಗಿ ಸಂಸದ ವರುಣ್ ಗಾಂಧಿ ತಿಳಿಸಿದ್ದಾರೆ.
ರಕ್ಷಣಾ ಇಲಾಖೆಗೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ವರುಣ್ ಗಾಂಧಿ ನೀಡಿದ್ದಾರೆಂದು, ಅಮೆರಿಕಾ ಮೂಲದ ಎಡ್ಮಂಡ್ ಎಲನ್ ಎಂಬುವವರು ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದರು.
ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಶಸ್ತ್ರಾಸ್ತ್ರ ದಲ್ಲಾಳಿ ಅಭಿಷೇಕ್ ವರ್ವಾ, ವರುಣ್ ಗಾಂಧೀಯವರನ್ನು ಹನಿ ಟ್ರ್ಯಾಪ್ ಮಾಡಿ ಮಹತ್ವದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಎಂದು ಎಡ್ಮಂಡ್ ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.
ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹಾಗೂ ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಅವರು ಗುರುವಾರ ಪತ್ರಿಕಾಗೋಷ್ಟಿ ಎಡ್ಮಂಡ್ ಅವರ ಪತ್ರವನ್ನು ಬಹಿರಂಗಪಡಿಸಿದ್ದರು.