ಐತಿಹಾಸಿಕ ದೋಷವೊಂದನ್ನು ಸರಿಪಡಿಸಲಾಗಿದೆ; ಬಾಬ್ರಿ ಬಗ್ಗೆ ಜಾವಡೇಕರ್ ಹೇಳಿಕೆ
ನವದೆಹಲಿ, ಜನವರಿ 25: "ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಹಲವು ಧರ್ಮದ ಜನರು ಬೆಂಬಲ ನೀಡುತ್ತಿದ್ದಾರೆ. ರಾಮಮಂದಿರ ದೇಶದ ಏಕತೆಯ ದೇಗುಲವಾಗಲಿದೆ" ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸಂತಸ ವ್ಯಕ್ತಪಡಿಸಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಹೆಚ್ಚಿನ ಮೊತ್ತವನ್ನು ದೇಣಿಗೆ ನೀಡಿರುವವರಿಗೆ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದು, ಈ ಸಂದರ್ಭ ಮಾತನಾಡಿದ ಅವರು, "ರಾಮ ಜನ್ಮಭೂಮಿ ಆಂದೋಲನ" ದೇಶದ ಸ್ವಗೌರವದ ಆಂದೋಲನ. ಮುಂದೆ ತಲೆ ಎತ್ತಲಿರುವ ರಾಮ ಜನ್ಮಭೂಮಿ ದೇಶದ ಏಕತೆ ಸಾರುವ ದೇಗುಲವಾಗಲಿದೆ. ದೇಶವನ್ನು ರಾಮ ಐಕ್ಯಗೊಳಿಸಿದ್ದಾನೆ ಹಾಗೂ ದೇಶದ ಏಕತೆಯನ್ನು ಪ್ರತಿನಿಧಿಸುತ್ತಿದ್ದಾನೆ" ಎಂದರು.
ರಾಮ ಮಂದಿರ ನಿರ್ಮಾಣ ಯಾವಾಗ ಪೂರ್ಣ, ತಗುಲುವ ವೆಚ್ಚವೆಷ್ಟು?
"ಇಡೀ ದೇಶದ ಶಕ್ತಿ ಅಯೋಧ್ಯೆ ರಾಮ ಮಂದಿರದಲ್ಲಿದೆ ಎಂದು ತಿಳಿದುಕೊಂಡಿದ್ದ ಬಾಬರ್, ಮಂದಿರವನ್ನು ಕೆಡವಲು ನೋಡಿದ. ಆನಂತರ 1992ರ ಡಿ.6 ರಂದು ದೊಡ್ಡ ಐತಿಹಾಸಿಕ ದೋಷವನ್ನು ಸರಿಪಡಿಸಲಾಯಿತು" ಎಂದು ಬಾಬ್ರಿ ಮಸೀದಿ ಬಗ್ಗೆ ಹೇಳಿದ್ದಾರೆ. ಜನರಿಗೆ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲು ಹೇಳಿದರೆ, ಸಂತೋಷವಾಗಿ ದೇಣಿಗೆ ನೀಡುತ್ತಾರೆ. ಹತ್ತು ರೂಪಾಯಿಯಿಂದ ಆರಂಭವಾಗಿ ಹತ್ತು ಕೋಟಿ ರೂಪಾಯಿವರೆಗೂ ದೇಣಿಗೆ ನೀಡುತ್ತಿದ್ದಾರೆ ಎಂದರು.
ಕೇಂದ್ರ ಸಚಿವ ಜಾವಡೇಕರ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ, ಅಯೋಧ್ಯೆ ಪ್ರಕರಣದ ಕಕ್ಷಿದಾರರೂ ಆಗಿದ್ದ ಇಕ್ಬಾಲ್ ಅನ್ಸಾರಿ, "ರಾಜಕಾರಣಿಗಳು ಈ ರೀತಿಯ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುತ್ತಾರೆ. ಏನಾಯಿತೋ ಅದನ್ನು ಮತ್ತೆ ಕೆಣಕಬಾರದು. ಹೀಗೆ ಮಾಡಿದರೆ ಜನರು ಹಳೆಯದನ್ನು ನೆನೆಸಿಕೊಂಡು ಮತ್ತೆ ಉದ್ರೇಕಗೊಳ್ಳುತ್ತಾರೆ. ರಾಜಕಾರಣಿಗಳು ಹಿಂದೂ ಹಾಗೂ ಮುಸ್ಲಿಮರ ನಡುವಿನ ಏಕತೆ ಬಗ್ಗೆಯಷ್ಟೇ ಮಾತನಾಡಿದರೆ ಒಳ್ಳೆಯದು" ಎಂದು ಹೇಳಿದ್ದಾರೆ.