ವಿಐಪಿ ಭದ್ರತಾ ತಂಡದಿಂದ ಎನ್ಎಸ್ಜಿ ಔಟ್: ಕೇಂದ್ರದಿಂದ ಮತ್ತೊಂದು ಮಹತ್ವದ ನಿರ್ಧಾರ
ನವದೆಹಲಿ, ಜನವರಿ 13: ಗಣ್ಯರ ಭದ್ರತೆಯಲ್ಲಿನ ಕಡಿತ ಮತ್ತು ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್ಪಿಜಿ ಭದ್ರತೆ ವಾಪಸ್ ಕ್ರಮದ ಬಳಿಕ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ವಿಐಪಿ ಭದ್ರತೆಗೆ ನಿಯೋಜನೆಗೊಂಡಿರುವ ಸಿಬ್ಬಂದಿ ತಂಡದಿಂದ ಎನ್ಎಸ್ಜಿ ಕಮಾಂಡೋಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
SPG ಪಾಸ್: ರಾಜ್ಯಸಭೆಯಲ್ಲಿ ರಗಡ್ ಗಲಾಟೆ, ಕಾಂಗ್ರೆಸ್ ಸಭಾತ್ಯಾಗ!
ಅತ್ಯುನ್ನತ ಭಯೋತ್ಪಾದನಾ ನಿಗ್ರಹ ದಳದ ಬ್ಲ್ಯಾಕ್ ಕ್ಯಾಟ್ ಕಮಾಂಡೋಗಳನ್ನು ಸುಮಾರು ಎರಡು ದಶಕಗಳ ಬಳಿಕ ವಿಐಪಿ ರಕ್ಷಣಾ ಕರ್ತವ್ಯದಿಂದ ಹಿಂಪಡೆಯಲಾಗುತ್ತಿದೆ. 1984ರಲ್ಲಿ ಈ ದಳವನ್ನು ಆರಂಭಿಸಿದಾಗ ಅದರ ಆದ್ಯತೆಗಳಲ್ಲಿ ವಿಐಪಿಗಳ ಭದ್ರತೆ ಇರಲಿಲ್ಲ.
ಈ ನಿರ್ಧಾರದಿಂದ ಸುಮಾರು 450 ಕಮಾಂಡೋಗಳನ್ನು ವಿಐಪಿ ಭದ್ರತಾ ಕಾರ್ಯದಿಂದ ಮುಕ್ತಗೊಳಿಸಲಾಗುತ್ತದೆ. ಅವರು ದೆಹಲಿ ಸಮೀಪದ ಗುರುಗ್ರಾಮದಲ್ಲಿರುವ ಮುಖ್ಯ ಕಚೇರಿ ಅಥವಾ ದೇಶದ ವಿವಿಧ ಭಾಗಗಳಲ್ಲಿರುವ ಐದು ಭಯೋತ್ಪಾದನಾ ನಿಗ್ರಹ ಘಟಕಗಳನ್ನು ಸೇರಿಕೊಳ್ಳಲಿದ್ದಾರೆ.
ಬಿಜೆಪಿ ನಾಯಕರಿಗೂ ಇಲ್ಲ ಎನ್ಎಸ್ಜಿ
ಝೆಡ್ ಪ್ಲಸ್ ಭದ್ರತೆ ಒದಗಿಸಿರುವ ಅತ್ಯಧಿಕ ಅಪಾಯವಿರುವ 13 ವಿಐಪಿಗಳಿಗೆ ಪ್ರತಿಯೊಬ್ಬರಿಗೂ ಸುಮಾರು ಎರಡು ಡಜನ್ ಅತ್ಯಾಧುನಿಕ ಶಸ್ತ್ರಗಳನ್ನು ಹೊಂದಿರುವ ಕಮಾಂಡೋಗಳಿಗೆ ಅತಿ ಬಿಗಿ ಭದ್ರತೆಯನ್ನು ಒದಗಿಸಲಾಗುತ್ತಿದೆ. ಈ ನಿರ್ಧಾರದಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ವಿವಿಧ ಗಣ್ಯರಿಗೆ ನೀಡಿರುವ ಎನ್ಎಸ್ಜಿಯ ಭದ್ರತೆಯನ್ನು ತೆಗೆದುಹಾಕಿ ಅವರನ್ನು ಅರೆ ಸೇನಾ ಪಡೆಗಳಿಗೆ ಶೀಘ್ರದಲ್ಲಿಯೇ ವರ್ಗಾಯಿಸಲಾಗುತ್ತದೆ.
