ಪಿಐಒ ಸಮ್ಮೇಳನದಲ್ಲಿ ಮೋದಿ ಮಾತಿನ ಮೋಡಿ: ಮುಖ್ಯಾಂಶ
ನವದೆಹಲಿ, ಜನವರಿ 09: 'ಭಾರತ ಪರಿವರ್ತನೆಯಾಗುತ್ತಿದೆ ಮತ್ತು ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಗುರುತಿಸಿಕೊಳ್ಳುತ್ತಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೆಮ್ಮೆಯಿಂದ ಹೇಳಿದರು.
ನವದೆಹಲಿಯ ಪ್ರವಾಸಿ ಭಾರತೀಯ ಕೇಂದ್ರದಲ್ಲಿ ಇಂದು (ಜ.09) ನಡೆದ ಪ್ರಪ್ರಥಮ ಪಿಐಒ(Persons of Indian Origin) ಪಾರ್ಲಿಮೆಂಟರಿ ಕಾಪ್ಫರೆನ್ಸ್ ಉದ್ದೇಶಿಸಿ ಮಾತನಾಡಿದ ಅವರು, 'ನಾವು ಸುಧಾರಣೆಯನ್ನು ಆರಂಭಿಸದ ಯಾವುದೇ ಕ್ಷೇತ್ರವೂ ಇಲ್ಲ' ಎಂದರು.
ವಿವೇಕಾನಂದರ ಮರು ಜನ್ಮವೇ ನರೇಂದ್ರ ಮೋದಿಯೇ?: ಜಾತಕ ವಿಶ್ಲೇಷಣೆ
'ರಾಷ್ಟ್ರ ಬದಲಾವಣೆಯತ್ತ ಹೊರಳುತ್ತಿರುವುದರಿಂದ ಭಾರತೀಯರ ಗುರಿ ಮತ್ತು ಆಶೋತ್ತರಗಳೂ ಉನ್ನತವಾಗಿವೆ. ಯಾವ ಭಾರತೀಯರು ಭಾರತದಿಂದ ಹೊರಗಿದ್ದಾರೋ, ಅವರ್ಯಾರೂ ಭಾರತವನ್ನು ಮರೆತಿಲ್ಲ. ಅವರು ಎಂದಿಗೂ ತಮ್ಮೊಂದಿಗೆ ಬಾರತೀಯ ಮೌಲ್ಯಗಳನ್ನು ಉಳಿಸಿಕೊಂಡಿದ್ದಾರೆ' ಎಂದು ಅನಿವಾಸಿ ಭಾರತೀಯರ ಕುರಿತೂ ಅಭಿಮಾನ ವ್ಯಕ್ತಪಡಿಸಿದರು.
ಪ್ರತಿವರ್ಷ ಜನವರಿ 9 ನ್ನು ಪ್ರವಾಸಿ ಭಾರತೀಯ ದಿವಸವನ್ನಾಗಿ ಆಚರಿಸಲಾಗುತ್ತದೆ. ವಿದೇಶದಲ್ಲಿ ನೆಲೆಸಿರುವ, ಭಾರತೀಯ ಮೂಲದ ವ್ಯಕ್ತಿಗಳು ತಮ್ಮ ಮಾತೃದೇಶಕ್ಕೆ ನೀಡಿದ ಕೊಡುಗೆಯನ್ನು ನೆನಪಿಸಿಕೊಳ್ಳುವುದು ಈ ದಿನದ ಉದ್ದೇಶ. ಈ ಕಾರ್ಯಕ್ರಮಕ್ಕೆ ಇಂಗ್ಲೆಂಡ್, ಕೆನಡಾ, ಫಿಜಿ, ಕೀನ್ಯಾ, ಮಾರಿಶಿಯಸ್, ನ್ಯೂಜಿಲೆಂಡ್, ಶ್ರೀಲಂಕಾದ 124 ಸಂಸದರು, ಅಮೆರಿಕ, ಮಲೇಶಿಯ, ಸ್ವಿಟ್ಜರ್ಲೆಂಡ್, ಗುಯಾನ, ಟಿರ್ನಿಡಾಡ್ ಗಳಿಂದ 17 ಮೇಯರ್ ಗಳು ಭಾಗವಹಿಸಿದ್ದರು.
