ದೆಹಲಿಯ ಆಕ್ಸಿಜನ್ ಘಟಕ ಸ್ವಾಧೀನಪಡಿಸಿಕೊಳ್ಳಲು ಹೈಕೋರ್ಟ್ ಆದೇಶ
ನವದೆಹಲಿ, ಏಪ್ರಿಲ್ 27: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮಧ್ಯೆದಲ್ಲೂ ಆಕ್ಸಿಜನ್ ಸಿಲಿಂಡರ್ ಅನ್ನು ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ದೆಹಲಿಯ ಪ್ರಮುಖ ಆಕ್ಸಿಜನ್ ತುಂಬುವ ಘಟಕವನ್ನು ವಶಕ್ಕೆ ಪಡೆಯುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಮಹಾರಾಜ ಅಗ್ರಸೇನಾ ಆಸ್ಪತ್ರೆ ಮತ್ತು ಮಹಾದುರ್ಗಾ ಚಾರಿಟೇಬಲ್ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳು ದೆಹಲಿಯ ಪ್ರಮುಖ ಆಕ್ಸಿಜನ್ ತುಂಬುವ ಘಟಕ ಸೇಠ್ ಏರ್ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದವು. ಈ ಆಕ್ಸಿಜನ್ ಘಟಕದಿಂದ ತಮ್ಮ ಆಸ್ಪತ್ರೆಗೆ ಯಾವುದೇ ಆಮ್ಲಜನಕ ಪೂರೈಕೆ ಆಗುತ್ತಿಲ್ಲ ಎಂದು ದೂರಿದ್ದವು.
ಕೋವಿಡ್ 19: ಕರ್ನಾಟಕ ಸೇರಿ 10 ರಾಜ್ಯಗಳಿಂದ ಶೇ.69.1ರಷ್ಟು ಹೊಸ ಪ್ರಕರಣ
ಸೇಠ್ ಏರ್ ಆಕ್ಸಿಜನ್ ಘಟಕವು 20 ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಸುವ ಸಾಮರ್ಥ್ಯವಿದೆ. ಆದರೆ ಕೇವಲ 2.4 ಮೆಟ್ರಿಕ್ ಟನ್ ಆಕ್ಸಿಜನ್ ಮಾತ್ರ ಪೂರೈಸಲಾಗುತ್ತಿದ್ದು, ಉಳಿದ ಆಮ್ಲಜನಕವನ್ನು ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.
ಸೇಠ್ ಏರ್ ಆಕ್ಸಿಜನ್ ಘಟಕ ವಶಕ್ಕೆ ನಿರ್ದೇಶನ:
ನವದೆಹಲಿಯ ಹಲವು ಆಸ್ಪತ್ರೆಗಳಿಗೆ ಆಮ್ಲಜನಕವನ್ನು ಪೂರೈಸಲಾಗುತ್ತಿದೆ ಎಂಬ ವಕೀಲರ ವಾದವನ್ನು ಹೈಕೋರ್ಟ್ ತಳ್ಳಿ ಹಾಕಿದೆ. ಬಹುಶಃ ಸೇಠ್ ಏರ್ ಆಕ್ಸಿಜನ್ ಘಟಕ ಬೇರೆ ಕಡೆಗಳಲ್ಲಿ ಎಂದರೆ ಕಪ್ಪು ಮಾರುಕಟ್ಟೆಯಲ್ಲಿ ಅವುಗಳನ್ನು ಮಾರಾಟ ಮಾಡುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ಕೋರ್ಟ್ ಹೇಳಿದೆ. ಇದರ ಜೊತೆ ಕಾರ್ಮಿಕರ ಸಮೇತರಾಗಿ ಆಮ್ಲಜನಕ ಘಟಕವನ್ನು ವಶಕ್ಕೆ ಪಡೆಯುವಂತೆ ಕೋರ್ಟ್ ನಿರ್ದೇಶನ ನೀಡಿದೆ.
ಸೇಠ್ ಏರ್ ಆಮ್ಲಜನಕ ಘಟಕವನ್ನು ದೆಹಲಿ ಸರ್ಕಾರವೇ ನಡೆಸುವಂತೆ ಕೋರ್ಟ್ ನಿರ್ದೇಶನ ನೀಡಿದೆ. "ಒಂದು ವೇಳೆ ನಿಮ್ಮಿಂದ ಅದನ್ನು ನಡೆಸಲು ಸಾಧ್ಯವಾಗದಿದ್ದರೆ ನಮಗೆ ತಿಳಿಸಿ. ನಾವು ಕೇಂದ್ರ ಸರ್ಕಾರಕ್ಕೆ ಘಟಕವನ್ನು ನಡೆಸಲು ಸೂಚನೆ ನೀಡುತ್ತೇವೆ" ಎಂದು ಕೋರ್ಟ್ ತಿಳಿಸಿದೆ.