ಮೊದಲು ರೋಗಿಗಳಿಗೆ ಆಮ್ಲಜನಕ ನೀಡಿ, ಕೈಗಾರಿಕೆಗಳಿಗಲ್ಲ: ಕೇಂದ್ರಕ್ಕೆ ಹೈಕೋರ್ಟ್ ತರಾಟೆ
ನವದೆಹಲಿ, ಏಪ್ರಿಲ್ 20: ಕೋವಿಡ್ ವಿರುದ್ಧದ ದೆಹಲಿಯ ಹೋರಾಟಕ್ಕೆ ಆಕ್ಸಿಜನ್ ಕೊರತೆ ಮತ್ತು ಸಂಪನ್ಮೂಲ ಹಂಚಿಕೆಯಲ್ಲಿನ ತಾರತಮ್ಯ ಕಾರಣ ಎಂಬ ಆರೋಪಗಳನ್ನು ಪರಿಗಣಿಸಿರುವ ದೆಹಲಿ ಹೈಕೋರ್ಟ್, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಔಷಧಗಳನ್ನು ನಿಜಕ್ಕೂ ತೀರಾ ಅಗತ್ಯ ಇರುವವರಿಗೆ ತಲುಪಿಸದೆ ಇದ್ದರೆ ಅವರ ಕೈಗೆ ರಕ್ತ ಅಂಟಿಕೊಳ್ಳಲಿದೆ ಎಂದು ಕೋರ್ಟ್ ಹೇಳಿದೆ.
ದೆಹಲಿಯಲ್ಲಿ ಸೋಮವಾರ ಒಂದೇ ದಿನ 32 ಸಾವಿರ ಪ್ರಕರಣಗಳು ಪತ್ತೆಯಾಗಿದ್ದವು. ರಾಜಧಾನಿಯಲ್ಲಿ ಆಮ್ಲಜನಕ, ಔಷಧಗಳು, ಲಸಿಕೆ ಡೋಸ್ಗಳು ಮತ್ತು ಹಾಸಿಗೆಗಳ ಕೊರತೆ ಬಿಕ್ಕಟ್ಟು ಹೆಚ್ಚಲು ಕಾರಣವಾಗುತ್ತಿವೆ ಎಂದು ಹೈಕೋರ್ಟ್ಗೆ ದೆಹಲಿ ಸರ್ಕಾರ ತಿಳಿಸಿದೆ.
ಪೆಟ್ರೋಲಿಯಂ ಮತ್ತು ಸ್ಟೀಲ್ನಂತಹ ಕೈಗಾರಿಕೆಗಳಿಗೆ ಬಳಸುತ್ತಿರುವ ಆಕ್ಸಿಜನ್ ಪ್ರಮಾಣವನ್ನು ಕಡಿತಗೊಳಿಸುವ ಮೂಲಕ ಕೋವಿಡ್ ರೋಗಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. 'ಮನುಷ್ಯದ ಜೀವಕ್ಕಿಂತ ಆರ್ಥಿಕ ಹಿತಾಸಕ್ತಿ ಎಂದಿಗೂ ಮುಖ್ಯವಾಗದು. ಇಲ್ಲದೆ ಹೋದರೆ, ನಾವು ವಿನಾಶದತ್ತ ಸಾಗುತ್ತೇವೆ' ಎಂದು ಕೋರ್ಟ್ ತೀಕ್ಷ್ಣವಾಗಿ ಹೇಳಿತು.
'130 ಕೋಟಿ ಜನಸಂಖ್ಯೆಯಲ್ಲಿ 2 ಕೋಟಿಗಿಂತಲೂ ಕಡಿಮೆ ಅಧಿಕೃತ ಪ್ರಕರಣಗಳಿವೆ. ಅದು ಐದು ಪಟ್ಟು ಜಾಸ್ತಿಯಾದರೂ 10 ಕೋಟಿ ಪ್ರಕರಣಗಳಾಗುತ್ತವೆಯಷ್ಟೇ. ನಾವು ಉಳಿದ ಜನರನ್ನು ಕಾಪಾಡಬೇಕು. ಈ ಪ್ರಮಾಣದಲ್ಲಿ ನಾವು ಒಂದು ಕೋಟಿ ಜನರನ್ನು ಕಳೆದುಕೊಳ್ಳಬಹುದು. ನಾವು ವೇಗವಾಗಿ ಕೆಲಸ ಮಾಡಬೇಕು' ಎಂದು ಸರ್ಕಾರಕ್ಕೆ ಸಲಹೆ ನೀಡಿತು.
'ನಾವು ಇಲ್ಲಿ ಸರ್ಕಾರ ನಡೆಸಲು ಇಲ್ಲ. ಆದರೆ ಪರಿಸ್ಥಿತಿಯ ಕುರಿತು ನಿಮ್ಮಲ್ಲಿ ಸಂವೇದನೆ ಇರಬೇಕು. ಔಷಧಗಳ ಲಭ್ಯತೆ ಇದ್ದರೂ ಅದನ್ನು ಎಲ್ಲಿ ಔಷಧದ ಅಗತ್ಯವಿದೆಯೋ ಅಲ್ಲಿಗೆ ಕಳುಹಿಸದೆ ಬೇರೆಡೆ ರವಾನಿಸಲಾಗುತ್ತಿದೆ. ಖಂಡಿತವಾಗಿಯೂ ಅವರ ಕೈಗೆ ರಕ್ತ ಅಂಟಿಕೊಂಡಿದೆ' ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.
'ಕೈಗಾರಿಕೆಗಳು ಬೇಕಾದರೆ ಕಾಯಬಹುದು, ಆದರೆ ರೋಗಿಗಳಲ್ಲ. ಮನುಷ್ಯರ ಜೀವಗಳು ಅಪಾಯದಲ್ಲಿದೆ' ಎಂದು ಕೋರ್ಟ್ ಕಿಡಿಕಾರಿತು.