ಕೋವಿಡ್ ಹೋರಾಟದಲ್ಲಿ ರೈಲ್ವೇ ಕೊಡುಗೆಯನ್ನು ಇತಿಹಾಸ ಸ್ಮರಿಸುತ್ತದೆ: ಪಿಯೂಷ್ ಗೋಯೆಲ್
ನವದೆಹಲಿ, ಮೇ 27: ಕೊರೊನಾ ವೈರಸ್ನ ಸಂಕಷ್ಟದ ಸಂದರ್ಭದಲ್ಲಿ ಭಾರತೀಯ ರೈಲ್ವೇ ಬಹಳ ದೊಡ್ಡ ಕೊಡುಗೆಯನ್ನು ನೀಡುತ್ತಿದೆ. ಈ ಅಮೋಘ ಕೊಡುಗೆಯನ್ನು ಇತಿಹಾಸ ಸ್ಮರಿಸಿಕೊಳ್ಳಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯೆಲ್ ಹೇಳಿದ್ದಾರೆ.
ವಲಯ ಮತ್ತು ವಿಭಾಗೀಯ ಮಟ್ಟದ ರೈಲ್ವೆ ಮಂಡಳಿಗಳ ಅಧ್ಯಕ್ಷರು ಮತ್ತು ಉನ್ನತಾಧಿಕಾರಿಗಳ ಜೊತೆ ಸಭೆ ನಡೆಸಿ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕೋವಿಡ್-19 ಸಂಕಷ್ಟ ಎದುರಾದ ಕಳೆದ 14 ತಿಂಗಳಿಂದ ಭಾರತೀಯ ರೈಲ್ವೆಯು ದೇಶದ ಜನತೆಗೆ ಅತ್ಯುನ್ನತ ಮಟ್ಟದ ನೈತಿಕ ಬಲ ಮತ್ತು ಸಾಮರ್ಥ್ಯದೊಂದಿಗೆ ಬೆಂಬಲವಾಗಿ ನಿಂತಿದೆ. ಭಾರತೀಯ ರೈಲ್ವೇ ಸಮರ್ಪಕವಾದ ನಿರ್ವಹಣೆಯ ಜೊತೆಗೆ ದೇಶ ಪ್ರಗತಿಯ ಪಥದಲ್ಲಿ ಸಾಗುವುದನ್ನು ಕೂಡ ಇದು ಖಚಿತಪಡಿಸಿದೆ ಎಂದು ರೈಲ್ವೇ ಸಚಿವ ಪಿಯೂಷ್ ಗೋಯೆಲ್ ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ದಾಖಲೆಯ ಪ್ರಮಾಣದಲ್ಲಿ ಒದಗಿಸಲಾಗಿರುವ ಬಂಡವಾಳ ವೆಚ್ಚವನ್ನು ಮೂಲಸೌಕರ್ಯ ಅಭಿವೃದ್ಧಿಗಾಗಿ ಸಂಪೂರ್ಣ ಬಳಸಿಕೊಳ್ಳುವಂತೆ ಸಚಿವ ಪಿಯುಷ್ ಗೋಯಲ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಮೂಲಸೌಕರ್ಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದರಿಂದ ವಿಶೇಷವಾಗಿ ಕೋವಿಡ್ ಸವಾಲಿನ ಕಾಲದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು
ರೈಲ್ವೇಯ ಯಶಸ್ಸಿಗೆ ಪ್ರತಿಯೊಬ್ಬರೂ ಬದ್ಧ
ಈ ವೇಳೆ ರೈಲ್ವೇ ಸಚಿವ ಪಿಯೂಷ್ ಗೋಯೆಲ್ ದೇಶಕ್ಕಾಗಿ ಸೇವೆ ಸಲ್ಲಿಸುವಾಗ ಜೀವ ಕಳೆದುಕೊಂಡ ರೈಲ್ವೆ ಉದ್ಯೋಗಿಗಳಿಗೆ ಇಡೀ ದೇಶವೇ ಕೃತಜ್ಞತೆ ಮತ್ತು ಸಂತಾಪಗಳನ್ನು ಸೂಚಿಸುತ್ತಿದೆ ಎಂದಿದ್ದಾರೆ. ಭಾರತೀಯ ರೈಲ್ವೆ ಕೇವಲ ಪ್ರಯಾಣಿಕ ಮತ್ತು ಸರಕು ಸಾಗಿಸುವ ಸಾರಿಗೆ ಸಂಸ್ಥೆ ಆಗಿರದೆ ಪ್ರಗತಿಯ ಚಾಲನಾ ಶಕ್ತಿಯಾಗಿ ಪರಿವರ್ತನೆಯಾಗುತ್ತಿದೆ. ಭಾರತೀಯ ರೈಲ್ವೆಯ ಯಶಸ್ಸಿಗೆ ದೇಶದ ಪ್ರತಿಯೊಬ್ಬರೂ ಬದ್ಧರಾಗಿದ್ದು ಅದನ್ನು ಸ್ವಯಂ ಸುಸ್ಥಿರ ಸಂಸ್ಥೆಯಾಗಿ ಬೆಳೆಸುತ್ತಿದ್ದಾರೆ ಎಂದು ಗೋಯಲ್ ತಿಳಿಸಿದರು.
