ಅಕ್ರಮ ವಲಸಿರನ್ನು ಮುಲಾಜಿಲ್ಲದೆ ಗಡಿಪಾರು ಮಾಡಲು ಮುಂದಾದ ಅಮಿತ್ ಶಾ
ನವದೆಹಲಿ, ಜುಲೈ 17: ದೇಶದಲ್ಲಿರುವ ಅಕ್ರಮ ವಲಸಿಗರನ್ನು ಗುರುತಿಸಿ ಅವರನ್ನು ಹೊರಗಟ್ಟುವುದಾಗಿ ರಾಜ್ಯ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.
ರಾಷ್ಟ್ರೀಯ ಪೌರತ್ವ ನೋಂದಣಿ ಅಥವಾ ಎನ್ ಆರ್ ಸಿಯನ್ನು ಎಲ್ಲಾ ರಾಜ್ಯಗಳಿಗೂ ವಿಸ್ತರಿಸಲಾಗುತ್ತದೆಯೇ ಎಂದು ಸಮಾಜವಾದಿ ಪಕ್ಷದ ಮುಖಂಡ ಜಾವೇದ್ ಅಲಿ ಖಾನ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, "ಇದು ಸತ್ಯಂತ ಒಳ್ಳೆಯ ಪ್ರಶ್ನೆ. ಮೊದಲಿಗೆ ಇದು ಕೇವಲ ಅಸ್ಸಾಂಗೆ ಮಾತ್ರ ಸೀಮಿತವಾಗಿತ್ತು. ಆದರೆ ಬಿಜೆಪಿ ತನ್ನ ಚುನಾವಣೆ ಪ್ರಣಾಳಿಕೆಯಲ್ಲೂ ಎನ್ ಆರ್ ಸಿ ಬಗ್ಗೆ ಉಲ್ಲೇಖಿಸಿತ್ತು. ಆದ್ದರಿಂದ ನಾವು ದೇಶದ ಇಂಚಿಂಚಿನಲ್ಲೂ ಇರುವ ಅಕ್ರಮ ವಲಸಿಗರನ್ನು ಗುರುತಿಸಿ, ಅವರನ್ನು ಅಂತಾರಾಷ್ಟ್ರೀಯ ಕಾನೂನಿಗೆ ತಕ್ಕ ಹಾಗೆ ಗಡಿಪಾರು ಮಾಡುತ್ತೇವೆ" ಎಂದು ಅಮಿತ್ ಶಾ ಹೇಳಿದರು.
ಅಸ್ಸಾಮಿನಲ್ಲಿ ಸಿದ್ಧಪಡಿಸಲಾದ ಎನ್ ಆರ್ ಸಿ ಪಟ್ಟಿಯ ಪರಿಷ್ಕೃತ ಪಟ್ಟಿ ಬಿಡುಗಡೆಗೆ ಜುಲೈ 31 ಕೊನೆಯ ದಿನಾಂಕವಾಗಿದ್ದು, ಈ ದಿನಾಂಕವನ್ನು ಮುಂದೂಡುವಂತೆ ಈಗಾಗಲೇ ಸುಮಾರು 25 ಲಕ್ಷಕ್ಕೂ ಹೆಚ್ಚು ಜನ ಸಹಿ ಮಾಡಿದ ಪತ್ರ ರಾಷ್ಟ್ರಪತಿ ಮತ್ತು ಕೇಂದ್ರ ಸರ್ಕಾರಕ್ಕೆ ಬಂದಿದೆ.
2013 ರಲ್ಲಿ ಸುಪ್ರೀಂಕೋರ್ಟ್ ನೀಡಿದ ಆದೇಶದಂತೆ 2018 ರ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ ಎನ್ಆರ್ಸಿ ಪರಿಷ್ಕರಣೆ ಮಾಡಿತ್ತು. 1951ರ ಬಳಿಕ ರಾಷ್ಟ್ರೀಯ ಪೌರತ್ವ ನೋಂದಣಿ ಪರಿಷ್ಕರಣೆಯಾಗುತ್ತಿರುವ ಮೊದಲ ರಾಜ್ಯ ಅಸ್ಸಾಂ ಆಗಿತ್ತು. ಬಾಂಗ್ಲಾದೇಶ(ಪಾಕಿಸ್ತಾನದಿಂದ ಬೇರ್ಪಟ್ಟು) ಪ್ರತ್ಯೇಕ ದೇಶವಾದ ನಂತರ ಬಾಂಗ್ಲಾದಿಂದ ಅಸ್ಸಾಂಮಿಗೆಅಕ್ರಮ ವಲಸೆ ಆರಂಭವಾಗಿತ್ತು. ಅದು ಇಂದಿಗೂ ಮುಂದುವರಿದಿದ್ದು, ಇದು ದೇಶದ ಭದ್ರತೆಗೆ ಕಂಟಕ ಎಂಬ ಮಾತು ಕೇಳಿಬರುತ್ತಿದೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಸೂಕ್ತ ಗುರುತಿನ ಚೀಟಿಯೊಂದಿಗೆ ಭಾರತೀಯರು ಎಂದು ಗುರುತಿಸಿಕೊಂಡವರಷ್ಟೇ ಈ ಪಟ್ಟಿಯಲ್ಲಿರುತ್ತಾರೆ. ಈ ಪಟ್ಟಿಯಲ್ಲಿಲ್ಲದವರನ್ನು ವಿದೇಶಿಯರು ಎಂದು ಪರಿಗಣಿಸಿ ಅವರನ್ನು ದೇಶದಿಂದ ಗಡಿಪಾರು ಮಾಡಲಾಗುತ್ತದೆ.
ಇತ್ತೀಚೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರೂ ಸಂಸತ್ತಿನಲ್ಲಿ ಇದೇ ವಿಷಯದ ಬಗ್ಗೆ ಮಾತನಾಡಿದ್ದನ್ನು ಇಲ್ಲಿ ಉಲ್ಲೇಖಸಬಹುದು. ಬೆಂಗಳೂರಿನಲ್ಲೂ ಸಾವಿರಾರು ಸಂಖ್ಯೆಯಲ್ಲಿ ಅಕ್ರಮ ವಲಸಿಗರಿದ್ದಾರೆ ಎನ್ನುವ ಮೂಲಕ ಅವರು ಕಳವಳ ವ್ಯಕ್ತಪಡಿಸಿದ್ದರು.