ಮಾಜಿ ಸಿಎಂಗಳಿಗೂ ಎನ್ಎಸ್ಜಿ ಭದ್ರತೆ
ಮಾಜಿ ಮುಖ್ಯಮಂತ್ರಿಗಳಾದ ಮಾಯಾವತಿ, ಮುಲಾಯಂ ಸಿಂಗ್ ಯಾದವ್, ಚಂದ್ರಬಾಬು ನಾಯ್ಡು, ಪ್ರಕಾಶ ಸಿಂಗ್ ಬಾದಲ್ ಮತ್ತು ಫಾರೂಕ್ ಅಬ್ದುಲ್ಲಾ, ಅಸ್ಸಾಂ ಮುಖ್ಯಮಂತ್ರಿ ಶರ್ಬಾನಂದ ಸೋನೊವಾಲ್, ಬಿಜೆಪಿ ನಾಯಕ ಎಲ್ಕೆ ಅಡ್ವಾಣಿ ಅವರಿಗೆ ಎನ್ಎಸ್ಜಿ ಭದ್ರತೆಯನ್ನು ಒದಗಿಸಲಾಗುತ್ತಿದೆ.
ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ: ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್ಪಿಜಿ ಭದ್ರತೆ ವಾಪಸ್
ಎನ್ಎಸ್ಜಿ ಉದ್ದೇಶ ಸೀಮಿತ
ರಾಷ್ಟ್ರೀಯ ಭದ್ರತಾ ಕಾವಲುಪಡೆ (ಎನ್ಎಸ್ಜಿ) ಭಯೋತ್ಪಾದನಾ ನಿಗ್ರಹ ಮತ್ತು ಹೈಜಾಕ್ ನಿಗ್ರಹ ಕಾರ್ಯಾಚರಣೆಗಳಿಗಾಗಿ ಸ್ಥಾಪಿತವಾಗಿದೆ. ಅದನ್ನು ಅತಿ ಹೆಚ್ಚು ಅಪಾಯವಿರುವ ವಿಐಪಿಗಳ ಭದ್ರತೆಗೆ ನಿಯೋಜಿಸುತ್ತಿರುವುದು ಅದರ ವಿಶೇಷ ಸಾಮರ್ಥ್ಯ ಹಾಗೂ ಉದ್ದೇಶವನ್ನು ಸೀಮಿತಗೊಳಿಸಿದಂತಾಗುತ್ತದೆ ಹಾಗೂ ಇದು ಅಧಿಕ ಹೊರೆಯಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಅಭಿಪ್ರಾಯಪಟ್ಟಿದೆ.
ಅರೆಸೇನಾ ಪಡೆಗೆ ವರ್ಗಾವಣೆ
ಇನ್ನೊಂದು ಯೋಜನೆಯಂತೆ ಎನ್ಎಸ್ಜಿ ಭದ್ರತೆಯಲ್ಲಿದ್ದ ಎನ್ಎಸ್ಜಿಗಳನ್ನು ಸಿಆರ್ಪಿಎಫ್ನ ಅರೆಸೇನಾ ಪಡೆ ಅಥವಾ ಸುಮಾರು 130 ಪ್ರತಿಷ್ಠಿತ ವ್ಯಕ್ತಿಗಳಿಗೆ ಜಂಟಿಯಾಗಿ ಭದ್ರತೆ ಒದಗಿಸುತ್ತಿರುವ ಸಿಐಎಸ್ಎಫ್ಗೆ ವರ್ಗಾಯಿಸುವ ಸಾಧ್ಯತೆಯೂ ಇದೆ. ಎನ್ಎಸ್ಜಿ ರಚನೆಯ ಉದ್ದೇಶವೇ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆ. ಅದನ್ನು ಬಿಟ್ಟು ಬೇರೆ ಉದ್ದೇಶಕ್ಕೆ ಅವರನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಎನ್ಎಸ್ಜಿಯ ಮೂಲ ಉದ್ದೇಶಕ್ಕೆ ಅವರನ್ನು ಬಳಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.