ತೊಂದರೆಗೊಳಗಾಗಿರುವ ರಾಜ್ಯಗಳಿಗೆ ಮುಂದಿನ ವಾರದೊಳಗೆ ಮತ್ತಷ್ಟು ಲಸಿಕೆ: ಕೇಂದ್ರ
ನವದೆಹಲಿ, ಏಪ್ರಿಲ್ 18: ಕೊರೊನಾ ಸೋಂಕಿನಿಂದ ಅತಿ ಹೆಚ್ಚು ತೊಂದರೆಗೊಳಗಾಗಿರುವ ರಾಜ್ಯಗಳಿಗೆ ಮುಂದಿನ ವಾರದೊಳಗೆ ಮತ್ತಷ್ಟು ಸಿಕೆಯನ್ನು ವಿತರಿಸಲಾಗುವುದು ಎಂದು ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.
ಕೊರೊನಾ ಸೋಂಕು ದೇಶದಲ್ಲಿ ತೀವ್ರವಾಗಿ ಏರಿಕೆಯಾಗುತ್ತಿದೆ, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಕೇರಳ, ಪಶ್ಚಿಮ ಬಂಗಾಳ, ದೆಹಲಿ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶದಲ್ಲಿನ ಪರಿಸ್ಥಿತಿ ಕುರಿತು ಸರ್ಕಾರ ಪರಾಮರ್ಶೆ ನಡೆಸಿದೆ.
ಸರ್ಕಾರದ ಬಳಿ ಈಗ 1.50 ಕೋಟಿ ಡೋಸ್ ಲಸಿಕೆಗಳು ಲಭ್ಯವಿದೆ, ಇನ್ನೂ 1.7 ಕೋಟಿ ಡೋಸ್ ಲಸಿಕೆಗಳನ್ನು ಮುಂದಿನ ವಾರದೊಳಗೆ ನೀಡಲಾಗುವುದು. ಪ್ರತಿ ಸಣ್ಣ ರಾಜ್ಯಗಳಿಗೂ ಅವುಗಳ ಪಾಲನ್ನು 7 ದಿನಗಳಿಗೆ ಒಂದು ಬಾರಿಯಂತೆ ಕಳುಹಿಸಿಕೊಡಲಾಗುತ್ತದೆ, ದೊಡ್ಡ ರಾಜ್ಯಗಳಿಗೆ ನಾಲ್ಕು ದಿನಗಳಿಗೊಮ್ಮೆ ಕಳುಹಿಸಿಕೊಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯಗಳ ಜತೆ ಮಾತುಕತೆ ನಡೆಸಿದ ಅವರು ಈವರೆಗೆ ಕೇಂದ್ರ ಸರ್ಕಾರವು 14.15 ಕೋಟಿ ಡೋಸ್ ಕೊರೊನಾ ಲಸಿಕೆ ಕಳುಹಿಸಿಕೊಟ್ಟಿದೆ, ಅದರಲ್ಲಿ 12.57 ಕೋಟಿ ಡೋಸ್ ಬಳಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸೋಂಕು ನಿಯಂತ್ರಣಕ್ಕೆ ಕನಿಷ್ಠ ಎರಡು ತಿಂಗಳಾದರೂ ನಿರ್ಬಂಧ ಅತ್ಯಗತ್ಯ; ಕೋವಿಡ್ ಕಾರ್ಯಪಡೆ
ಇದರ ನಡುವೆ ಮಹಾರಾಷ್ಟ್ರಕ್ಕೆ 1121, ಉತ್ತರ ಪ್ರದೇಶಕ್ಕೆ 1700, ಜಾರ್ಖಂಡ್ಗೆ 1500, ಗುಜರಾತ್ಗೆ 1600, ಮಧ್ಯಪ್ರದೇಶಕ್ಕೆ 152 ಹಾಗೂ ಛತ್ತೀಸ್ಗಢಕ್ಕೆ 230 ವೆಂಟಿಲೇಟರ್ಗಳನ್ನು ಪರೈಸುವುದಾಗಿಯೂ ಹರ್ಷವರ್ಧನ್ ಭರವಸೆ ನೀಡಿದ್ದಾರೆ.
ಎಲ್ಲಾ ರಾಜ್ಯಗಳು ಆಮ್ಲಜನಕ ಹಾಗೂ ರೆಮ್ಡಿಸಿವಿರ್ ಕೊರತೆ ವಿಷಯ ಪ್ರಸ್ತಾಪಿಸಿದ್ದವು, ಇವರೆಡರ ಉತ್ತಮ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳು ಸಭೆಯಲ್ಲಿ ಅವರಿಗೆ ಮಾಹಿತಿ ನೀಡಿದ್ದಾರೆ.
ಕೊರೊನಾ ಸೋಂಕು ತೀವ್ರವಾಗಿ ಹೆಚ್ಚಳವಾಗುತ್ತಿರುವ ಮಹಾರಾಷ್ಟ್ರ, ರಾಜಸ್ಥಾನ, ಕೇರಳ, ಪಶ್ಚಿಮಬಂಗಾಳ, ಮಧ್ಯಪ್ರದೇಶ, ಗುಜರಾತ್, ದೆಹಲಿ, ತಮಿಳುನಾಡು, ಉತ್ತರ ಪ್ರದೇಶದಲ್ಲಿನ ಸ್ಥಿತಿಗತಿಗಳ ಕುರಿತು ಚರ್ಚೆ ನಡೆಸಿದರು.