'ದೇವಮಾನವನಿಂದ ಅಪ್ರಾಪ್ತರ ಮೇಲೆ ರೇಪ್', ಸಿಬಿಐನಿಂದ ತನಿಖೆ
ನವದೆಹಲಿ, ಡಿಸೆಂಬರ್ 20: ಇಲ್ಲಿನ ರೋಹಿಣಿ ವಿಜಯ್ ವಿಹಾರದ ಆಶ್ರಮವೊಂದರಲ್ಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ದೆಹಲಿ ಹೈಕೋರ್ಟ್ ಬುಧವಾರದಂದು ಈ ಆದೇಶ ನೀಡಿದೆ.
ವಿಜಯ್ ವಿಹಾರ್ ನಲ್ಲಿರುವ ಆಧ್ಯಾತ್ಮಿಕ್ ವಿಶ್ವ ವಿದ್ಯಾಲಯ ಆಶ್ರಮದ ಮೇಲೆ ದಾಳಿ ನಡೆಸಿದ್ದ ದೆಹಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು.
ಬಾಬಾರವರು ಆಶ್ರಮದಲ್ಲಿ ಅಪ್ರಾಪ್ತರ ಮೇಲೆ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಬಾಬಾ ವೀರೇಂದ್ರ ದೇವ್ ದೀಕ್ಷಿತ್ ಜೊತೆಗೆ ಮಹಿಳೆ ಮತ್ತು ಕಾವಲುಗಾರರನ್ನು ಆಶ್ರಮದಿಂದ ಬಂಧಿಸಲಾಗಿದೆ.
ಆಶ್ರಮದ ಕೊಠಡಿಯಲ್ಲಿದ್ದ ಕೆಲ ಔಷಧಿಗಳನ್ನು ಮತ್ತು ಸಿರೇಂಜ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಎಫ್ಐಆರ್ ದಾಖಲಿಸಲಾಗಿದ್ದು,
ತನಿಖೆ ಜಾರಿಯಲ್ಲಿದೆ ಎಂದು ಪೊಲೀಸರು ಹೇಳಿದ್ದರು.
ಆದರೆ, ದೆಹಲಿ ಮಹಿಳಾ ಆಯೋಗದ ಅಧ್ಯಕ್ಷ ಸ್ವಾತಿ ಮಾಲಿವಾಲ್ ಅವರು ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿ ಹೆಚ್ಚಿನ ತನಿಖೆಗಾಗಿ ಮನವಿ ಮಾಡಿಕೊಂಡಿದ್ದರು.
75 ವರ್ಷ ವಯಸ್ಸಿನ ವೀರೇಂದ್ರ ದೇವ್ ದೀಕ್ಷಿತ್ ಅವರು ದೇಶದ ಹಲವೆಡೆ ಆಶ್ರಮಗಳನ್ನು ಹೊಂದಿದ್ದು, 16 ಸಾವಿರಕ್ಕೂ ಅಧಿಕ ಯುವತಿಯರನ್ನು ಆಶ್ರಮದಲ್ಲಿರಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದ. 1970ರಿಂದ ಆಶ್ರಮವನ್ನು ನಡೆಸುತ್ತಿದ್ದು, ದಿನವೊಂದಕ್ಕೆ 10 ಅಪ್ರಾಪ್ತರ ಮೇಲೆ ಬಲಾತ್ಕಾರ ಮಾಡುತ್ತಿದ್ದ ಎಂದು ಎನ್ ಜಿಒ ಆರೋಪಿಸಿದೆ.