ಈ ಬಾರಿ ಕೇಂದ್ರ ಬಜೆಟ್ ನಲ್ಲಿ ಮೋದಿ ಐಡಿಯಾಗಳೇ ಹೆಚ್ಚಿರುತ್ತವೆಯೇ?
ಈ ಸಮ್ಮೇಳನದಲ್ಲಿ ಪ್ರಧಾನಿ ಮೋದಿಯವರ ಭಾಷಣದ ಮುಖ್ಯಾಂಶ ಇಲ್ಲಿದೆ.(ಚಿತ್ರಕೃಪೆ: ಎಎನ್ ಐ)
ಮಿನಿ ಪಾರ್ಲಿಮೆಂಟ್ ನನ್ನ ಮುಂದಿದೆ!
'ಈ ಸಮ್ಮೇಳನದಲ್ಲಿ ನಾನು ರಾಜಕೀಯದ ಬಗ್ಗೆ ಮಾತನಾಡುವುದಕ್ಕೆ ಹೋದರೆ, ನನ್ನ ಎದುರಲ್ಲಿ ಭಾರತೀಯ ಮೂಲದ ಒಂದು ಸಣ್ಣ ಪಾರ್ಲಿಮೆಂಟೇ ಇದ್ದಂತೆ ಕಾಣುತ್ತಿದೆ' ಎಂದು ಮಾತು ಆರಂಭಿಸಿದ ಮೋದಿ, 'ನೀವೆಲ್ಲ ಇಲ್ಲಿ ಕುಳಿತಿರುವುದನ್ನು ನಿಮ್ಮ ಪೂರ್ವಜರು ನೋಡಿದರೆ ಎಷ್ಟು ಖುಷಿ ಪಡಬಹುದು ಎಂದು ನಾನು ಕಲ್ಪಿಸಿಕೊಳ್ಳುತ್ತಿದ್ದೇನೆ' ಎಂದರು.
ಭಾರತ ಗುರುತಿಸಿಕೊಳ್ಳುತ್ತಿದೆ!
"ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಗುರುತಿಸಿಕೊಳ್ಳುತ್ತಿದೆ. ವಿಶ್ವ ಬ್ಯಾಂಕ್, ಐಎಂಎಫ್, ಮೂಡಿ ಸಹ ಭಾರತದತ್ತ ವಿಶ್ವಾಸದಿಂದ ನೋಡುತ್ತಿವೆ. ಭಾರತ ಬದಲಾಗಿರುವುದರಿಂದ ಇಲ್ಲಿನ ಜನರ ಗುರಿ ಮತ್ತು ಆಶೋತ್ತರಗಳೂ ಉನ್ನತವಾಗಿವೆ. 'ಚಲ್ತಾ ಹೇ' ಎಂಬ ಮನೋಭಾವದಿಂದ ಭಾರತೀಯರು ಹೊರಬಂದಿದ್ದಾರೆ"
ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನ
21 ನೇ ಶತಮಾನದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡಿರುವ ಸರ್ಕಾರ ತಂತ್ರಜ್ಞಾನ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಹೆಚ್ಚಿನ ಬಂಡವಾಳ ಹೂಡಿದೆ. ಕಳೆದ ಮೂರು ವರ್ಷಗಳಲ್ಲಿ ನಿರ್ಮಾಣ ಕಾರ್ಯ, ವಾಯುಸಾರಿಗೆ, ಗಣಿ, ಕಂಪ್ಯೂಟರ್ ಸಾಫ್ಟ್ ವೇರ್, ಹಾರ್ಡ್ ವೇರ್, ಇಲೆಕ್ಟ್ರಿಕಲ್ ಸಾಧನಗಳು ಸೇರಿದಮತೆ ಅರ್ಧಕ್ಕೂ ಹೆಚ್ಚು ಬಂಡವಾಳವನ್ನು ಸರ್ಕಾರ ಈ ಕ್ಷೇತ್ರಗಳಿಗೆ ಹಾಕಿದೆ.