ಗುಣಮಟ್ಟದ ಸೇವೆಗೆ ಶ್ಲಾಘನೆ
ಎಕ್ಸ್ಪ್ರೆಸ್ ರೈಲುಗಳು ಅಸಾಮಾನ್ಯ ಸ್ವರೂಪದಲ್ಲಿ ದೇಶಕ್ಕೆ ಸೇವೆ ಸಲ್ಲಿಸುತ್ತಿವೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತೀಯ ರೈಲ್ವೆಯು ಪರಿಸ್ಥಿತಿಯನ್ನೇ ಬದಲಿಸುವ ಪಾತ್ರ ನಿರ್ವಹಿಸಿದೆ. ರೈಲ್ವೆಯ ತ್ವರಿತ ಸ್ಪಂದನೆ ಮತ್ತು ಗುಣಮಟ್ಟದ ಸೇವೆಯನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತರು ಸಲ್ಲಿಸುತ್ತಿರುವ ಸೇವೆ ಸ್ಮರಣೀಯ ಎಂದು ಅವರು ನೆನಪು ಮಾಡಿಕೊಂಡರು.
ರೈಲ್ವೆಯು ತನ್ನ ಕಾರ್ಯಾಚರಣೆಯಲ್ಲಿ ಮಾನವ ಸಂಪನ್ಮೂಲ ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾರ್ಯಗಾರಗಳಲ್ಲಿ ಸುಧಾರಣೆ ತರಲು ಸಾಕಷ್ಟು ಅವಕಾಶಗಳಿವೆ ಎಂದರು.
ರೈಲ್ವೇ ಸೇವೆಯ ಮನಸ್ಥಿತಿ ಬದಲಾವಣೆ
ಭಾರತೀಯ ರೈಲ್ವೆಯು ಪ್ರಬಲವಾಗಿ ಹೋರಾಡಿ ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮುವ ಸಂಕಲ್ಪವನ್ನು ಕೋವಿಡ್ ಸವಾಲುಗಳೇ ಸೃಷ್ಟಿಸಿವೆ. ಇದರಿಂದ ರೈಲ್ವೆ ಮನಸ್ಥಿತಿ ಸಂಪೂರ್ಣ ಪರಿವರ್ತನೆಯಾಗಿದ್ದು ಹಿಂದಿನ ವ್ಯವಹಾರದ ರೂಪದಲ್ಲಿ ಉಳಿದಿಲ್ಲ. ಅದರ ವ್ಯವಹಾರ ಮತ್ತು ಸೇವಾ ವ್ಯಾಪ್ತಿ ಸಂಪೂರ್ಣ ಪರಿವರ್ತನೆಯಾಗಿದೆ ಎಂದು ಸಚಿವರು ತಿಳಿಸಿದರು.
ಬೆಳವಣಿಗೆಗೆ ಅಧಿಕಾರಿ ವರ್ಗ ಕಾರಣ
ರೈಲ್ವೆ ಅಸಾಧಾರಣ ತ್ವರಿತಗತಿಯಲ್ಲಿ ಚೇತರಿಕೆ ತೋರಲು ಅಧಿಕಾರಿ ವರ್ಗ ಕಾರಣ ಎಂದು ಸಚಿವರು ಅಭಿನಂದಿಸಿದ್ದಾರೆ. ಭಾರತೀಯ ರೈಲ್ವೆ ಸರಕು ಸಾಗಣೆಯಲ್ಲಿ ಎರಡಂಕಿ ಬೆಳವಣಿಗೆ ಸಾಧಿಸಲು ಅವರ ಶ್ರಮ ಮಹತ್ವದ ಪಾತ್ರವಹಿಸಿದೆ ಎಂದು ಶ್ಲಾಘಿಸಿದರು. 2019-20ರ ಸಾಮಾನ್ಯ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ರೈಲ್ವೆಯು ಸರಕು ಸಾಗಣೆಯಲ್ಲಿ 10%ಗಿಂತ ಹೆಚ್ಚಿನ ಆದಾಯ ದಾಖಲಿಸಿದೆ. 2021-22ರ ಪ್ರಸಕ್ತ ಸಾಲಿನಲ್ಲಿ ಭಾರತೀಯ ರೈಲ್ವೆ 203.88 ದಶಲಕ್ಷ ಟನ್ ಸರಕು ಸಾಗಿಸಿ, ಶೇಕಡ 10ರಷ್ಟು ಹೆಚ್ಚಿನ ಸರಕು ಸಾಗಿಸಿದೆ. ಕಳದ ವರ್ಷ 184.88 ದಶಲಕ್ಷ ಟನ್ ಸರಕು ಸಾಗಿಸಿತ್ತು.