ದ್ವೇಷ ಭಾಷಣ: ಗಾಂಧಿ ಕುಟುಂಬದ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸೂಚನೆ
ನವದೆಹಲಿ, ಫೆಬ್ರವರಿ 28: ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ಮಂದಿ ರಾಜಕೀಯ ಮುಖಂಡರ ಮೇಲೆ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸುವಂತೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮನೀಷ್ ಸಿಸೋಡಿಯಾ, ಐಎಂಇಐ ಅಕ್ಬರುದ್ದೀನ್ ಓವೈಸಿ, ವಕೀಲ ಮೆಹಬೂಬ್ ಪ್ರಾಚಾ ಅವರುಗಳ ವಿರುದ್ಧ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.
ಇಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ದೆಹಲಿ ಪೊಲೀಸ್ ಹಾಗೂ ಕೇಂದ್ರ ಸರ್ಕಾರಕ್ಕೆ ನೊಟೀಸ್ ನೀಡಿದ್ದು, ಎಫ್ಐಆರ್ ದಾಖಲೆ ಸಂಬಂಧಿಸುವಂತೆ ಸೂಚಿಸಿದೆ.
ಎಫ್ಐಆರ್ ದಾಖಲು ಮಾತ್ರವಲ್ಲದೆ, ವಿಶೇಷ ತನಿಖಾ ತಂಡವೊಂದನ್ನು ರಚಿಸಿ ಪ್ರಕರಣದ ತನಿಖೆ ನಡೆಸುವಂತೆಯೂ ನೊಟೀಸ್ನಲ್ಲಿ ಹೇಳಲಾಗಿದೆ.
ದ್ವೇಷ ಭಾಷಣದ ಬಗ್ಗೆ ಸೋನಿಯಾ ಗಾಂಧಿ ಅವರ ಮೇಲೆ ಎಫ್ಐಆರ್ ದಾಖಲಿಸುತ್ತಿರುವುದು ಹಲವರಿಗೆ ಸೋಜಿಗ ತಂದಿದೆ. ಸೋನಿಯಾ ಗಾಂಧಿ ಅವರು ವೇದಿಕೆ ಭಾಷಣಗಳನ್ನು ಮಾಡುವುದೇ ಅಪರೂಪ, ಅಂತಹುದರಲ್ಲಿ ಅವರ ವಿರುದ್ಧ ದ್ವೇಷ ಭಾಷಣದ ಆರೋಪ ಮಾಡಲಾಗಿದೆ.