ನೆರೆ ರಾಷ್ಟ್ರಗಳಿಗೆ ನೆರವಿನ ಹಸ್ತ
"ನೇಪಾಳದ ಭೂಕಂಪ, ಶ್ರೀಲಂಕಾದ ಪ್ರವಾಹ, ಮಾಲ್ಡಿವ್ಸ್ ನ ಸಮಸ್ಯೆಗಳಿಗೆ ಎಲ್ಲ ರಾಷ್ಟ್ರಗಳಿಗಿಂತಲೂ ಮೊದಲು ಸ್ಪಂದಿಸಿದ್ದು ಭಾರತ. ಯಮನ್ ನಲ್ಲಿ ಸಿಲುಕಿಕೊಂದಿದ್ದ 4500 ಭಾರತೀಯರನ್ನು ರಕ್ಷಿಸಿದ್ದೇವೆ. ಎಂಥ ಕಠಿಣ ಸಂದರ್ಭದಲ್ಲೂ ಮಾನವೀಯತೆಯನ್ನು ಮರೆಯದ ಮರೆಯದ ಭಾರತದ ಈ ಸ್ವಭಾವವೇ 'ವಸುಧೈವ ಕುಟುಂಬಕಂ' ಎಂಬ ತತ್ವವನ್ನು ಬಲವಾಗಿ ನಂಬುತ್ತದೆ."
ಸುಷ್ಮಾ ರನ್ನು ಹೊಗಳಿದ ಮೋದಿ
"ವಿದೇಶಾಂಗ ಸಚಿವೆಯಾಗಿ ಸುಷ್ಮಾ ಸ್ವರಾಜ್ ಅವರು ಕೇವಲ ಭಾರತೀಯ ನಾಗರಿಕರ ಸಮಸ್ಯೆಗಷ್ಟೇ ಅಲ್ಲದೆ, ಅನಿವಾಸಿ ಭಾರತೀಯರ, ವಿದೇಶಿಗರ ಸಮಸ್ಯೆಗೂ ಸ್ಪಂದಿಸಸುತ್ತಿದ್ದಾರೆ. ಪ್ರತಿ ಸಮಸ್ಯೆಯ ಕುರಿತೂ ಖುದ್ದು ಆಸ್ಥೆ ವಹಿಸುವ ಅವರ ಆಸಕ್ತಿಗೆ ನಮ್ಮೆಲ್ಲರಿಂದ ಅಭಿನಂದನೆ"
21 ನೇ ಶತಮಾನ ಏಷ್ಯಾದ್ದು!
"21 ನೇ ಶತಮಾನವನ್ನು ಏಷ್ಯಾದ ಶತಮಾನ ಎಂದು ಕರೆಯಲಾಗಿದೆ. ಈ ಹಂತದಲ್ಲಿ ಭಾರತದ ಪಾತ್ರ ಅಪಾರವಾಗಿದೆ. ನಮ್ಮ ಬೆಳವಣಿಗೆಯನ್ನು ಕಂಡು ನೀವು ಹೆಮ್ಮೆ ಪಡಬೇಕಿದೆ. ಅಷ್ಟೇ ಅಲ್ಲ, ನಾವು ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡಲು ನಮಗೆ ಪ್ರೋತ್ಸಾಹ ಮತ್ತು ನೆರವು ನಿಮ್ಮಿಂದ ಬೇಕಿದೆ"
ಯಾರ ಭೂಮಿಯ ಮೇಲೂ ನಾವು ಕಣ್ಣು ಹಾಕಿಲ್ಲ!
"ನಮಗೆ ಯಾರ ಸಂಪನ್ಮೂಲಗಳನ್ನು ಹಾಳುಗೆಡಹುವ ಮನಸ್ಥಿತಿಯಲ್ಲ. ಅಥವಾ ಯಾರದೇ ಭೂಮಿಯ ಮೇಲೆ ನಾವು ಕಣ್ಣುಹಾಕಿಲ್ಲ. ನಮ್ಮ ಗಮನವೇನಿದ್ದರೂ ಸಾಮರ್ಥ್ಯ ಬೆಳೆಸುವುದು ಮತ್ತು ಸಂಪನ್ಮೂಲ ಅಭಿವೃದ್ಧಿ ಅಷ್ಟೆ" ಎಂದು ಸುಖಾ ಸುಮ್ಮನೆ ಭಾರತದ ಮೇಲೆ ದಾಳಿ ನಡೆಸುವ ನೆರೆ ಪಾಕಿಸ್ತಾನ, ಚೀನಾದಂಥ ನೆರೆ ರಾಷ್ಟ್ರಗಳಿಗೆ ಟಾಂಗ್ ನೀಡಿದರು ಮೋದಿ.